ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿ.ಸೋಮಣ್ಣ

By Kannadaprabha NewsFirst Published Aug 13, 2023, 8:06 PM IST
Highlights

ತನಿಖೆ ನೆಪದಲ್ಲಿ ಗುತ್ತಿಗೆದಾರರಿಗೆ ಬರಬೇಕಾಗಿರುವ ಸಾವಿರಾರು ಕೋಟಿ ರುಪಾಯಿ ಬಿಲ್ಲನ್ನು ತಡೆಹಿಡಿದಿರುವುದು ಸಮಂಜಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ವಿ.ಸೋಮಣ್ಣ, ಅವ್ಯವಹಾರ ನಡೆದಿದ್ದರೆ ನನ್ನ ಹಿಂದಿನ ಗೋವಿಂದರಾಜನಗರ ಕ್ಷೇತ್ರದಿಂದಲೇ ತನಿಖೆ ಆರಂಭಿಸಲಿ ಎಂದು ಸವಾಲು ಹಾಕಿದ್ದಾರೆ.

ಬೆಂಗಳೂರು (ಆ.13): ತನಿಖೆ ನೆಪದಲ್ಲಿ ಗುತ್ತಿಗೆದಾರರಿಗೆ ಬರಬೇಕಾಗಿರುವ ಸಾವಿರಾರು ಕೋಟಿ ರುಪಾಯಿ ಬಿಲ್ಲನ್ನು ತಡೆಹಿಡಿದಿರುವುದು ಸಮಂಜಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ವಿ.ಸೋಮಣ್ಣ, ಅವ್ಯವಹಾರ ನಡೆದಿದ್ದರೆ ನನ್ನ ಹಿಂದಿನ ಗೋವಿಂದರಾಜನಗರ ಕ್ಷೇತ್ರದಿಂದಲೇ ತನಿಖೆ ಆರಂಭಿಸಲಿ ಎಂದು ಸವಾಲು ಹಾಕಿದ್ದಾರೆ. ವಿಜಯನಗರದಲ್ಲಿನ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾಡಿದ ಅವರು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೇವಲ ಕಾಂಗ್ರೆಸ್‌ ಪಕ್ಷಕ್ಕೆ ಮಾತ್ರ ಉಪಮುಖ್ಯಮಂತ್ರಿಯಲ್ಲ.

ರಾಜ್ಯದ ಆರು ಕೋಟಿ ಜನರ ಉಪಮುಖ್ಯಮಂತ್ರಿಯಾಗಿದ್ದಾರೆ. ಗುತ್ತಿಗೆದಾರರಿಗೆ ನೀಡಬೇಕಾಗಿರುವ ಸಾವಿರಾರು ಕೋಟಿ ರು. ಬಿಲ್ಲನ್ನು ತನಿಖೆ ನೆಪದಲ್ಲಿ ತಡೆಹಿಡಿಯುವುದು ಸರಿಯಲ್ಲ. ಕಳೆದ ಮೂರು ತಿಂಗಳ ಹಿಂದೆ ಪ್ರಾಮಾಣಿಕರಾಗಿದ್ದ ಗುತ್ತಿಗೆದಾರರು ಈಗ ಅಪ್ರಾಮಾಣಿಕರಾಗಿದ್ದಾರೆಯೇ? ಎಂದು ಕಿಡಿಕಾರಿದರು. ನನ್ನ ಹಿಂದಿನ ಗೋವಿಂದರಾಜನಗರ ಕ್ಷೇತ್ರದಲ್ಲಿ ಹೇಳುವುದಾದರೆ 70 ಕಟ್ಟಡಗಳು, 100 ಉದ್ಯಾನವನಗಳು, ಆಸ್ಪತ್ರೆಗಳು, ಕುಡಿಯುವ ನೀರಿನ ಘಟಕಗಳು ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. 

Latest Videos

ಬಿಜೆಪಿ ಅಧ್ಯಕ್ಷ ಹುದ್ದೆ ಕೇಳಿದ್ದೇನೆ, ಕೊಟ್ಟರೆ ಮಜಾನೇ ಬೇರೆ: ವಿ.ಸೋಮಣ್ಣ

ಅಕ್ರಮ ನಡೆದಿದೆ ಎನ್ನಿಸಿದರೆ ಇಲ್ಲಿಂದಲೇ ತನಿಖೆ ಆರಂಭಿಸಿ, ನಾನು ಅದಕ್ಕೆ ಸಿದ್ಧನಿದ್ದು, ನಮ್ಮಿಂದಾವುದೇ ತಕರಾರಿಲ್ಲ. ಎಷ್ಟೋ ಕುಟುಂಬಗಳು ಒದ್ದಾಡುತ್ತಿವೆ. ಕೊಪ್ಪಳ, ಸೇಡಂ ಸೇರಿದಂತೆ ಹಲವು ಭಾಗದ ಕಾರ್ಮಿಕರು ವಾಪಸ್‌ ಊರಿಗೆ ಹೊರಟು ನಿಂತಿದ್ದಾರೆ. ಕೆಲಸ ಮಾಡಿದ ಅವರಿಗೆ ಸಂಬಳ ನೀಡಲಾಗುತ್ತಿಲ್ಲ. ಗುತ್ತಿಗೆದಾರರು ಮಾತ್ರವಲ್ಲ, ಕಾರ್ಮಿಕರು ಸಹ ಕಷ್ಟಕ್ಕೆ ಸಿಲುಕಿದ್ದಾರೆ. ಕಾಮಗಾರಿ ನಡೆಸಿ ಬಿಲ್‌ಗಾಗಿ ಕಾದಿರುವ ಪ್ರಾಮಾಣಿಕ ಗುತ್ತಿಗೆದಾರರಿಗೆ ಶೇ.80ರಷ್ಟುಹಣವನ್ನಾದರೂ ಬಿಡುಗಡೆ ಮಾಡಿ, ಶೇ.20ರಷ್ಟು ನಿಮ್ಮ ಬಳಿಯೇ ಇಟ್ಟುಕೊಳ್ಳಿ. ಆದರೆ, ಕಾಲಹರಣ ಮಾಡಿ ಅವರನ್ನು ದುಸ್ಥಿತಿಗೆ ತರುವ ಪ್ರಯತ್ನ ಮಾಡಬೇಡಿ ಎಂದರು.

