
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ(ಜು.31): ಮುಂದಿನ ತಿಂಗಳು ಆ.3ರಂದು ಸಿದ್ದರಾಮಯ್ಯ ಜನ್ಮ ದಿನಾಚರಣೆ ಹಿನ್ನೆಲೆ ದಾವಣಗೆರೆಯಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ AICC ಅಧ್ಯಕ್ಷ ರಾಹುಲ್ ಗಾಂಧಿಯವರು ಮೊದಲು, ಮುರುಘಾ ಮಠಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು. ಇಂದು(ಭಾನುವಾರ) ಚಿತ್ರದುರ್ಗಕ್ಕೆ ಆಗಮಿಸಿದ ಅವರು, ಮೊದಲು ಮುರುಘಾ ಮಠಕ್ಕೆ ಆಗಮಿಸಿದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗು ಡಿಕೆ ಅಭಿಮಾನಿಗಳು ಸೇಬಿನ ಹಾರ ಹಾಗೂ ಹೂವಿನ ಸುರಿಮಳೆಗೈಯ್ಯುವ ಮೂಲಕ ಅದ್ದೂರು ಸ್ವಾಗತ ಕೋರಿದರು.
ನಂತರ ಮುರುಘಾಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ನೀಡಿದರು. ಈ ವೇಳೆ ಡಿಕೆಶಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹಾಗೂ ಸ್ಥಳೀಯ ಕೈ ನಾಯಕರು ಸಾಥ್ ನೀಡಿದರು. ಈ ಸಂದರ್ಭದಲ್ಲಿ ಶರಣರ ಭೇಟಿಗೂ ಮುನ್ನ ಗದ್ದುಗೆ ದರ್ಶನ ಪಡೆದ ಡಿಕೆಶಿ. ತದನಂತರ ಡಾ.ಶಿವಮೂರ್ತಿ ಮುರುಘಾ ಶರಣರ ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಆಪ್ತ ಸಮಾಲೋಚನೆ. ಸುಮಾರು ಅರ್ಧ ಗಂಟೆಗಳ ಕಾಲ ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಜತೆ ಪ್ರತ್ಯೇಕ ಕೊಠಡಿಯಲ್ಲಿ ಸಮಾಲೋಚನೆ ನಡೆಸಿದರು. ಮುರುಘಾಶ್ರೀ ಭೇಟಿ ಬಳಿಕ ದಿ.ಎಸ್.ನಿಜಲಿಂಗಪ್ಪ ಸ್ಮಾರಕಕ್ಕೆ ಭೇಟಿ ನೀಡಿ, ಎಸ್.ನಿಜಲಿಂಗಪ್ಪ ಸ್ಮಾರಕ ಸಭಾಂಗಣದಲ್ಲಿ ಮುಖಂಡರ ಜತೆ ಸಭೆ ನಡೆಸಿದರು.
ಜನರ ರಕ್ಷಿಸದ ಈ ಸರ್ಕಾರ ಯಾಕೆ ಬೇಕು?: ಡಿಕೆಶಿ
ಇದಕ್ಕೂ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಆ. 3ಕ್ಕೆ ರಾಹುಲ್ ಗಾಂಧಿ ಚಿತ್ರದುರ್ಗದ ಮುರುಘಾಮಠಕ್ಕೆ ಭೇಟಿ ನೀಡುತ್ತಾರೆ. ಮುರುಘಾಮಠದ ಡಾ.ಶಿವಮೂರ್ತಿ ಮುರುಘಾ ಶರಣರು ಹಾಗೂ ಇತರೆ ಶ್ರೀಗಳನ್ನು ಭೇಟಿ ಮಾಡ್ತಾರೆ. ಆ. 2ಕ್ಕೆ ಹುಬ್ಬಳ್ಳಿಗೆ ಆಗಮಿಸಿ ಸಂಜೆ 8ಕ್ಕೆ ಸಭೆ ನಡೆಸಲಿದ್ದಾರೆ ಆಗಷ್ಟ್ 2ಕ್ಕೆ ಹುಬ್ಬಳ್ಳಿಯಲ್ಲಿ ಪಾಲಿಟಿಕಲ್ ಅಫೇರ್ಸ್ ಕಮಿಟಿ ಸಭೆಯಿದೆ. ಆ. 3ಕ್ಕೆ ದಾವಣಗೆರೆ ಅಮೃತ ಮಹೋತ್ಸವದಲ್ಲಿ ರಾಹುಲ್ ಭಾಗಿಯಾಗಲಿದ್ದಾರೆ. ಮಾಜಿ ಸಿಎಂ ಸಿದ್ಧರಾಮಯ್ಯ ಜನ್ಮ ದಿನದ ಅಂಗವಾಗಿ ಅಮೃತ ಮಹೋತ್ಸವ ಕಾರ್ಯಕ್ರಮ. ಭಾರತ್ ಜೋಡೋ ಪಾದಯಾತ್ರೆ ವೇಳೆ ವಿವಿಧ ಮಠಾಧೀಶರ ಭೇಟಿ. ಮುಂದಿನ ತಿಂಗಳಲ್ಲಿ ರಾಹುಲ್ ಗಾಂಧಿ ಪಾದಯಾತ್ರೆ ಮಾಡಲಿದ್ದಾರೆ.
