ಚಿಕ್ಕಮಗಳೂರು: ಬಿಜೆಪಿ ಟಿಕೆಟ್‌ಗಾಗಿ ಅಭಿಮಾನಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ..!

By Girish GoudarFirst Published Jan 7, 2023, 11:26 PM IST
Highlights

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗಾಗಿ ಭಾರೀ ಪೈಪೋಟಿ. 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಜ.07): ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ರಾಜಕಾರಣಿಗಳೂ ಕೂಡ ನಾನಾ ರೀತಿ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಅಭಿಮಾನಿಗಳು ತಮ್ಮ ನೆಚ್ವಿನ ನಾಯಕನಿಗೆ ಟಿಕೆಟ್ ಸಿಗಲಿ ಎಂದು ಹರಕೆ ಹೊತ್ತು ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. 

ಮೀಸಲು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಪೈಪೋಟಿ : 

ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಪ್ರಸ್ತುತ ಬಿಜೆಪಿಯ ಎಂ.ಪಿ. ಕುಮಾರಸ್ವಾಮಿ ಶಾಸಕರಾಗಿದ್ದಾರೆ.  ಕುಮಾರಸ್ವಾಮಿಯವರು ಕಾಂಗ್ರೆಸ್ ಹೋಗುತ್ತಾರೆ, ಜೆಡಿಎಸ್ ಸೇರುತ್ತಾರೆ ಎಂಬೆಲ್ಲಾ ಸುದ್ದಿಗಳು ಹರಿದಾಡುತ್ತಿವೆ.  ಆದರೆ, ಶಾಸಕ ಕುಮಾರಸ್ವಾಮಿಯವರು ಈ ಎಲ್ಲಾ ಊಹಾಪೋಹಗಳನ್ನ ತಳ್ಳಿ ಹಾಕಿದ್ದಾರೆ. ಈ ಮಧ್ಯೆ ಮೂಡಿಗೆರೆಯಲ್ಲಿ ಕುಮಾರಸ್ವಾಮಿ ಜೊತೆ ಟಿಕೆಟ್‌ಗಾಗಿ ಹಲವರು ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಅವರಲ್ಲಿ ದೀಪಕ್ ದೊಡ್ಡಯ್ಯ ಹಾಗೂ ವಿಜಯ್ ಕುಮಾರ್ ಇಬ್ಬರು ಕೂಡ. ಶಾಸಕ ಕುಮಾರಸ್ವಾಮಿ ಜೊತೆ ಈ ಇಬ್ಬರೂ ಟಿಕೆಟ್‌ಗಾಗಿ ಫೈಟ್ ಮಾಡುತ್ತಿದ್ದಾರೆ.

CT Ravi: ಅಟಲ್‌ಜೀ, ಮೋದಿಯವರಂತೆ ಭಾರತವನ್ನು ಮುನ್ನಡೆಸುವ ಗುಣ ಬೆಳೆಸಿಕೊಳ್ಳಿ: ಸಿ.ಟಿ.ರವಿ

100 ಕಿ.ಮೀ. ದೂರದ ಧರ್ಮಸ್ಥಳಕ್ಕೆ ಪಾದಯಾತ್ರೆ : 

ಬಿಜೆಪಿ ನಡೆಯುತ್ತಿರುವ ಟಿಕೆಟ್ ಪೈಪೋಟಿ ನಡುವೆ ವಿಜಯ ಕುಮಾರ್ ಅಭಿಮಾನಿಗಳು ವಿಜಯ್ ಕುಮಾರ್ ಗೆ ಟಿಕೆಟ್ ಸಿಗಲಿ ಎಂದು ಹರಕೆ ಹೊತ್ತು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮೂಡಿಗೆರೆ ತಾಲೂಕಿನ ಹಾಂದಿ‌ ಗ್ರಾಮದ ಸುನೀಲ್, ನಾಗೇಂದ್ರ, ನಕೀತ್, ಅವಿನಾಶ್, ನವೀನ್, ಸುನೀಲ್, ಬಕ್ಕಿ ಅವಿನಾಶ್ ಸೇರಿದಂತೆ ಹಲವರು ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ ಮೂರು ಪಕ್ಷದಲ್ಲೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಒಂದೊಂದು ನಾಲ್ಕೈದು ಜನ ನನಗೆ ಟಿಕೆಟ್ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಅವರ ಜೊತೆ ಅಭಿಮಾನಿಗಳು ಕೂಡ ಟಿಕೆಟ್ ಗಾಗಿ ಭಾರೀ ಲಾಭಿ ನಡೆಸುತ್ತಿದ್ದಾರೆ.

ಬಿಜೆಪಿ-ಕಾಂಗ್ರೆಸ್ಸಿನ ಫೈಟ್ ಜೋರಿದೆ. ಹಾಗಾಗಿ, ಬಿಜೆಪಿ ಟಿಕೆಟ್ ಆಕಾಂಕ್ಷಿ ಬಿ.ಆರ್.ವಿಜಯ್ ಕುಮಾರ್ ಅಭಿಮಾನಿಗಳು ಟಿಕೆಟ್ ಸಿಗಲಿ ಎಂದು ಹಾಂದಿ‌ ಗ್ರಾಮದಿಂದ ಸುಮಾರು 100 ಕಿ.ಮೀ. ದೂರದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಧರ್ಮಸ್ಥಳಕ್ಕೆ ಹೋಗಿ ವಿಜಯ್ ಕುಮಾರ್ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿ ಎಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

click me!