ನಾವು ಮಲಗಿಕೊಂಡಿದ್ದರೂ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಸಚಿವ ಎಂಟಿಬಿ ನಾಗರಾಜ್‌

By Govindaraj SFirst Published Dec 18, 2022, 8:05 PM IST
Highlights

ನಾವು ಕೂತಿದ್ದರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೇವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿರುವ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ನಾವು ಮನೆಯಲ್ಲಿ ಮಲಗಿದ್ದರೂ ಬಿಜೆಪಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆಂದರು. 

ಚಿಕ್ಕಬಳ್ಳಾಪುರ (ಡಿ.18): ನಾವು ಕೂತಿದ್ದರು ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತೇವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಟಾಂಗ್‌ ನೀಡಿರುವ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌, ನಾವು ಮನೆಯಲ್ಲಿ ಮಲಗಿದ್ದರೂ ಬಿಜೆಪಿ ಮತ್ತೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತದೆಂದರು. ಚಿಕ್ಕಬಳ್ಳಾಪುರದಲ್ಲಿ ಶನಿವಾರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರ ಮರುಸ್ಥಾಪನೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಮಗೆ ಸ್ಪಷ್ಟವಿಶ್ವಾಸ, ಭರವಸೆ ಇದೆ ಎಂದರು.

ಯಾರೂ ಹಣ ಪಡೆದಿಲ್ಲ: ಬಿಜೆಪಿಗೆ ಹೋದವರು ಯಾರೂ ಹಣ ಪಡೆದವರಲ್ಲ. ಪಕ್ಷದ ಮೇಲಿನ ಅಸಮಾಧಾನದಿಂದ ನಾವೆಲ್ಲಾ ಬಿಜೆಪಿಗೆ ಸೇರ್ಪಡೆ ಆಗಿದ್ದೇವೆ. ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ ಬಿಜೆಪಿ ಸೇರ್ಪಡೆ ವೇಳೆ 15 ಕೋಟಿ ಪಡೆದಿರುವುದಾಗಿ ಸಂಸದ ಶ್ರೀನಿವಾಸ್‌ ಪ್ರಸಾದ್‌ ಹೇಳಿಕೆ ಕುರಿತು ಸಚಿವ ಎಂಟಿಬಿ ನಾಗರಾಜ್‌ ಪ್ರತಿಕ್ರಿಯಿಸಿದರು.

ಆಟೋ ಚಾಲಕರಿಗೂ ಸೂರು ಒದಗಿಸುವ ಭರವಸೆ: ಸಚಿವ ಎಂಟಿಬಿ ನಾಗರಾಜ್‌

ವಿಶ್ವನಾಥ ಹಣ ಪಡೆದಿದ್ದಾರೆ ಎನ್ನುವುದು ಶುದ್ಧ ಸುಳ್ಳು. ನಾನು ಈ ಆರೋಪವನ್ನು ನಿರಾಕರಿಸುವೆ. ಕೊಟ್ಟಿರುವರು ಹೇಳಬೇಕು. ಇಲ್ಲ ಹಣ ತಗೊಂಡಿವವರು ಹೇಳಬೇಕು. ಮೂರನೇ ವ್ಯಕ್ತಿ ಹೇಳಿದರೆ ಹೇಗೆ ನಂಬಬೇಕೆಂದು ಪ್ರಶ್ನಿಸಿದ ಎಂಟಿಬಿ, ನನಗೆ 72 ವರ್ಷ ಆಗಿದೆ. ಮಗನಿಗೆ 32 ವರ್ಷ, ಮುಂದಿನ ಚುನಾವಣೆಯಲ್ಲಿ ಆತನಿಗೆ ಹೊಸಕೋಟೆ ಕ್ಷೇತ್ರದಿಂದ ಕಣಕ್ಕೆ ಇಳಿಸಬೇಕೆಂಬ ಚಿಂತನೆ ಇದೆ. ವರಿಷ್ಠರು ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಮಗನಿಗೆ ಟಿಕೆಟ್‌ ಕೊಡುವಂತೆ ನಾನು ಇದುವರೆಗೂ ಪಕ್ಷದ ವರಿಷ್ಠರಿಗೆ ಕೇಳಿಲ್ಲ ಎಂದರು.