ಕರಾವಳಿ ಭಾಗದಲ್ಲಿ ಸರಣಿ ಹತ್ಯೆ ಪ್ರಕರಣ ವಿಚಾರ. ರಾಜ್ಯದಲ್ಲಿ ಲಾ ಅಂಡ್ ಆರ್ಡರ್ ಸಂಪೂರ್ಣ ಹದಗೆಟ್ಟಿದೆ ಎಂದು ಡಿಕೆಶಿ ಕಿಡಿಕಾರಿದರು. ಬಿಜೆಪಿ ಸರ್ಕಾರ ಜನರ ನಡುವೆ ತಾರತಮ್ಯ ಮಾಡುತ್ತಿದೆ. ಸುಳ್ಯದಲ್ಲಿ ಹಿಂದೂ ಹತ್ಯೆ ಆಗಿದ್ದು ಅನ್ಯಾಯ, ಖಂಡಿಸುತ್ತೇವೆ. ಸರ್ಕಾರ ನ್ಯಾಯ ಒದಗಿಸಿಕೊಡಬೇಕು ಎಂದರು. ಅದಕ್ಕೂ ಮುನ್ನ ಮುಸ್ಲಿಂ ವ್ಯಕ್ತಿಯ ಹತ್ಯೆ ಆಗಿದ್ದು ತಪ್ಪು. ಸೂರತ್ಕಲ್ ನಲ್ಲಿ ಆಗಿರುವ ಹತ್ಯೆಯೂ ಖಂಡನೀಯ. ಸರ್ಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕು, ಬೇಧ ಭಾವ ಸಲ್ಲದು. ಯಾರದ್ದೇ ಕೊಲೆ ನಡೆದರೂ ತಪ್ಪು, ಸರ್ಕಾರ ಎಲ್ಲರನ್ನೂ ಒಂದೇ ರೀತಿ ನೋಡಬೇಕೆಂದು ಸರ್ಕಾರಕ್ಕೆ ಆಗ್ರಹ. ಜಾತಿವಾದಿ ಡಿಕೆಶಿ, ಸಿದ್ಧರಾಮಯ್ಯ ಸಿಎಂ ಆಗಲ್ಲ ಎಂದು ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಹೇಳಿಕೆಗೂ ನಾನು ಉತ್ತರ ನೀಡುವ ಸ್ಥಿತಿಯಲ್ಲಿಲ್ಲ. ಜನ ಉತ್ತರ ಕೊಡ್ತಾರೆ, ಉತ್ತರ ಕೊಡುವಾಗ ಕೊಡುತ್ತೇನೆ ಎಂದು ಖಡಕ್ ಸಂದೇಶ ರವಾನಿಸಿದರು.
