ಮುಡಾ ಸೈಟ್‌ ಮರಳಿಸಿದರೂ ಸಿದ್ದರಾಮಯ್ಯ ಮೇಲಿನ ತನಿಖೆ ನಿಲ್ಲಲ್ಲ: ಕಾನೂನು ತಜ್ಞರು

By Kannadaprabha NewsFirst Published Oct 2, 2024, 8:12 AM IST
Highlights

ಮುಡಾದಿಂದ ಪಡೆದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿದ್ದರೂ ಸದ್ಯದ ಮಟ್ಟಿಗೆ ತನಿಖೆಯಿಂದ ಪಾರಾಗಲು ಸಾಧ್ಯವಿಲ್ಲ. 

ಬೆಂಗಳೂರು (ಅ.02): ಮುಡಾದಿಂದ ಪಡೆದ 14 ನಿವೇಶನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಹಿಂದಿರುಗಿಸಿದ್ದರೂ ಸದ್ಯದ ಮಟ್ಟಿಗೆ ತನಿಖೆಯಿಂದ ಪಾರಾಗಲು ಸಾಧ್ಯವಿಲ್ಲ. ಒಂದು ವೇಳೆ ಆರೋಪಗಳು ಸಾಬೀತಾದರೆ ಶಿಕ್ಷೆ ಪ್ರಮಾಣ ಕಡಿತಕ್ಕೆ ಸೀಮಿತವಾಗಿ ನಿವೇಶನ ವಾಪಸಾತಿ ಸಹಾಯಕವಾಗಬಹುದು ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಿವೇಶನ ವಾಪಸ್‌ ನೀಡುವ ದಿಢೀರ್‌ ನಿರ್ಧಾರವನ್ನು ಪಾರ್ವತಿ ಪ್ರಕಟಿಸಿದ ಹಿನ್ನೆಲೆಯಲ್ಲಿ ಈ ತೀರ್ಮಾನ ತನಿಖೆ ಮೇಲೆ ಯಾವ ಪರಿಣಾಮ ಬೀರುತ್ತದೆ, ಕಾನೂನು ಏನು ಹೇಳುತ್ತದೆ ಎಂಬ ಬಗ್ಗೆ ‘ಕನ್ನಡಪ್ರಭ’ ಜೊತೆ ಮಾತನಾಡಿದ ಹೈಕೋರ್ಟ್‌ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ‘ನಿವೇಶನ ವಾಪಸ್‌ ನೀಡಿರುವುದು ಮುಡಾ ಪ್ರಕರಣದ ತನಿಖೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಸಿದ್ದರಾಮಯ್ಯ ದಂಪತಿಗೆ ಯಾವುದೇ ಅನುಕೂಲವಾಗುವುದೂ ಇಲ್ಲ. ಮುಡಾ ಹೆಸರಿಗೆ ನಿವೇಶನಗಳನ್ನು ನೋಂದಣಿ ಮಾಡಿಕೊಟ್ಟರೂ ತನಿಖೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ತಿಳಿಸಿದರು.

Latest Videos

ನನ್ನನ್ನು 1 ದಿನವಾದ್ರೂ ಜೈಲಿಗಟ್ಟಲು ಸಿದ್ದರಾಮಯ್ಯ ಗ್ಯಾಂಗ್‌ ಸಂಚು ಮಾಡಿತ್ತು: ಎಚ್‌ಡಿಕೆ

ಪ್ರಕರಣ ತಾರ್ಕಿಕ ಅಂತ್ಯ ಕಾಣಬೇಕಾದರೆ ತನಿಖೆ ಮುಂದುವರಿಯಬೇಕು. ಪ್ರಕರಣದ ಸಂಬಂಧ ಹಲವು ಕಟು ಅಭಿಪ್ರಾಯಗಳನ್ನು ಹೈಕೋರ್ಟ್‌ ವ್ಯಕ್ತಪಡಿಸಿರುವುದರಿಂದ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ದಂಪತಿ ಪರ ತನಿಖಾಧಿಕಾರಿಗಳು ಬಿ ರಿಪೋರ್ಟ್‌ ಸಹ ಸಲ್ಲಿಸಲು ಸಾಧ್ಯವಿಲ್ಲ. ಪಾರ್ವತಿ ಅವರು ವಿವಾದ ಆರಂಭವಾದಾಗಲೇ ವಾಪಸ್ಸು ನೀಡಿದ್ದರೆ, ಆ ನಿರ್ಣಯದಲ್ಲಿ ಸದುದ್ದೇಶವಿದೆ ಎಂದು ಪರಿಗಣನೆಯಾಗುತ್ತಿತ್ತು ಎಂದು ಅಶೋಕ ಹಾರನಹಳ್ಳಿ ಅಭಿಪ್ರಾಯಪಡುತ್ತಾರೆ.