ಭೂ ಕಬಳಿಕೆದಾರರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ: ತಾಲೂಕಿನಲ್ಲಿ ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಿರುವ ಯಾರೊಬ್ಬರನ್ನೂ ಬಿಡುವ ಪ್ರಶ್ನೆಯೇ ಇಲ್ಲ. ಬದಲಾಗಿ ಒತ್ತುವರಿ ತೆರವು ಮಾಡಿ ಮುಟ್ಟುಗೋಲು ಹಾಕಿಕೊಳ್ಳುತ್ತೇವೆ ಎಂದು ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು. ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮದಲ್ಲಿ ನಡೆದ ‘ಜಿಲ್ಲಾ​ಕಾರಿಗಳ ನಡೆ, ಹಳ್ಳಿಗಳ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶ ಹೊಂದಿರುವ ‘ಜಿಲ್ಲಾ​ಕಾರಿಗಳ ನಡೆ, ಹಳ್ಳಿಗಳ ಕಡೆಗೆ’ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ರಾಜ್ಯದಲ್ಲಿ ಯಶಸ್ವಿಯಾಗಿದೆ. ಸರ್ಕಾರಿ ಕಚೇರಿಗಳಿಗೆ ರೈತರು, ಬಡವರ, ಸಾರ್ವಜನಿಕರ ಅಲೆದಾಟ ತಪ್ಪಿಸಲು ಈ ಕಾರ್ಯಕ್ರಮವನ್ನು ಜಾರಿಗೊಳಿಸಿದೆ ಎಂದು ಹೇಳಿದರು.

ಆಡಳಿತದಲ್ಲಿ ಬದ್ದತೆ ಇರಲಿ: ಜನ ಮತದಾನ ಮಾಡಿ ಗೆಲ್ಲಿಸೋದು ಜನಸೇವೆ ಮಾಡಲೇ ಹೊರತು, ಸರ್ಕಾರಿ ಜಮೀನನ್ನು ಕಬಳಿಕೆ ಮಾಡಿಕೊಳ್ಳಲು ಅಲ್ಲ. ರಾಜಕಾರಣದಲ್ಲಿ ಬದ್ದತೆ ಇರಬೇಕು. ಉಪಚುನಾವಣೆಯಲ್ಲಿ ನಾನು ಸೋಲುಂಡರೂ ಬದ್ಧತೆಯಿಂದ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದಲ್ಲಿ ಸಣ್ಣ ಪುಟ್ಟವಿಚಾರಕ್ಕೂ ರಾಜಕಾರಣ ಮಾಡಿ ಗ್ರಾಮಗಳಲ್ಲಿ ಶಾಂಂತಿ ಕದಡಲಾಗುತ್ತಿದೆ. ಚುನಾವಣಾ ಸಂದರ್ಭಕ್ಕೆ ಮಾತ್ರ ರಾಜಕಾರಣ ಮಾಡಬೇಕು. ನಂತರದ ಅಭಿವೃದ್ಧಿಯತ್ತ ಗಮನಹರಿಸಬೇಕು ಎಂದು ಸಚಿವ ಎಂಟಿಬಿ ನಾಗರಾಜ್‌ ತಿಳಿಸಿದರು.

ನನ್ನನ್ನು ಸೋಲಿಸಿಬಿಟ್ಟರು: ಕಣ್ಣೀರಿಟ್ಟ ಸಚಿವ ಎಂಟಿಬಿ ನಾಗರಾಜ್‌

ಶಾಸಕ ಶರತ್‌ ಬಚ್ಚೇಗೌಡ ಮಾತನಾಡಿ, ಅಧಿ​ಕಾರಿಗಳು ಕೇವಲ ಆಡಳಿತಾರೂಢ ಪಕ್ಷಗಳ ಕೈಗೊಂಬೆಗಳಂತೆ ವರ್ತಿಸದೆ ಪಕ್ಷಾತೀತವಾಗಿ ಜನರ ಸೇವೆ ಮಾಡಬೇಕು. ಆದರೆ ಕ್ಷೇತ್ರದಲ್ಲಿ ಅಧಿ​ಕಾರಿಗಳು ರಿಮೋಟ್‌ ಕಂಟ್ರೋಲ್‌ನಂತೆ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಾರ‍್ಯಕ್ರಮದಲ್ಲಿ ತಹಸೀಲ್ದಾರ್‌ ಮಹೇಶ್‌ ಕುಮಾರ್‌, ಗ್ರಾಪಂ ಅಧ್ಯಕ್ಷೆ ಯಶೋಧಾ ಮುನಿರಾಜ್‌, ಉಪಾಧ್ಯಕ್ಷ ಬೆಳ್ಳಿಕೆರೆ ಮಂಜುನಾಥ್‌, ಎಎಸ್ಪಿ ಪುರುಷೋತ್ತಮ್‌, ಬಿಎಂಆರ್‌ಡಿಎ ಅಧ್ಯಕ್ಷ ಶಂಕರೇಗೌಡ ವಿವಿಧ ಇಲಾಖೆಗಳ ಅ​ಧಿಕಾರಿಗಳು ಹಾಜರಿದ್ದರು.

click me!