Election Result 2022 ಪ್ರಿಯಾಂಕಾಗೆ ಪ್ರಥಮ ಚುಂಬನಂ ದಂತ ಭಗ್ನಂ

By Kannadaprabha NewsFirst Published Mar 11, 2022, 3:21 AM IST
Highlights

- ಉತ್ತರ ಪ್ರದೇಶದಲ್ಲಿ ಮೋದಿ-ಯೋಗಿ ವಿರುದ್ಧ ಕಾಂಗ್ರೆಸ್‌ನ ಬ್ರಹ್ಮಾಸ್ತ್ರ ಠುಸ್‌!

- ಈ ಬಾರಿ ಯುಪಿ ಕಾಂಗ್ರೆಸ್‌ನ ಪೂರ್ಣ ನಾಯಕತ್ವ ವಹಿಸಿದ್ದ ಸೋನಿಯಾ ಪುತ್ರಿ

- ಆದರೆ ಕಳೆದ ಬಾರಿಗಿಂತ ಕಾಂಗ್ರೆಸ್‌ ಕಳಪೆ ಸಾಧನೆ: ಐತಿಹಾಸಿಕ ಕನಿಷ್ಠಕ್ಕೆ ಕುಸಿತ

- ಮೋದಿ, ಯೋಗಿ, ಶಾ, ಅಖಿಲೇಶ್‌ಗಿಂತ ಹೆಚ್ಚು ಸಮಾವೇಶ  ನಡೆಸಿದ್ದ ಪ್ರಿಯಾಂಕಾ

ನವದೆಹಲಿ (ಮಾ.10): ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Chief Minister Yogi Adityanath) ವಿರುದ್ಧ ಕಾಂಗ್ರೆಸ್‌ನ ಬ್ರಹ್ಮಾಸ್ತ್ರ ಎಂದೇ ಬಿಂಬಿತರಾಗಿದ್ದ ಸೋನಿಯಾ ಗಾಂಧಿ (Sonia Gandhi) ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಉತ್ತರ ಪ್ರದೇಶದ ಚುನಾವಣೆಯಲ್ಲಿ ಹೀನಾಯ ಮುಖಭಂಗ ಅನುಭವಿಸಿದ್ದಾರೆ. ವಿಶೇಷವೆಂದರೆ, ಉತ್ತರ ಪ್ರದೇಶದ ಚುನಾವಣೆಯನ್ನು ( Uttar Pradesh Election ) ಕಾಂಗ್ರೆಸ್‌ ಪಕ್ಷ (Congress Party )ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಪ್ರಿಯಾಂಕಾ ಅವರ ನಾಯಕತ್ವದಲ್ಲೇ ಎದುರಿಸಿತ್ತು. ರಾಹುಲ್‌ ಗಾಂಧಿ ( Rahul Gandhi ) ನಾಯಕತ್ವ ಕಳೆದ ಚುನಾವಣೆಯಲ್ಲಿ ವಿಫಲವಾದ ನಂತರ ಪ್ರಿಯಾಂಕಾ ಮೇಲೆ ಕಾಂಗ್ರೆಸ್‌ ಸಂಪೂರ್ಣ ಅವಲಂಬಿತವಾಗಿತ್ತು. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ.

ಗಮನಾರ್ಹ ಸಂಗತಿಯೆಂದರೆ, ಈ ಬಾರಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ ಪಕ್ಷ ಕಳೆದ ಬಾರಿಗಿಂತ ಕಳಪೆ ಪ್ರದರ್ಶನ ತೋರಿದೆ. ಈ ಸಲ ಕಾಂಗ್ರೆಸ್‌ ಪಡೆದ ಸೀಟುಗಳು ಉತ್ತರ ಪ್ರದೇಶದ ಇತಿಹಾಸದಲ್ಲೇ ಆ ಪಕ್ಷ ಪಡೆದ ಅತಿ ಕಡಿಮೆ ಸೀಟುಗಳಾಗಿವೆ.

ಉತ್ತರ ಪ್ರದೇಶದ ಚುನಾವಣೆಯನ್ನು ಸ್ವತಃ ಪ್ರಿಯಾಂಕಾ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅಲ್ಲಿ ಸತತ 45 ದಿನಗಳ ಕಾಲ ಅಬ್ಬರದ ಪ್ರಚಾರ ನಡೆಸಿ 33% ಮಹಿಳಾ ಮೀಸಲಿನ ಪರ ಹಾಗೂ ಬಿಜೆಪಿ ವಿರುದ್ಧ ಭಾರಿ ಬ್ಯಾಟಿಂಗ್‌ ನಡೆಸಿದ್ದರು. ಒಟ್ಟು 209 ರಾರ‍ಯಲಿ ಮತ್ತು ರೋಡ್‌ ಶೋಗಳನ್ನು ನಡೆಸಿದ್ದರು. ಮುಖ್ಯಮಂತ್ರಿ ಯೋಗಿ ನಡೆಸಿದ 203 ರಾರ‍ಯಲಿಗಳಿಗಿಂತ ಇದು ಹೆಚ್ಚು. ಎಸ್‌ಪಿಯ ಅಖಿಲೇಶ್‌ ಯಾದವ್‌ ಕೇವಲ 131 ರಾರ‍ಯಲಿಗಳನ್ನು ನಡೆಸಿದ್ದರು. ಇನ್ನು, ಪ್ರಧಾನಿ ಮೋದಿ (28) ಹಾಗೂ ಅಮಿತ್‌ ಶಾ (54) ಅವರಿಗಿಂತಲೂ ಹೆಚ್ಚು ರಾರ‍ಯಲಿಗಳನ್ನು ಪ್ರಿಯಾಂಕಾ ನಡೆಸಿದ್ದರು. ಅಷ್ಟೇ ಅಲ್ಲ, ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಮುಂತಾದವರಿಗಿಂತಲೂ ಹೆಚ್ಚು ರಾರ‍ಯಲಿಗಳನ್ನು ನಡೆಸಿದ್ದರು. ಅವ್ಯಾವುವೂ ಕಾಂಗ್ರೆಸ್‌ನ ನೆರವಿಗೆ ಬರಲಿಲ್ಲ. ತನ್ಮೂಲಕ ಕಾಂಗ್ರೆಸ್‌ಗೆ ರಾಹುಲ್‌ರ ವಿಫಲ ನಾಯಕತ್ವದ ನಂತರ ಪ್ರಿಯಾಂಕಾ ಆಸರೆಯಾಗಲಿದ್ದಾರೆ ಎಂಬ ಆಶಾಕಿರಣವೂ ಬಹುತೇಕ ಕಮರಿದಂತಾಗಿದೆ.