ಹೈಕೋರ್ಟ್‌ನ ಮತ್ತೊಬ್ಬ ಹಿರಿಯ ವಕೀಲರು ಮಾತನಾಡಿ, ‘ನಿವೇಶನ ಹಿಂತಿರುಗಿಸಿರುವುದರಿಂದ ಪ್ರಕರಣದಿಂದ ಅವರು ಆರೋಪ ಮುಕ್ತರಾಗುತ್ತಾರೆ ಎನ್ನಲು ಸಾಧ್ಯವೇ ಇಲ್ಲ. ಹಣದಾಸೆಗೆ ಇಷ್ಟೆಲ್ಲಾ ಮಾಡಿದ್ದಾರೆ ಎಂಬ ಆರೋಪವಿದೆ. ಆದರೆ, ಏನೂ ಗಳಿಕೆ ಮಾಡಿಲ್ಲ. ಕೇವಲ ಮುಡಾದಿಂದ ಪತ್ನಿಗೆ ನಿವೇಶನ ಮಂಜೂರಾಗಿದೆ. ಅದನ್ನು ಈಗ ಅವರೇ ಸ್ವಯಂ ಪ್ರೇರಣೆಯಿಂದ ವಾಪಸ್‌ ಕೊಡುತ್ತಿದ್ದಾರೆ ಎಂಬ ಅಂಶವನ್ನು ತನಿಖಾಧಿಕಾರಿಗಳು ಅಥವಾ ಕೋರ್ಟ್‌ ಗಣನೆಗೆ ತೆಗೆದುಕೊಳ್ಳಬಹುದು. ಆರೋಪಗಳು ರುಜುವಾಗಿ ಶಿಕ್ಷೆ ಕೊಡುವಾಗ ನಿವೇಶನ ವಾಪಸ್‌ ನಿರ್ಣಯವನ್ನು ಕೋರ್ಟ್‌ ಪರಿಗಣಿಸುತ್ತದೆ’ ಎಂದು ತಿಳಿಸಿದರು.

Muda Case: ಸಿಎಂ ಸಿದ್ದರಾಮಯ್ಯ ಪತ್ನಿ ಹಿಂದಿರುಗಿಸಿದ 14 ಸೈಟ್‌ ಖಾತೆ ರದ್ದು

ನಿವೇಶನ ಹಿಂದಿರುಗಿಸಿದ ಕೂಡಲೇ ಅಪರಾಧ ಮುಚ್ಚಿ ಹೋಗುತ್ತದೆ ಎಂದು ಹೇಳಲಾಗದು. ತನಿಖಾಧಿಕಾರಿಗಳೇ ಗಣನೆಗೆ ತೆಗೆದುಕೊಳ್ಳಬಹುದು. ಇಲ್ಲವೇ ಈ ಕುರಿತ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಅದರ ನಿರ್ಣಯಕ್ಕೆ ಬಿಡಬಹುದು. ಆಗ ನ್ಯಾಯಾಲಯವೇ ತೀರ್ಮಾನ ಕೈಗೊಳ್ಳುತ್ತದೆ. ತನಿಖೆ ನಡೆದು ತನಿಖಾಧಿಕಾರಿಗಳು ವರದಿ ಸಲ್ಲಿಸಿದ ನಂತರ ಅದರ ಮೇಲೆ ನ್ಯಾಯಾಲಯ ನಿರ್ಣಯ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೆ ಸಿದ್ದರಾಮಯ್ಯ ದಂಪತಿ ಆರೋಪ ಮುಕ್ತರಾಗುವುದಿಲ್ಲ ಎಂದು ಅವರು ಹೇಳಿದರು.

click me!