
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಫೆ.21): ಕಾಳ ಸಂತೆಕೋರರ ಪರವಾಗಿ ಕಾಂಗ್ರೆಸ್ ಲಾಬಿ ಮಾಡುತ್ತಿರಬಹುದು ಅದಕ್ಕಾಗಿ ಕೇಂದ್ರದ ಭಾರತ್ ಬ್ರ್ಯಾಂಡ್ ಅಕ್ಕಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಸಿ.ಟಿ.ರವಿ ಆರೋಪಿಸಿದ್ದಾರೆ.
ಭಾರತ್ ಬ್ರ್ಯಾಂಡ್ ಅಕ್ಕಿ ಕಳಪೆಯದ್ದಾಗಿದೆ ಎನ್ನುವ ಸಚಿವ ಕೆ.ಹೆಚ್.ಮುನಿಯಪ್ಪ ಅವರ ಆರೋಪಕ್ಕೆ ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಿಮ್ಮ ಯೋಗ್ಯತೆಗೆ ಒಂದು ಕೆಜಿ ಅಕ್ಕಿ ಕೊಡಲು ಆಗುತ್ತಿಲ್ಲ. ಈಗ ಕೇಂದ್ರದ ಅಕ್ಕಿ ಕಳಪೆ ಎನ್ನುತ್ತಿದ್ದೀರಿ, ಇಂದು ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ 80 ರಿಂದ 100 ರೂ. ಆಗಿದೆ. ಬೆಲೆ ನಿಯಂತ್ರಣ ಮಾಡಬೇಕು, ಮಧ್ಯವರ್ತಿಗಳು, ಕಾಳಸಂತೆಯಲ್ಲಿ ವ್ಯಾಪಾರ ಮಾಡುವಂತಹವರು ದಾಸ್ತಾನಿಟ್ಟುಕೊಂಡು ಬೆಲೆ ಏರಿಕೆಗೆ ಕಾರಣವಾಗಬಾರದು ಎನ್ನುವ ಕಾರಣಕ್ಕಾಗಿ ಭಾರತ್ ಬ್ರ್ಯಾಂಡ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ಪರಿಣಾಮ ಅಕ್ಕಿ ಬೆಲೆ ನಿಯಂತ್ರಣಕ್ಕೆ ಬಂದಿದೆ ಎಂದರು.
ಕಾಡಾನೆ ದಾಳಿಗೆ ಸಾವನ್ನಪ್ಪಿದ ಕೇರಳ ವ್ಯಕ್ತಿಗೆ ಕೆಪಿಸಿಸಿಯಿಂದ 15 ಲಕ್ಷ ಪರಿಹಾರ ಕೊಡಿ: ಸಿಟಿ ರವಿ ಆಕ್ರೋಶ
ಒಬ್ಬ ಗ್ರಾಹಕ ಕೂಡ ಕಳಪೆ ಎಂದು ಹೇಳಿಲ್ಲ :
ಕಾಳ ಸಂತೆಕೋರರ ಪರವಾಗಿ ಲಾಬಿ ಮಾಡದೇ ಇದ್ದರೆ ಮಾರುಕಟ್ಟೆಯಲ್ಲಿ 29 ರೂ.ಗೆ ಯಾವ ಅಕ್ಕಿಯೂ ಸಿಗುವುದಿಲ್ಲ ಅದಕ್ಕಾಗಿ ಕಾಂಗ್ರೆಸಿಗರು ಭಾರತ್ ಬ್ರ್ಯಾಂಡ್ ಕಳಪೆ ಎಂದು ಹೇಳುತ್ತಿದ್ದಾರೆ. ಇಂದಿನ ವರೆಗೆ ಒಬ್ಬ ಗ್ರಾಹಕ ಕೂಡ ಕಳಪೆ ಎಂದು ಹೇಳಿಲ್ಲ. ಇವರು ಯಾಕೆ ಹೇಳುತ್ತಿದ್ದಾರೆ. ಇವರೇನು ಖರೀದಿ ಮಾಡಿದ್ದಾರ ಎಂದು ಪ್ರಶ್ನಿಸಿದರು.
ಇಡೀ ದೇಶದಲ್ಲಿ ಭಾರತ್ ಬ್ರ್ಯಾಂಡ್ ಮಾರಾಟವಾಗುತ್ತಿದೆ. ಅಲ್ಲೆಲ್ಲೂ ಗ್ರಾಹಕರಿಂದ ದೂರು ಬಂದಿಲ್ಲ ಮುನಿಯಪ್ಪ ಅವರಿಗೆ ಏಕೆ ದೂರು ಬಂತು. ಬಹುಷಃ ಯಾವುದೋ ಲಾಬಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಭಾರತ್ ಬ್ರ್ಯಾಂಡ್ ಅಕ್ಕಿಯನ್ನ ಮಾರುಕಟ್ಟೆಯಿಂದ ಹೊರಕ್ಕೆ ತಳ್ಳುವ ಲಾಬಿ ಕೆಲಸ ಮಾಡುತ್ತಿದೆ. ಅದರ ಪರವಾಗಿ ಕಾಂಗ್ರೆಸ್ ಇದೆ. ಈ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ ಎನ್ನುವ ಅನುಮಾನ ಬರುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ತಪ್ಪು ನಿರ್ಧಾರದಿಂದ ದೇಶದಲ್ಲಿ ಆರ್ಥಿಕ ಸಂಕಷ್ಟ: ಸಚಿವ ಕೆ.ಜೆ.ಜಾರ್ಜ್
ಅನ್ನ ಭಾಗ್ಯದ ಅಕ್ಕಿ ಎಲ್ಲಿ ಕೊಟ್ಟಿದ್ದೀರಿ, ಕೇಂದ್ರ ಸರ್ಕಾರ ಕೊಡುತ್ತಿರುವ ೫ ಕೆಜಿ ಅಕ್ಕಿಯಲ್ಲೇ ಕಡಿತ ಮಾಡಿದ್ದೀರಿ, ಮೋದಿ ಅವರು ಕೊಡುತ್ತಿರುವ ಅಕ್ಕಿ ಬಿಟ್ಟರೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹತ್ತು ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರಲ್ಲ ೧೦ ಗ್ರಾಂ ಅಕ್ಕಿಯನ್ನಾದರೂ ಕೊಡುತ್ತೀದ್ದೀರಾ ಎಂದು ಪ್ರಶ್ನಿಸಿದರು.
ಆಂಧ್ರ, ತೆಲಂಗಾಣ, ಛತ್ತೀಸ್ಗಡದೊಂದಿಗೆ ಮಾತನಾಡಿದ್ದೇವೆ, ಅವರು ಕೊಡುತ್ತಾರೆ, ಇವರು ಕೊಡುತ್ತಾರೆ ಎಂದು ಜನರ ಕಿವಿಗೆ ಹೂವು ಮುಡಿಸುತ್ತೀದ್ದೀರಲ್ಲ ಎಲ್ಲಿ ನಿಮ್ಮ ಅಕ್ಕಿ ಎಂದರು.ಬಿಜೆಪಿ ಸರ್ಕಾರ ಇದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಕಿವಿಗೆ ಹೂವು ಮುಡಿದು ಪ್ರತಿಭಟನೆ ಮಾಡಿದ್ದರು. ಈಗ ಯಾರ ಕಿವಿಗೆ ಹೂವು ಮುಡಿಸುತ್ತೀರಿ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.