UP Elections: ಉತ್ತರ ಪ್ರದೇಶದಲ್ಲಿ ಯೋಗಿ ಗೆಲುವಿಗೆ ಕಾರಣವಾಗಿದ್ದೇ ಅದೊಂದು ಅಂಶ!
ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ: ಕಾಂಗ್ರೆಸ್‌
ನವದೆಹಲಿ:
ಪಕ್ಷದ ನಿರೀಕ್ಷೆ ತಕ್ಕಂತೆ ಚುನಾವಣಾ ಫಲಿತಾಂಶ ಬಂದಿಲ್ಲ. ಆದರೆ ನಾವು ಜನರ ತೀರ್ಪು ಒಪ್ಪಿಕೊಳ್ಳುತ್ತೇವೆ. ನಿರುತ್ಸಾಹಗೊಳ್ಳದೇ ಹೊಸ ತಂತ್ರಗಳೊಂದಿಗೆ ಮತ್ತೆ ಬರುತ್ತೇವೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೆವಾಲಾ (randeep surjewala) ತಿಳಿಸಿದ್ದಾರೆ.

ಐದೂ ರಾಜ್ಯಗಳ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅವರು, ನಾವು ಚುನಾವಣೆಯನ್ನಷ್ಟೇ ಸೋತಿದ್ದೇವೆ, ಧೈರ್ಯ ಕಳೆದುಕೊಂಡಿಲ್ಲ. ಜಯ ಸಿಗುವವರೆಗೂ ಹೋರಾಡುತ್ತೇವೆ. ಜನರಿಗಾಗಿ ಹಣದುಬ್ಬರ, ನಿರುದ್ಯೋಗ, ಮತ್ತು ಆರ್ಥಿಕತೆ ಕುಸಿತದಂತಹ ಸಮಸ್ಯೆಗಳ ಕುರಿತು ಧ್ವನಿ ಎತ್ತುತ್ತೇವೆ ಎಂದು ತಿಳಿಸಿದರು.

5 States Election: 'ಕಾಂಗ್ರೆಸ್‌ಗೆ ಎಚ್ಚರಿಕೆಯ ಗಂಟೆ, ಪರಾಮರ್ಶೆ ಅಗತ್ಯ: ಧ್ರುವ ನಾರಾಯಣ್
ಫಲಿತಾಂಶದಿಂದ ನಿರಾಸೆಯಾಗಿದ್ದು ನಿಜ, ಆದರೆ ನಿರುತ್ಸಾಹಗೊಂಡಿಲ್ಲ, ಸೋಲಿನ ಪರಾಮರ್ಶೆ ನಡೆಸಿ, ಮುಂದಿನ ದಿನಗಳಿಗಾಗಿ ಸಂಘಟನೆಯನ್ನು ಮತ್ತಷ್ಟುಬಲಪಡಿಸುತ್ತೇವೆ. ಉತ್ತರಾಖಂಡ್‌, ಗೋವಾ ಮತ್ತು ಪಂಜಾಬ್‌ನಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೆವು, ಆದರೆ ಜನರ ಆಶೀರ್ವಾದ ಪಡೆಯುವಲ್ಲಿ ವಿಫಲರಾಗಿದ್ದೇವೆ. ಉತ್ತರಪ್ರದೇಶದಲ್ಲಿ ಸಾರ್ವಜನಿಕರ ಅಭಿಪ್ರಾಯ ಮತಗಳಾಗಿ ಪರಿವರ್ತನೆಯಾಗಲಿಲ್ಲ. ನಾವು ಜಾತಿ, ಧರ್ಮದಂತಹ ಭಾವನಾತ್ಮಕ ವಿಚಾರಗಳನ್ನು ದೂರವಿಟ್ಟು, ನಿರುದ್ಯೋಗ, ಹಣದುಬ್ಬರದಂತಹ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದೆವು. ಆದರೆ ಬಿಜೆಪಿ ಭಾವನಾತ್ಮಕ ವಿಚಾರಗಳನ್ನಿಟ್ಟುಕೊಂಡು ಪ್ರಚಾರ ಮಾಡಿದ್ದು ಅವರಿಗೆ ಲಾಭವಾಯಿತು ಎಂದು ವಿಶ್ಲೇಷಿಸಿದರು.

click me!