
ದಾವಣಗೆರೆ (ಡಿ.25): ರಾಜ್ಯದಲ್ಲಿ ಕಾಂಗ್ರೆಸ್ಸಲ್ಲ, ಟಿಪ್ಪು ಸುಲ್ತಾನ್ ನೇತೃತ್ವದ ತುಘಲಕ್ ಸರ್ಕಾರವಿದೆ ಎಂದು ಹಿಜಾಬ್ ನಿಷೇಧ ಹಿಂಪಡೆಯುವ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 13 ಸಲ ಬಜೆಟ್ ಮಂಡಿಸಿದ ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಹಿಜಾಬ್ ನಿಷೇಧದ ಆದೇಶವನ್ನು ವಾಪಾಸು ಪಡೆಯುತ್ತೇವೆನ್ನುತ್ತಿದ್ದು, ಇಂತಹ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು.
ಊಟ ನಮ್ಮ ಹಕ್ಕು, ಬಟ್ಟೆ ನಮ್ಮ ಹಕ್ಕು ಎಂಬುದಾಗಿ ಸಿದ್ದರಾಮಯ್ಯ ಹೇಳುತ್ತಾರೆ. ಎಲ್ಕೆಜಿಯಿಂದ ಕಾಲೇಜುವರೆಗೂ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. 2021ರಲ್ಲಿ ಉಡುಪಿ ಪಿಯು ಕಾಲೇಜು ವಿದ್ಯಾರ್ಥಿನಿಯರು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ತಂದಿದ್ದರು. ರಾಜ್ಯದಲ್ಲೇ ಅಂದು ದೊಡ್ಡ ಘಟನೆ ನಡೆದು ಹೋಯಿತು ಎಂದು ಅವರು ತಿಳಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶ ಇತಿಹಾಸದ ಪುಟದಲ್ಲಿ ಬರೆಯುವಂತಿರಲಿ: ಬಿ.ವೈ.ವಿಜಯೇಂದ್ರ
ಮುಸ್ಲಿಮರಿಗೆ ಹಿಜಾಬ್ಗೆ ಅವಕಾಶ ನೀಡಿದರೆ, ಹಿಂದು ಯುವಕ-ಯುವತಿಯರು ಕೇಸರಿ ಶಾಲು ಧರಿಸಿಕೊಂಡು, ಬರಲು ಅವಕಾಶ ನೀಡಬೇಕು. ಆಗಿನ ಸರ್ಕಾರದ ಆದೇಶವನ್ನು ಹೈಕೋರ್ಟ್ ಸಹ ಎತ್ತಿ ಹಿಡಿದಿದೆ. ಒಂದು ವೇಳೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಜಾಬ್ ನಿಷೇಧ ಆದೇಶ ಹಿಂಪಡೆದರೆ, ಹಿಂದು ಯುವಕ-ಯುವತಿಯರಿಗೆ ಕೇಸರಿ ಶಾಲು ಹಾಕಿಕೊಳ್ಳಲು ಕರೆ ನೀಡುತ್ತೇವೆ ಎಂದು ಸಚಿವ ಜಮೀ ರ್ ಅಹಮ್ಮದ್ ವಿರುದ್ಧವೂ ರೇಣುಕಾಚಾರ್ಯ ಹರಿಹಾಯ್ದರು.
