
ಬೆಂಗಳೂರು(ಆ.23): ‘ಕುಮಾರಸ್ವಾಮಿ ಅವರೇ ನೀವು ಒಂದು ಮನೆ ಇಟ್ಟುಕೊಂಡು ಹೊರಗೆ ಏನೇನ್ ಮಾಡಿದ್ದೀರಾ ಅಂತ ಬಾಯಿ ಬಿಡಲಾ?, ನಾನು ನಿಮ್ಮ ರೀತಿ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ. ನೀವು ಸಿದ್ದರಾಮಯ್ಯ ಅವರಿಗಿಂತ ಮೊದಲು ನನ್ನನ್ನು ಎದುರಿಸಿ’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ರಾಮನಗರ ಜಿಲ್ಲೆಯ ಜನರಿಗೆ ಎಷ್ಟು ಮನೆಗಳನ್ನು ಮಂಜೂರು ಮಾಡಿದ್ದಾರೆ ಎಂದು ನಾನು ಕೇಳಿದ್ದಕ್ಕೆ ನನ್ನ ಕೇಳೋದಕ್ಕೆ ಅವನು ಯಾರು, ಒಂದು ನಂಬರ್ನಲ್ಲಿ ಎರಡು ಬಸ್ ಓಡಿಸುತ್ತಿದ್ದವನು ಎಂದು ಟೀಕಿಸಿದ್ದೀರಿ. ನಾನು ಅಂತಹವನಾಗಿದ್ದರೆ 2017ರ ವರೆಗೆ ನನ್ನನ್ನು ಯಾಕೆ ನಿಮ್ಮ ಜೊತೆ ಇಟ್ಟುಕೊಂಡಿದ್ದಿರಿ. ಅಂತಹ ಆರೋಪವಿದ್ದ ಪ್ರಕರಣ ನನ್ನದಲ್ಲ, ನನ್ನ ಚಿಕ್ಕಪ್ಪನದ್ದು. ಈಗಾಗಲೇ ಕೋರ್ಟ್ನಲ್ಲಿ ಕ್ಲೀನ್ ಚೀಟ್ ಪಡೆದುಕೊಂಡಿದ್ದೀನಿ’ ಎಂದು ಹೇಳಿದರು.
ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಹೈಕಮಾಂಡ್ ನಿರ್ಧಾರ: ಸಚಿವ ಜಮೀರ್ ಅಹ್ಮದ್
‘ಬಾಯಿ ಬಿಟ್ಟರೆ ಧಮ್ಕಿ ಹಾಕುವುದು, ಬ್ಲಾಕ್ ಮೇಲ್ ಮಾಡೋದು. ಇದು ಎಷ್ಟು ದಿನ ನಡೆಯುತ್ತೆ ಕುಮಾರಸ್ವಾಮಿ ಅವರೇ?’ ಎಂದರು.
ನೀವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮೊದಲು ನನ್ನನ್ನು ಎದುರಿಸಿ. ನಾನು ನಿಮ್ಮ ಹಾಗೆ ಕಾನೂನು ಬಾಹಿರ ಕೆಲಸಗಳನ್ನು ಮಾಡಿಲ್ಲ. ನೀವು ಏನೇನು ಮಾಡಿದ್ದೀರಾ ಹೇಳಲಾ? ಒಂದು ಮನೆ ಇಟ್ಟುಕೊಂಡು ಹೊರಗೆ ಏನ್ ಮಾಡಿದ್ದೀರಾ ಬಾಯಿ ಬಿಡಲಾ? ಇವೆಲ್ಲಾ ಬೇಡ’ ಎಂದು ಎಚ್ಚರಿಕೆ ನೀಡಿದರು.
‘ಸರ್ಕಾರದ ಕುತಂತ್ರದಿಂದ ಲೋಕಾಯುಕ್ತ ಎಸ್ಐಟಿ ತಮ್ಮ ವಿರುದ್ಧ ರಾಜ್ಯಪಾಲರಿಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಪ್ರಾಸಿಕ್ಯೂಷನ್ಗೆ ಅನುಮತಿ ಕೇಳಿರೋದು ಸರ್ಕಾರಲ್ಲ. ಎಸ್ಐಟಿಯವರು ಕಳೆದ ನವೆಂಬರ್ನಲ್ಲೇ ಅನುಮತಿ ಕೋರಿ ಪತ್ರ ಬರೆದಿದ್ದಾರೆ. ಇದಕ್ಕೆ ಸರ್ಕಾರ, ಸಿದ್ದರಾಮಯ್ಯ ಅವರನ್ನು ಯಾಕೆ ಮಧ್ಯ ಎಳೆದು ತರುತ್ತೀರಿ? ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ದೂರು ಆಧರಿಸಿ ತರಾತುರಿಯಲ್ಲಿ ವಿವೇಚನಾರಹಿತವಾಗಿ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ ರಾಜ್ಯಪಾಲರು ಕುಮಾರಸ್ವಾಮಿ ವಿರುದ್ಧ ಎಸ್ಐಟಿಯವರು ತನಿಖಾ ವರದಿ ಆಧರಿಸಿ ಕೇಳಿದರೂ ಯಾಕೆ ಅನುಮತಿ ಕೊಟ್ಟಿಲ್ಲ. ಇದನ್ನು ನಾವು ಪ್ರಶ್ನಿಸುತ್ತಿದ್ದೇವೆ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಯಾವ ನೈತಿಕತೆಯೂ ಇಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಯಾವ ಪಾತ್ರವೂ ಇಲ್ಲ. ರಾಜೀನಾಮೆ ಕೊಡಬೇಕಾದವರು ಸಿದ್ದರಾಮಯ್ಯ ಅವರಲ್ಲ ಕುಮಾರಸ್ವಾಮಿ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.