ಹೀನಾಯ ಸೋಲಿನ ಬಳಿಕ ಚನ್ನಪಟ್ಟಣ ಬೈ ಎಲೆಕ್ಷನ್‌ ಮೇಲೆ ಕಣ್ಣಿಟ್ಟ ಡಿಕೆ ಬ್ರದರ್ಸ್!

By Gowthami KFirst Published Jun 4, 2024, 4:23 PM IST
Highlights

ಪ್ರತಿಷ್ಠೆಯ ಕಣ ಎನಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಹೀನಾಯ ಸೋಲು ಕಂಡಿದ್ದಾರೆ.  ಆದ್ರೆ ಈಗ ಡಿಕೆ ಶಿವಕುಮಾರ್‌ ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿದ್ದಾರೆ. 

ಬೆಂಗಳೂರು (ಜೂ.4): ಪ್ರತಿಷ್ಠೆಯ ಕಣ ಎನಿಸಿಕೊಂಡಿದ್ದ ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಹೀನಾಯ ಸೋಲು ಕಂಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಭಾವ ಡಾ. ಸಿಎನ್ ಮಂಜುನಾಥ್ ಗೆಲುವಿನ ಮೂಲಕ ದೇವೇಗೌಡ ಕುಟುಂಬ ಎರಡೆರಡು ಗೆಲುವಿನ ಸಂಭ್ರಮದಲ್ಲಿದ್ದಾರೆ. ಆದ್ರೆ ಈಗ ಡಿಕೆ ಶಿವಕುಮಾರ್‌ ಚನ್ನಪಟ್ಟಣದ ಮೇಲೆ ಕಣ್ಣಿಟ್ಟಿದ್ದಾರೆ. 

ಬರೋಬ್ಬರಿ 2 ಲಕ್ಷ ಅಂತರದಲ್ಲಿ ಡಾ.ಸಿಎನ್‌ ಮಂಜುನಾಥ್ ಗೆದ್ದು ಬೀಗಿದ್ದಾರೆ. ಡಿಕೆ ಸುರೇಶ್ ಸೋಲನ್ನು ಒಪ್ಪಿಕೊಂಡಿದ್ದು, ಈ ಬಗ್ಗೆ ಮಾತನಾಡಿ ಜನರು ವಿಶ್ರಾಂತಿಯಲ್ಲಿರಲು ಬಯಸಿದ್ದಾರೆ ನಾನು ಇದನ್ನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ. ಆದ್ರೆ ಈಗ ವಿಷ್ಯ ಅದಲ್ಲ. ಡಿಕೆ ಸುರೇಶ್ ರಾಜಕೀಯ ಭವಿಷ್ಯದ ಬಗ್ಗೆ ಈಗ ಹೊಸ ಅಪ್ಡೇಟ್‌ ಬಂದಿದೆ.

Latest Videos

Mandya Lok Sabha elections: ಜೆಡಿಎಸ್ ಭದ್ರಕೋಟೆ ಮಂಡ್ಯ ಉಳಿಸಿಕೊಂಡ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ

ಇತ್ತ ಕುಮಾರಸ್ವಾಮಿ ಮಂಡ್ಯದಲ್ಲಿ ಬರೋಬ್ಬರಿ 2 ಲಕ್ಷ ಮತಗಳ ಅಂತರದಲ್ಲಿ ಗೆಲುವು ಕಂಡಿದ್ದು, ಈ ಮೂಲಕ ಮತ್ತೊಮ್ಮೆ ಜೆಡಿಎಸ್‌ ಮಂಡ್ಯದಲ್ಲಿ ಭದ್ರಕೋಟೆ ಎನ್ನುವುದು ಸಾಬೀತಾಗಿದೆ. ಈ ಫಲಿತಾಂಶದ ಬೆನ್ನಲ್ಲೇ ಚನ್ನಪಟ್ಟಣದಲ್ಲಿ ಮತ್ತೆ ಬೈ ಎಲೆಕ್ಷನ್ ನಡೆಯಲೇಬೇಕು. ಏಕೆಂದರೆ ಪ್ರಸ್ತುತ ಕುಮಾರಸ್ವಾಮಿ ಇಲ್ಲಿ ಶಾಸಕರಾಗಿದ್ದಾರೆ. ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲೇಬೇಕು. ಹೀಗಾಗಿ ಚನ್ನಪಟ್ಟಣದಲ್ಲಿ ಬೈ ಎಲೆಕ್ಷನ್ ನಡೆಯಲಿದೆ.

