ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ ಎಂದು ಹೇಳಿದ್ದಾರೆ. ಯತ್ನಾಳ್ ಬಿಜೆಪಿಗೆ ಮರಳಿ ಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ (ಏ.2):‘ಬಿಜೆಪಿ ಉಚ್ಚಾಟಿತ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟುವುದಿಲ್ಲ. ಬಿಜೆಪಿಯಲ್ಲೇ ಮುಂದುವರಿಯುತ್ತಾರೆ. ಒಂದು ವೇಳೆ ಹೊಸ ಪಕ್ಷ ಮಾಡಿದರೂ ನಾವು ಬಿಜೆಪಿ ತೊರೆಯುವುದಿಲ್ಲ’ ಎಂದು ಯತ್ನಾಳ್ ಗುಂಪಿನ ಪ್ರಮುಖ ನಾಯಕರೂ ಆದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಮೊನ್ನೆಯಷ್ಟೇ ಯತ್ನಾಳ್ ಅವರು, ‘ರಾಜ್ಯಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸುತ್ತೇನೆ. ಜನರು ಹೊಸ ಪಕ್ಷ ಕಟ್ಟಬೇಕೆಂದು ಬಯಸಿದರೆ ಬರುವ ವಿಜಯದಶಮಿ ವೇಳೆಗೆ ರಾಜಕೀಯ ನಿರ್ಧಾರ ಕೈಗೊಳ್ಳುವೆ’ ಎಂದಿದ್ದರು. ಅದರ ಮರುದಿನವೇ ರಮೇಶ ಜಾರಕಿಹೊಳಿ ನೀಡಿರುವ ಈ ಹೇಳಕೆ ರಾಜಕೀಯ ವಲಯದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಬೆಳಗಾವಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಮಾಧ್ಯಮದಲ್ಲಿ ಬಂದಿರುವುದೇ ಬೇರೆ. ಬಿಜೆಪಿಗೆ ಯತ್ನಾಳ್ ಮರಳಿ ಬರುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: '2028ಕ್ಕೆ ನಾನೇ ಸಿಎಂ, ನೋಡ್ತಾ ಇರ್ರಿ’ ಎಂದ ಯತ್ನಾಳ್!
ಹಿಂದುತ್ವಕ್ಕಾಗಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ‘ಆರ್ಎಸ್ಎಸ್ ಇದೆಯಲ್ಲ, ಅಷ್ಟೇ ಸಾಕು’ ಎಂದ ಅವರು, ‘ಬೆಂಗಳೂರಿನಲ್ಲಿ ನಡೆದ ಶಾಸಕರ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡಿದ್ದೇವೆ. ಪಕ್ಷಕ್ಕೆ ಮುಜುಗರ ಆಗುವಂತಹ ಹೇಳಿಕೆ ಕೊಡಬೇಡಿ ಎಂದು ಹೇಳಿದ್ದೇವೆ. ಎಲ್ಲವನ್ನು ಮಾಧ್ಯಮದ ಎದುರು ಹೇಳಲು ಆಗುವುದಿಲ್ಲ. ಶೀಘ್ರದಲ್ಲಿಯೇ ಬಿಜೆಪಿ ವರಿಷ್ಠರನ್ನು ಭೇಟಿಯಾಗಿ ಯತ್ನಾಳ್ ಅವರನ್ನು ವಾಪಸ್ ಕರೆತರಲು ಪ್ರಯತ್ನ ಮಾಡುತ್ತೇವೆ’ ಎಂದರು.
‘ಪಂಚಮಸಾಲಿ ಸಮಾಜ ಯತ್ನಾಳ್ ಬೆಂಬಲಕ್ಕೆ ಏಕೆ ನಿಲ್ಲುತ್ತಿಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾವ ಸಮುದಾಯವು ಯಾವ ಪಕ್ಷಕ್ಕೆ ಸೀಮಿತವಲ್ಲ. ಆ ಸಮುದಾಯದ ಬಗ್ಗೆ ನಾನು ಏನೂ ಹೇಳುವುದಿಲ್ಲ’ ಎಂದು ಹೇಳಿದರು.