ಮಸ್ಕಿ ಉಪಚುನಾವಣೆ ಕದನ: ಆರಂಭದಲ್ಲಿ ಬಿಜೆಪಿಗೆ ಬಿಗ್ ಶಾಕ್!

By Suvarna NewsFirst Published Mar 23, 2021, 3:18 PM IST
Highlights

ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಬೃಹತ್ ಸಮಾವೇಶ ಮಾಡುವ ಮೂಲಕ ಉಪಚುನಾವಣೆಗೆ ಕರಣಕಹಳೆ ಊದಿದ್ದ ಬಿಜೆಪಿಗೆ ಆರಂಭದಲ್ಲಿಯೇ ಕೊಂಚ ಆಘಾತವಾಗಿದೆ.

ರಾಯಚೂರು, (ಮಾ.23): ಜಿಲ್ಲೆಯ ಮಸ್ಕಿ ವಿಧಾನಸಭಾ ಉಪಚುನಾವಣೆ ಕಣ ರಂಗೇರುತ್ತಿದೆ. ಒಂದೆಡೆ ಕಾಂಗ್ರೆಸ್ ಅಭ್ಯರ್ಥಿ ಆರ್. ಬಸನಗೌಡ ಅವರಿಗೆ ಜನರು ದೇಣಿಗೆ ನೀಡಿ ಬೆಂಬಲಿಸುತ್ತಿದ್ದಾರೆ. 

ಮತ್ತೊಂದೆಡೆ ಬೃಹತ್​ ಸಮಾವೇಶ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದ ಬಿಜೆಪಿಗೆ ಚುನಾವಣೆ ಆಯೋಗ ಶಾಕ್ ಕೊಟ್ಟಿದೆ. ಹೌದು... ಆ ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿಗೆ ಚುನಾವಣಾ ಆಯೋಗ ನೋಟೀಸ್​ ಜಾರಿ ಮಾಡಿದೆ.

ಮಾರ್ಚ್ 20ರಂದು ಮಸ್ಕಿಯಲ್ಲಿ ಬಿಜೆಪಿ ಬೃಹತ್​ ಸಮಾವೇಶವನ್ನ ಆಯೋಜನೆ ಮಾಡಿತ್ತು. ಆ ಕಾರ್ಯಕ್ರಮದ ಆಯೋಜಕರಾದ ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿಗೆ ಚುನಾವಣಾ ಆಯೋಗ ನೋಟೀಸ್​ ಜಾರಿ ಮಾಡಿದೆ.

ಮಸ್ಕಿ ಉಪಚುನಾವಣೆ ರಣಕಹಳೆ: ಮೋದಿ ಅಭಿವೃದ್ಧಿ ನೆನೆದು ಮತ ನೀಡಿ, ಯಡಿಯೂರಪ್ಪ

ಕಾರ್ಯಕ್ರಮದಲ್ಲಿ ಕೇವಲ 500 ಜನ ಪಾಲ್ಗೊಳ್ಳಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. ಆದರೆ ಅಂದು 30 ಸಾವಿರಕ್ಕಿಂತ ಹೆಚ್ಚಿನ ಜನರನ್ನ ಸೇರಿಸಲಾಗಿತ್ತು. ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿ ಹಲವಾರು ಸಚಿವರು ಭಾಗಿಯಾಗಿದ್ದರು. 

ಈ ಹಿನ್ನೆಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ನೋಡಲ್​ ಅಧಿಕಾರಿ ಶೇಖ್​‌ ತನ್ವೀರ್​ ಆಸಿಫ್, ಸಮಾವೇಶದ​ ಆಯೋಜಕರಿಗೆ ನೋಟಿಸ್​ ಜಾರಿ ಮಾಡಿದ್ದಾರೆ. ಮಸ್ಕಿ ವಿಧಾನಸಭಾ ಉಪ ಚುನಾವಣೆ ಹಿನ್ನೆಲೆ ಸದ್ಯ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ.

 ಅದನ್ನ ಉಲ್ಲಂಘಿಸಿ ಬ್ಯಾನರ್​, ಫ್ಲೆಕ್ಸ್, ಹೋರ್ಡಿಂಗ್ಸ್​ಗಳನ್ನ ದೊಡ್ಡ ಪ್ರಮಾಣದಲ್ಲಿ ಹಾಕಲಾಗಿದೆ. ಮಸ್ಕಿಯಲ್ಲಿ ಷರತ್ತು ಬದ್ಧ ಕಾರ್ಯಕ್ರಮ ನಡೆಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿತ್ತು. ಆದರೆ ದೊಡ್ಡ ಪ್ರಮಾಣದ ಕಾರ್ಯಕ್ರಮ ಮಾಡಿದಕ್ಕೆ ನೋಟಿಸ್​ ನೀಡಲಾಗಿದೆ.

ಬೈ ಎಲೆಕ್ಷನ್‌ಗೆ ಕೊರೋನಾ ಟಫ್ ರೂಲ್ಸ್ ಅನ್ವಯ ಆಗಲ್ವಂತೆ: ಸಿಎಂ ಸಾಹೇಬ್ರು ಹೇಳಿದ್ದು

ಇನ್ನು ಉಪಚುನಾವಣೆಗೆ ಕೊರೋನಾ ರೂಲ್ಸ್ ಅನ್ವಯವಾಗುವುದಿಲ್ಲ ಎಂದು ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ ಅವರು ಉಡಾಫೆ ಹೇಳಿಕೆ ಕೊಟ್ಟಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿದ್ದಲ್ಲದೇ ರಾಜಕೀಯ ಕಾರ್ಯಕ್ರಮಗಳಿಗೆ ಕೊರೋನಾ ಬರೋಲ್ವಾ ಅಂತೆಲ್ಲಾ ಜನರು ತರಾಟೆಗೆ ತೆಗೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದೇ ಏಪ್ರಿಲ್ 7ರಂದು ಮಸ್ಕಿ ವಿಧಾನಸಭಾ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಮೇ.02ರಂದು ಫಲಿತಾಂಶ ಪ್ರಕಟವಾಗಲಿದೆ.

click me!