7 ತಿಂಗಳಲ್ಲಿ ಅಭಿವೃದ್ಧಿ ಸ್ಥಗಿತ: ಹಲವು ಸುಳ್ಳು ಭರವಸೆಗಳ ನಾಡಿನ ಜನತೆಗೆ ನೀಡಿ ಆಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ತನ್ನ ಹೊಣೆಗಾರಿಕೆ ಮರೆತು ಆಡಳಿತ ವ್ಯವಸ್ಥೆಯಲ್ಲಿ ಸಂಪೂರ್ಣ ವಿಫಲವಾಗಿದೆ. ರಾಜ್ಯದ 223 ತಾಲೂಕುಗಳು ಬರಪೀಡಿತ ಪ್ರದೇಶಗಳಾಗಿದ್ದರೂ ಯಾವುದೇ ಭರವಸೆಗಳ ಜನರ ನಿರೀಕ್ಷೆಯಂತೆ ಪೂರೈಸಿಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ರಾಜ್ಯ ಸರ್ಕಾರವನ್ನು ಟೀಕಿಸಿದರು. ಹೊನ್ನಾಳಿ, ನ್ಯಾಮತಿ ತಾಲೂಕು ಬಿಜೆಪಿ ಮಂಡಲ ವತಿಯಿಂದ ರಾಜ್ಯ ಸರ್ಕಾರದ ವೈಫಲ್ಯಗಳ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 7 ತಿಂಗಳಾದರೂ ಈ ವರೆಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಹಮ್ಮಿಕೊಳ್ಳುವಲ್ಲಿ ಸಿದ್ದರಾಮಯ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಭೀಕರ ಬರಗಾಲದಿಂದ ರೈತರ ಬದುಕು ಸಂಕಷ್ಟಕ್ಕೀಡಾಗಿದ್ದು, ಸರ್ಕಾರ ಕಾಟಾಚಾರಕ್ಕೆ ಬೆಳೆಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡದೆ ರೈತರ ತಲೆ ಮೇಲೆ ಚಪ್ಪಡಿ ಕಲ್ಲು ಎಳೆಯುವ ಕೆಲಸ ಮಾಡಿದೆ ಎಂದು ಹೇಳಿದರು. ರೈತರಿಗೆ ಬರ ಪರಿಹಾರವಾಗಿ ಪ್ರತಿ ಎಕರೆಗೆ ₹25 ಸಾವಿರ ಪರಿಹಾರ. ರೈತರಿಗಾಗಿ ₹25 ಸಾವಿರ ಕೋಟಿ ಹಣ ಮೀಸಲಿರಿಸಬೇಕು.
ಸಿದ್ದರಾಮಯ್ಯ ವಿಷದ ಬೀಜ ಬಿತ್ತೋದು ನಿಲ್ಲಿಸಲಿ: ಬಿ.ಎಸ್.ಯಡಿಯೂರಪ್ಪ
ಬೆಳಗಾವಿ ಅಧಿವೇಶನದಲ್ಲಿ ಮುಖ್ಯಮಂತ್ರಿಯವರು ರೈತರು ಅಸಲು ಕಟ್ಟಿದರೆ ಬಡ್ಡಿಮನ್ನಾ ಮಾಡಲಾಗುವುದು ಎಂದಿದ್ದಾರೆ. ವಾಸ್ತವವಾಗಿ ರೈತರು ಅಸಲು ಸಾಲ ಕಟ್ಟಲಾಗದ ಪರಿಸ್ಥಿತಿಯಲ್ಲಿದ್ದಾರೆ ಇದಕ್ಕಾಗಿ ರೈತರ ಸಂಪೂರ್ಣ ಸಾಲವನ್ನೇ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ರೈತರಿಗೆ ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯಡಿ ₹6 ಸಾವಿರ ಅಂದಿನ ಬಿಜೆಪಿ ರಾಜ್ಯ ಸರ್ಕಾರ 4 ಸಾವಿರ ರೈತರ ಖಾತೆಗೆ ಜಮೆ ಮಾಡುತ್ತಿತ್ತು ಆದರೆ ಈಗ ಕಾಂಗ್ರೆಸ್ ಸರ್ಕಾರ ₹4 ಸಾವಿರ ರೈತರ ಖಾತೆಗೆ ಹಾಕುವುದು ನಿಲ್ಲಿಸಿದ್ದು. ಕೂಡಲೇ ಈ ಮೊತ್ತವನ್ನು ರೈತರ ಖಾತೆಗೆ ಹಾಕಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.