ಈಗ ಈ ಬೈ ಎಲೆಕ್ಷನ್‌ ನಲ್ಲಿ ಅಭ್ಯರ್ಥಿಗಳು ಯಾರಾಗಲಿದ್ದಾರೆ ಎಂಬ ಚರ್ಚೆ ಜೋರಾಗಿಯೇ ಆರಂಭವಾಗಿದೆ. ಮುಂದಿನ ವಿಧಾನಸಭಾ ಅಭ್ಯರ್ಥಿ ಚೆನ್ನಪಟ್ಟಣದಲ್ಲಿ ಯಾರಾಗಬಹುದು ಎಂಬ ಲೆಕ್ಕಚಾರ ಆರಂಭವಾಗಿದೆ.  ಅದರಲ್ಲಿ ಪ್ರಮುಖ ಹೆಸರುಗಳು ಇಂತಿದೆ, ಸಿಪಿ ಯೋಗೇಶ್ವರ್ , ನಿಖಿಲ್‌ ಕುಮಾರಸ್ವಾಮಿ ಮತ್ತು ಡಿಕೆ ಸುರೇಶ್ ಹೆಸರು ಹೆಚ್ಚಾಗಿ ಕೇಳಿ ಬರುತ್ತಿದೆ. ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಹಾಸನ ಟಿಕೆಟ್‌ಗಾಗಿ ಅಂದು ಭವಾನಿ ರೇವಣ್ಣ ಪಟ್ಟು ಹಿಡಿದಿದ್ದರು. ಒಂದು ವೇಳೆ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ಹಗರಣದ ಪ್ರಕರಣ ಬೆಳಕಿಗೆ ಬರದೇ ಇದ್ದಿದ್ದರೆ ಚನ್ನಪಟ್ಟಣ ಟಿಕೆಟ್‌ ಗಾಗಿ ಭವಾನಿ ಪಟ್ಟು ಹಿಡಿಯುತ್ತಿದ್ದರೇನೋ ಎಂಬ ವಿಚಾರವಾಗಿಯೂ ರಾಜಕೀಯ ವಲಯದಲ್ಲಿ ಟಾಕ್‌ ಕೇಳಿ ಬರುತ್ತಿದೆ.

Bengaluru Rural Results: ಕನಕಪುರ ಬಂಡೆಗೆ ಸರ್ಜರಿ ಮಾಡಿದ ಡಾ. ಮಂಜುನಾಥ್, ಡಿಕೆ ಸುರೇಶ್‌ಗೆ ಸೋಲು

ಇಲ್ಲಿ ರಾಜಕೀಯ ನಾಯಕರಾಗಿ ಗುರುತಿಸಿಕೊಂಡಿರುವ ಪ್ರಸ್ತುತ ಎಂಎಲ್‌ಸಿ ಸಿಪಿ ಯೋಗೇಶ್ವರ್‌ ಚನ್ನಪಟ್ಟಣದ ಮುಂದಿನ ವಿಧಾನಸಭಾ ಅಭ್ಯರ್ಥಿಯಾಗಬಹುದು ಎಂಬ ಲೆಕ್ಕಚಾರ ಆರಂಭವಾಗಿದೆ.  ಏಕೆಂದರೆ ಬಿಜೆಪಿ ಬೆಂಬಲಿಸಿದ್ದ ಸುಮಲತಾಗೆ ಟಿಕೆಟ್‌ ನೀಡದ  ಕಮಲ ಪಡೆ ಮಂಡ್ಯವನ್ನು ಕುಮಾರಸ್ವಾಮಿಗೆ ಬಿಟ್ಟುಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಡಿಕೆಗೆ ಎದುರಾಳಿಯಾಗಿದ್ದ ಸಿಪಿ ಯೋಗೇಶ್ವರ್‌ ಮತ್ತೆ ಮೈತ್ರಿ ಅಭ್ಯರ್ಥಿಯಾಗಿ ಬಿಜೆಪಿಯಿಂದ ಕಣಕ್ಕಿಳಿಯಬಹುದು ಎನ್ನಲಾಗಿದೆ.

