ಇಬ್ಬರು ಸಿಂಗ್‌ಗಳಿಂದ ಬಿಜೆಪಿಗೆ ದುಸ್ಥಿತಿ: ಶಾಸಕ ಬಸನಗೌಡ ಯತ್ನಾಳ್‌

By Kannadaprabha NewsFirst Published Dec 8, 2023, 10:43 PM IST
Highlights

ರಾಷ್ಟ್ರ ಮತ್ತು ರಾಜ್ಯದ ಇಬ್ಬರು ‘ಸಿಂಗ್‌’ಗಳ ದರ್ಬಾರ್‌ನಿಂದಾಗಿ ಬಿಜೆಪಿ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದಿದ್ದಾರೆ. ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸುವರ್ಣ ವಿಧಾನಸೌಧ (ಡಿ.08): ರಾಷ್ಟ್ರ ಮತ್ತು ರಾಜ್ಯದ ಇಬ್ಬರು ‘ಸಿಂಗ್‌’ಗಳ ದರ್ಬಾರ್‌ನಿಂದಾಗಿ ಬಿಜೆಪಿ ಪಕ್ಷಕ್ಕೆ ಈ ಸ್ಥಿತಿ ಬಂದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹರಿಹಾಯ್ದಿದ್ದಾರೆ. ಬೆಳಗ್ಗೆ ಸುವರ್ಣ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಯ ನಾಯಕರೊಬ್ಬರು ಹಾಗೂ ರಾಜ್ಯದ ನಾಯಕರೊಬ್ಬರು ಸೇರಿ ಇಬ್ಬರು ಮಹಾನ್‌ ನಾಯಕರ ಬಗ್ಗೆ ಹೇಳಬೇಕಿದೆ. ನನ್ನ ಬಾಯಿ ಮುಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಸದ್ಯದಲ್ಲೇ ದೆಹಲಿಯಿಂದ ಕರೆ ಬರಲಿದ್ದು, ದೆಹಲಿಗೆ ಹೋಗಿ ಹೈಕಮಾಂಡ್ ನಾಯಕರಿಗೆ ಈ ಇಬ್ಬರು ಮಹಾನುಭಾವರ ಬಗ್ಗೆ ತಿಳಿಸುತ್ತೇನೆ ಎಂದು ಹೇಳಿದರು.

ನಾನಾಗಿ ನಾನೇ ದೆಹಲಿಗೆ ಹೋಗುವುದಿಲ್ಲ. ನಿನ್ನೆ ನನ್ನನ್ನು ಸಂಪರ್ಕಿಸಿ ಸೂಚನೆ ಕೊಟ್ಟಿದ್ದಾರೆ. ರಮೇಶ್‌ ಜಾರಕಿಹೊಳಿ ಅವರಿಗೂ ಕರೆ ಬರಬಹುದು. ಯಾವಾಗ ದೆಹಲಿಗೆ ಕರೆ ಬರುತ್ತದೆ ಎಂಬುದು ಗೊತ್ತಿಲ್ಲ. ಕರೆ ಬಂದರೆ ಹೋಗುತ್ತೇನೆ. ಒಟ್ಟಿನಲ್ಲಿ ದೆಹಲಿಗೆ ಹೋಗುವುದು ನಿಶ್ಚಿತ ಹಾಗೂ ಖಚಿತ ಎಂದು ಸ್ಪಷ್ಟಪಡಿಸಿದರು.