ಇನ್ನೂ ಎಸ್.ನಿಜಲಿಂಗಪ್ಪ ಸ್ಮಾರಕದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಿಕೆಶಿ, ಕಾಂಗ್ರೆಸ್ ಸಭೆ ಉದ್ದೇಶಿಸಿ ಭಾಷಣ ಮಾಡುವ ವೇಳೆ ಒಗ್ಗಟ್ಟಿನ ಮಂತ್ರ ಜಪ ಮಾಡಿದರು. ಬಿಜೆಪಿ ಸರ್ಕಾರ ಮೊಸರು, ಮಜ್ಜಿಗೆ ಸೇರಿ ದಿನಬಳಕೆ ವಸ್ತುಗಳ ಮೇಲೆ ಟ್ಯಾಕ್ಸ್ ಹಾಕಿದೆ. ಆಗಷ್ಟ್ 3ಕ್ಕೆ ನಮ್ಮ ನಾಯಕರ ಹುಟ್ಟು ಹಬ್ಬ, ಆಗಷ್ಟ್ 15ದೇಶದ ಹುಟ್ಟು ಹಬ್ಬ ಎಂದರು. ಆ. 15ಕ್ಕೆ ಬೆಂಗಳೂರಲ್ಲಿ 6ಕಿ.ಮೀ ರಾಷ್ಟ್ರಧ್ವಜ ಮೆರವಣಿಗೆ. ಮುಂದಿನ ತಿಂಗಳು 'ಭಾರತ್ ಜೋಡೋ' ಮೂಲಕ ರಾಹುಲ್ ಗಾಂಧಿ ಪಾದಯಾತ್ರೆ. ಆ.3ಕ್ಕೆ ರಾಹುಲ್ ಗಾಂಧಿಯಿಂದ ಮುರುಘಾಮಠದ ಶ್ರೀಗಳ ಭೇಟಿ. ಶ್ರೀಗಳ ಭೇಟಿ ಬಳಿಕ ನಾವು ದಾವಣಗೆರೆಗೆ ತೆರಳುತ್ತೇವೆ. ನಮ್ಮ ಹೋರಾಟ ಬಿಜೆಪಿ ಮೇಲೆ, ಜೆಡಿಎಸ್ ಮೇಲೆ ಅವನು ಹಂಗಂದ, ಇವನು ಹಿಂಗಂದ ಅಂತ ಕೂಡಬಾರದು ನಾವು ನಾವೇ ಫೈಟ್ ಮಾಡುತ್ತ ಟೈಮ್ ವೇಸ್ಟ್ ಮಾಡಬಾರದು ನಾನು ಈಶ್ವರ್ ಖಂಡ್ರೆ ಫೈಟ್ ಮಾಡಿಕೊಂಡು ಕೂಡುವುದಲ್ಲ ನೀವೆಲ್ಲಾ ವಿಧಾನಸೌಧದ 3ನೇ ಮಹಡಿಯಲ್ಲಿ ಓಡಾಡಬೇಕು. ಈ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ತರುವುದಕ್ಕೆ ನಮ್ಮ ಹೋರಾಟ. ಮೂರ್ನಾಲ್ಕು ವರ್ಷದಿಂದ ತೊಂದರೆ ಪಟ್ಟಿದ್ದು ನೀವು ಬಲ್ಲಿರಿ. ಮನೆ ಬಾಗಿಲಿಗೆ ಅವಕಾಶ, ಅಧಿಕಾರ, ಬೆಳಕು, ಲಕ್ಷ್ಮೀ ಬರ್ತಿದ್ದಾಳೆ. ಕೈ ಮುಗಿದು ಬಾತಾಯಿ ಎಂದು ಕರೆದುಕೊಂಡು ಬರಬೇಕು. ಕಳೆದುಕೊಂಡು ಬಳಿಕ ಹೀಗೆ ಮಾಡಬಾರದಿತ್ತು ಎಂದು ಮರುಗಬಾರದು. ಕೆಲವೇ ಮತಗಳಲ್ಲಿ ಸೋಲು ಕಂಡಿತುವ ಉದಾಹರಣೆಗಳಿವೆ ಎಂದು ಡಿಕೆಶಿ ತಮ್ಮ ಭಾಷಣಕ್ಕೆ ವಿರಾಮ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.