‘ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ’: ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಉಸ್ತುವಾರಿಯಾಗಿರುವ ಡಿ.ಕೆ.ಶಿವಕುಮಾರ್‌ ಅವರು ಯಾರನ್ನೋ ಗುರಿ ಮಾಡಿ ಬಿಲ್‌ ಬಾಕಿ ನೀಡದಂತೆ ತಡೆಹಿಡಿಯುವ ವ್ಯಕ್ತಿತ್ವ ಹೊಂದಿಲ್ಲ ಎಂದು ಭಾವಿಸುತ್ತೇನೆ. ನಾನು ಅವರೊಂದಿಗೆ ನನ್ನ ರಾಜಕೀಯ ಜೀವನದಲ್ಲಿ ಒಡನಾಟ ಹೊಂದಿದ್ದೆ. ಆದರೆ, ಇಂತಹ ಆಲೋಚನೆ ಇದ್ದರೆ ಅದನ್ನು ತೆಗೆದು ಹಾಕಬೇಕು. ಅವರ ಮುಂದಿರುವ ಉಜ್ವಲ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಬಾರದು ಎಂದು ಬಯಸುತ್ತೇನೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಿರಿಯ ರಾಜಕಾರಣಿ ಇದ್ದು, ಅವರ ಸಲಹೆಗಳನ್ನು ಪಡೆದುಕೊಂಡು ಕೆಲಸ ಮಾಡಬೇಕು ಎಂದು ಇದೇ ವೇಳೆ ವಿ.ಸೋಮಣ್ಣ ಸಲಹೆ ನೀಡಿದರು.

ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದ್ದು ಹೆಂಡತಿ, ಫಲಾನುಭವಿ ಸತ್ತ ಗಂಡ!

ಬಿಜೆಪಿ ಕಾಲದಲ್ಲಿ ಹಣ ಬಿಡುಗಡೆ: ತಪ್ಪು ಮಾಡಿರುವ ಗುತ್ತಿಗೆದಾರರಿಗೆ ಶಿಕ್ಷೆ ನೀಡಲಿ, ಅದಕ್ಕೆ ಯಾವುದೇ ತಕರಾರು ಇಲ್ಲ. ಆದರೆ, ಪ್ರಾಮಾಣಿಕ ಗುತ್ತಿಗೆದಾರರಿಗೆ ನ್ಯಾಯಯುತವಾಗಿ ಸಿಗಬೇಕಾದ ಹಣವನ್ನು ತಡೆ ಹಿಡಿದಿರುವುದು ದುರದೃಷ್ಟಕರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರು ಅಂತಿಮ ಹಂತದ ಕಾಮಗಾರಿ ಮುಗಿದಿದ್ದ ಬಿಲ್‌ ಪಾವತಿಗಾಗಿ .6600 ಕೋಟಿ ಬಿಡುಗಡೆ ಮಾಡಿದ್ದರು. ಆದರೆ, ಕೆಲವೊಂದು ತಾಂತ್ರಿಕ ತಡೆಯಿಂದಾಗಿ ವಿಳಂಬವಾಯಿತು. ಆದರೆ, ಇದನ್ನು ತಡೆಹಿಡಿದು ಹಿಂಸಿಸುವುದು ಸರಿಯಲ್ಲ. ಬೆಂಗಳೂರಲ್ಲಿ 28 ಕ್ಷೇತ್ರಗಳಿದ್ದು, ಎಲ್ಲದರಲ್ಲಿಯೂ ಬಿಜೆಪಿ ಶಾಸಕರಿಲ್ಲ. ಕಾರ್ಮಿಕರ ಹೊಟ್ಟೆಮೇಲೆ ಹೊಡೆಯಬೇಡಿ. ಕಮಿಷನ್‌ಗೆ ಸಂಬಂಧಪಟ್ಟಂತೆ ಈಗ ದಾಖಲೆ ಕೇಳುತ್ತಿರುವ ಡಿ.ಕೆ.ಶಿವಕುಮಾರ್‌ ಅವರು, ಆಗ ನಮ್ಮ ಮೇಲೆ ಆರೋಪ ಮಾಡುವಾಗ ಯಾವ ದಾಖಲೆ ನೀಡಿದ್ದೀರಿ ಎಂದು ಪ್ರಶ್ನಿಸಿದರು.

click me!