ಮೆಕ್ಕೆಜೋಳ ಘಟಕ ದುರಂತ ಸಂತ್ರಸ್ತರಿಗೆ 5 ಲಕ್ಷ ರು. ಪರಿಹಾರ: ಸಚಿವ ಸಂತೋಷ್‌ ಲಾಡ್‌

ದೇಶ ತೊರೆಯುವೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಮಾಡಿರುವ ಆರೋಪವನ್ನು ಸಾಬೀತುಪಡಿಸಿದರೆ ನಾನು ಈ ದೇಶವನ್ನೇ ತೊರೆದು ಹೋಗುತ್ತೇನೆ. ಒಂದು ವೇಳೆ, ಅವರು ತಮ್ಮ ಆರೋಪವನ್ನು ಸಾಬೀತು ಮಾಡಲು ವಿಫಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಹೋಗಬೇಕು ಎಂದು ಜಮಾತ್‌ ಎ ಅಹಲೆ ಸುನ್ನತ್‌ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಜಯಪುರದ ಹಜರತ್‌ ಹಾಶಿಂಪೀರ ದರ್ಗಾದ ಧರ್ಮಾಧಿಕಾರಿ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಾಶ್ಮಿ ಸವಾಲು ಹಾಕಿದ್ದಾರೆ.

ಯತ್ನಾಳ ಆರೋಪಕ್ಕೆ ಅವರು ಪ್ರತಿಕ್ರಿಯೆ ನೀಡಿ ಪತ್ರಿಕಾ ಪ್ರಕಟಣೆ ನೀಡಿದ್ದು, ಐಸಿಸ್‌ ಜೊತೆ ನಂಟಿದೆ ಎಂದು ಯತ್ನಾಳ ಅವರು ಬಿಡುಗಡೆ ಮಾಡಿರುವ ಚಿತ್ರಗಳು ನನ್ನ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ನಾನೇ ಅಪ್‌ಲೋಡ್‌ ಮಾಡಿರುವ ಚಿತ್ರಗಳಾಗಿವೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್‌ ನ ಬಾಗ್ದಾದ್‌ ನಗರದ ಅಂತಾರಾಷ್ಟ್ರೀಯ ಪ್ರಸಿದ್ಧ ಸೂಫಿ ಮಹೆಬೂಬ್‌ ಎಸುಭಾನಿ ಗೌಸ್‌ ಎ ಆಜಂ ಅವರ ದರ್ಶನಕ್ಕೆ ಹೋದಾಗ ಅಲ್ಲಿನ ದರ್ಗಾದ ಪೀಠಾಧಿಪತಿ ಖಲೀದ್‌ ಜಿಲಾನಿ ಅವರ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಚಿತ್ರಗಳಾಗಿವೆ. ಮತ್ತೊಂದು ಚಿತ್ರ, ಅವರ ಅಂಗರಕ್ಷಕ ನನ್ನನ್ನು ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಚಿತ್ರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಾಣಿಗಳು ಹೆಚ್ಚಿದಾಗ ಬೇಟೆಗೆ ಅವಕಾಶ ನೀಡಿ: ಶಾಸಕ ಆರಗ ಜ್ಞಾನೇಂದ್ರ

ಐಸಿಸ್‌ನಂಥ ಭಯೋತ್ಪಾದಕ ಸಂಘಟನೆ ಜೊತೆ ನನಗೆ ನಂಟಿದೆ ಎಂಬುದರ ಬಗ್ಗೆ ಶಾಸಕರು ಒಂದು ವಾರದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಅನೇಕ ಸಮ್ಮೇಳನ, ಕಾರ್ಯಕ್ರಮಗಳಲ್ಲಿ ನಾನು ಹಲವು ಬಾರಿ ಭಾರತವನ್ನು ಪ್ರತಿನಿಧಿಸುತ್ತಾ ಬಂದಿದ್ದೇನೆ. ರಾಷ್ಟ್ರ, ರಾಜ್ಯದ ಹಲವು ಕೋಮು ಸೌಹಾರ್ದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದೇನೆ. ವಿವಿಧ ಧರ್ಮಗುರುಗಳು, ಪೀಠಾಧಿಪತಿಗಳು, ಮಠಾಧೀಶರ ಜೊತೆಯಲ್ಲಿ ಪಾಲ್ಗೊಂಡಿದ್ದೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!