
ವಿಜಯಪುರ(ಮಾ.11): ಟಿಪ್ಪು ಸುಲ್ತಾನ ಸಂತತಿಯವರಿಗೆ ನಿಮ್ಮ ಮತ ನೀಡಬೇಡಿ. ಹಿಂದುತ್ವ ರಕ್ಷಕನಾದ ಹಾಗೂ ನಗರದ ಸರ್ವತೋಮುಖ ಪ್ರಗತಿಯ ಬಗ್ಗೆ ಕಾಳಜಿ ವಹಿಸಿರುವ ನನಗೆ ಇನ್ನೊಮ್ಮೆ ಆಶೀರ್ವಾದ ಮಾಡಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಶುಕ್ರವಾರ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಚುನಾವಣೆಯ ದಿನ ಸಮೀಪಿಸುತ್ತಿದೆ. ಮತದಾನ ದಿನದಂದು ದಾಂಧಲೆ ಮಾಡುವ ಕೆಲಸ ಎದುರಾಳಿಗಳಿಂದ ನಡೆಯುವ ಸಾಧ್ಯತೆ ಇದೆ. ಹೀಗಾಗಿ, ಯುವ ಜನರು ಶೇ.100ರಷ್ಟು ಮತದಾನ ಮಾಡಬೇಕು. ಯಾರು ಸಹ ಮತದಾನದಿಂದ ದೂರ ಉಳಿಯಬಾರದು ಎಂದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬರುವುದು ಹಗಲುಗನಸು: ಸಚಿವ ಕಾರಜೋಳ
ನಾನು ಸೀರೆ ಹಂಚುವ ನಾಯಕನಲ್ಲ, ವಿಜಯಪುರ ನಗರದ ಸರ್ವತೋಮುಖ ಪ್ರಗತಿಗಾಗಿ ಸಾಕಷ್ಟುಅನುದಾನವನ್ನು ಸರ್ಕಾರದಿಂದ ತಂದು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಸುಸಜ್ಜಿತ ರಸ್ತೆಗಳು ನಿರ್ಮಾಣಗೊಂಡಿವೆ. ಓಪನ್ ಜಿಮ್, ಉದ್ಯಾನಗಳ ಶ್ರೇಯೋಭಿವೃದ್ಧಿ ಸಾಧ್ಯವಾಗಿದೆ. ಜವಳಿ ಪಾರ್ಕ್ ಸ್ಥಾಪನೆಗೆ ಪ್ರಕ್ರಿಯೆ ನಡೆಯುತ್ತಿವೆ. ದ್ರಾಕ್ಷಿ ಬೆಳೆಗಾರರ ಹಿತಕ್ಕಾಗಿ ಅತ್ಯಾಧುನಿಕ ಕೋಲ್ಡ್ ಸ್ಟೋರೆಜ್ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಅಭಿವೃದ್ಧಿ ಪರಂಪರೆ ಮುಂದೆಯೂ ನಡೆಯುವಂತಾಗಬೇಕು. ಸರಿಸುಮಾರು 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಜಿಸುವ ಸಂಕಲ್ಪ ನನ್ನದಾಗಿದೆ. ಈ ನಿಟ್ಟಿನಲ್ಲಿ ಮುಂದೆæಯೂ ಸಹ ನನಗೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಅದಮ್ಯ ಉತ್ಸಾಹ, ಪಕ್ಷದ ಮೇಲಿನ ಅಭಿಮಾನ ಕಂಡು ಅಪಾರ ಸಂತೋಷವಾಗಿದೆ. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿ ಎಲ್ಲ ಅಭ್ಯರ್ಥಿಗಳನ್ನು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ವಿಜಯಶಾಲಿ ಆಗಿಸುವ ಸವಾಲು ಹಾಗೂ ಸಂಕಲ್ಪವನ್ನು ಕಾರ್ಯಕರ್ತರು ಸ್ವೀಕರಿಸಬೇಕು ಎಂದು ಕರೆ ನೀಡಿದರು.
ಯಾತ್ರೆ ಅಂಗವಾಗಿ ನಡೆದ ಬೈಕ್ ರಾರಯಲಿಯಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್ ಮೇಲೆ ಬಿಜೆಪಿ ಬಾವುಟ ಅಳವಡಿಸಿ, ಬಿಜೆಪಿ ಹಾಗೂ ನಗರ ಶಾಸಕರಿಗೆ ಜಯಕಾರ ಹಾಕುತ್ತಾ ಉತ್ಸಾಹದಿಂದ ಪಾಲ್ಗೊಂಡರು.
ಎಲ್ಲಾ ಶಾಸಕರಿಗೂ ಟಿಕೆಟ್ ಸಿಗಲ್ಲ, ಹಾಲಿ ಬಿಜೆಪಿ ಶಾಸಕರಿಗೆ ಶಾಕ್ ಕೊಟ್ಟ ಸಿಎಂ ಬೊಮ್ಮಾಯಿ!
ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ, ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಸುರೇಶ ಬಿರಾದಾರ ಸೇರಿದಂತೆ ಹಲವಾರು ಮುಖಂಡರು ತೆರೆದ ವಾಹನದಲ್ಲಿ ಕೈಮುಗಿಯುತ್ತಾ ಸಾಗಿದರು.
ಇದಕ್ಕೂ ಮುನ್ನ ನಗರದ ಗೋದಾವರಿ ಹೋಟೆಲ್ ಬಳಿ ಅಥಣಿ ರಸ್ತೆಯಿಂದ ಬೈಕ್ ರಾರಯಲಿಗೆ ವಿಧ್ಯುಕ್ತ ಚಾಲನೆ ದೊರಕಿತು. ಬೈಕ್ ರಾರಯಲಿ ಶಿವಾಜಿ ವೃತ್ತ, ಗಾಂಧಿ ವೃತ್ತ ಸೇರಿ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಶ್ರೀ ಸಿದ್ದೇಶ್ವರ ದೇವಾಲಯ ತಲುಪಿ ಸಂಪನ್ನಗೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.