ಇನ್ನೊಂದು ಮಾತಿನ ಪ್ರಕಾರ ಇಲ್ಲಿವರೆಗೆ ರಾಜಕೀಯದಲ್ಲಿ ನೆಲೆ ನಿಲ್ಲಲು ಸಾಧ್ಯವಾಗದ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ಚನ್ನಪಟ್ಟಣದಿಂದ ಹೆಚ್‌ಡಿಕೆ ನಿಲ್ಲಿಸಬಹುದು ಎಂಬ ಲೆಕ್ಕಾಚಾರವಿದೆ. ಯಾಕೆಂದರೆ ಪುತ್ರನಿಗೆ ರಾಜಕೀಯದಲ್ಲಿ ಭವಿಷ್ಯ ರೂಪಿಸಲು ಹೆಚ್‌ಡಿಕೆ ಶತಾಯಗತಾಯ ಪ್ಲಾನ್ ಮಾಡಿ ಪತ್ನಿ ಅನಿತಾ ಕುಮಾರಸ್ವಾಮಿ  ಅವರನ್ನು 2023ರ ವಿಧಾನಸಭೆ ಎಲೆಕ್ಷನ್ ಗೆ ನಿಲ್ಲಿಸದೆ ರಾಮನಗರದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿಯನ್ನು ನಿಲ್ಲಿಸಿದ್ದರು. ಆದರೆ  ಕಾಂಗ್ರೆಸ್ ಶಾಸಕ ಎಚ್‌.ಎ.ಇಕ್ಬಾಲ್ ಹುಸೇನ್ ಸದ್ಯ ರಾಮನಗರದ ಶಾಸಕ. ಹೀಗಾಗಿ ಪುತ್ರನ ರಾಜಕೀಯ ಗೆಲುವನ್ನು ನೋಡಲಾಗಲಿಲ್ಲ. ಈ ಹಿಂದಿನ 2019ರ ಚುನಾವಣೆಯಲ್ಲಿ ಕೂಡ ಸುಮಲತಾ ಎದುರು ನಿಖಿಲ್‌ಗೆ ಸೋಲಾಗಿತ್ತು. ಹೀಗಾಗಿ ನಿಖಿಲ್‌ ಅನ್ನು ಚನ್ನಪಟ್ಟಣದಲ್ಲಿ ನಿಲ್ಲಿಸುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ. 

ಆದ್ರೆ ವಿಷ್ಯ ಬೇರೆಯೇ ಇದೆ. ಬೆಂಗಳೂರು, ಕನಕಪುರ, ರಾಮನಗರ ಎಲ್ಲವೂ ಕನಕಪುರ ಬಂಡೆ ಖ್ಯಾತಿಯ ಡಿಕೆಶಿ ಭದ್ರಕೋಟೆ. ಹೀಗಾಗಿ ಲೋಕಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರದಿಂದ ಈಗ ಡಿಕೆ ಸುರೇಶ್ ಹೀನಾಯ ಸೋಲು ಕಂಡ ಹಿನ್ನೆಲೆ ಕುಮಾರಸ್ವಾಮಿ ಗೆಲುವಿನಿಂದ ಖಾಲಿ ಯಾಗುವ ಚನ್ನಪಟ್ಟಣದಲ್ಲಿ ಡಿಕೆಶಿ ಸಹೋದರನನ್ನು ನಿಲ್ಲಿಸಲು ಈಗ ಪ್ಲಾನ್‌ ನಡೆದಿದೆ ಎನ್ನಲಾಗಿದೆ. ಹೀಗಾಗಿ ಡಿಕೆ ಸುರೇಶ್ ರಾಷ್ಟ್ರರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರುವುದು ಪಕ್ಕಾ ಎನ್ನಲಾಗಿದೆ. ಡಿಕೆ ಸುರೇಶ್ ರಾಜಕೀಯ ಭವಿಷ್ಯ ಚನ್ನಪಟ್ಟಣದ ಬೈ ಎಲೆಕ್ಷನ್‌ ನಿರ್ಧಾರದ ಮೇಲೆ ಇದೆ ಎನ್ನುವುದಂತೂ ಸುಳ್ಳಲ್ಲ.

click me!