ಮುಸ್ಲಿಂ ಸಮಾಜಕ್ಕೆ ನ್ಯಾಯ ಕೊಡಿಸ್ತೇವೆ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

Published : Mar 24, 2026, 10:54 PM IST
DK Shivakumar

ಸಾರಾಂಶ

ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕು ಇದ್ದು, ಪಕ್ಷಕ್ಕೋಸ್ಕರ ದುಡಿದಿರುತ್ತಾರೆ. ಮುಸ್ಲಿಂ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ದಾವಣಗೆರೆ (ಮಾ.24): ರಾಜಕೀಯದಲ್ಲಿ ಪ್ರತಿಯೊಬ್ಬರಿಗೂ ಟಿಕೆಟ್ ಕೇಳುವ ಹಕ್ಕು ಇದ್ದು, ಪಕ್ಷಕ್ಕೋಸ್ಕರ ದುಡಿದಿರುತ್ತಾರೆ. ಮುಸ್ಲಿಂ ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ನಾವು ಖಂಡಿತಾ ಮಾಡುತ್ತೇವೆ ಎಂದು ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ನಾಮಪತ್ರ ಸಲ್ಲಿಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಂಡಿತವಾಗಿಯೂ ಮುಸ್ಲಿಂ ಸಮುದಾಯಕ್ಕೆ ಹಿಂದೆಯೂ ಅವಕಾಶ, ನ್ಯಾಯ ಕೊಡಿಸುವ ಕೆಲಸವನ್ನು ಪಕ್ಷ ಮಾಡಿದೆ, ಮುಂದೆಯೂ ಮಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಾದಿಕ್ ಪೈಲ್ವಾನ್‌ರವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಿನೇಷನ್ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪನವರ ಪಟ್ಟದ ಶಿಷ್ಯರಾಗಿರುವ ಸಾದಿಕ್‌ ಪೈಲ್ವಾನ್‌ ಮನವೊಲಿಸುತ್ತೇವೆ. ಎಲ್ಲವನ್ನೂ ಸರಿ ಮಾಡುತ್ತೇವೆ. ಪಕ್ಷಕ್ಕಾಗಿ ದುಡಿದಿರುತ್ತಾರೆ. ಕೇಳುವುದು ದುಡಿದವರ ಹಕ್ಕು. ಆ ಎಲ್ಲ ಬೇಡಿಕೆಗಳಿಗೂ ಸ್ಪಂದಿಸುತ್ತೇವೆ ಎಂದು ಅವರು ತಿಳಿಸಿದರು. ನಾವು ಮಾಡುತ್ತಿರುವ ಅಭಿವೃದ್ಧಿ ಕಾರ್ಯ, ಸಾಮಾಜಿಕ ಚಿಂತನೆ, ನ್ಯಾಯ ಸಿದ್ಧಾಂತದಡಿ ಚುನಾವಣೆಯನ್ನು ನಾವು ಎದುರಿಸುತ್ತೇವೆ.

ಶಾಮನೂರು ಕುಟುಂಬ ಕಾಂಗ್ರೆಸ್ ಪಕ್ಷದ ಆಸ್ತಿ. ಅಂತಹ ಕುಟುಂಬದ ಕುಡಿ ಸಮರ್ಥ ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಸಮರ್ಥ ಗೆಲ್ಲುತ್ತಾರೆ. ವಿದೇಶದಲ್ಲಿ ಓದಿ, ನಗರ, ಗ್ರಾಮೀಣರ ಸೇವೆಗಾಗಿ ತನ್ನದೇ ಆದ ಆಸೆ, ಆಕಾಂಕ್ಷೆಯಿಂದ ಸಮಾಜ ಸೇವೆಗೆ ಬಂದ ಸಮರ್ಥ ಎಂದು ಅವರು ಹೇಳಿದರು. ಉನ್ನತ ಶಿಕ್ಷಣಕ್ಕೆ ಮತ್ತೆ ವಿದೇಶಕ್ಕೆ ಕಳಿಸಲು ಮುಂದಾಗಿದ್ದ ವೇಳೆ ಸಮರ್ಥಗೆ ಶಾಮನೂರು ಶಿವಶಂಕರಪ್ಪ ಅವರು ಇಲ್ಲಿಯೇ ಓದಿ, ವ್ಯಾಪಾರ, ವಹಿವಾಟು ನೋಡಿಕೊಂಡಿರುವಂತೆ ಸೂಚಿಸಿದ್ದರು.

ಶಾಮನೂರು ಅಗಲಿಕೆ ನಂತರ ಪಕ್ಷದ ಮುಖಂಡರು, ಕಾರ್ಯಕರ್ತರು ಉಪ ಚುನಾವಣೆಗೆ ಸಮರ್ಥ ಎಂ. ಶಾಮನೂರು ಹೆಸರು ಸೂಚಿಸಿದ್ದರು. ಅದರಂತೆ ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ ಎಂದು ಅವರು ವಿವರಿಸಿದರು. ಹಲವಾರು ಬಿಜೆಪಿಯವರು ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ನಮಗೆ ಬಹಳ ಸಂತೋಷವಾಗಿದೆ. ಬಿಜೆಪಿಯಲ್ಲಿ ಅಭ್ಯರ್ಥಿ ಗೊಂದಲದ ಕಾರಣಕ್ಕೆ ಕಾಂಗ್ರೆಸ್‌ ಸೇರಿದ್ದಾರೆ. ಆ ಎಲ್ಲರನ್ನೂ ಪ್ರತ್ಯೇಕವಾಗಿ ಮಾತನಾಡಿಸುತ್ತೇನೆ. ಮತ್ತೆ ದಾವಣಗೆರೆಗೆ ಬರುತ್ತೇನೆ. ನಮ್ಮ ನಾಯಕತ್ವ, ಪಕ್ಷದ ಸಿದ್ಧಾಂತರ ಮೇಲೆ ನಂಬಿಕೆ ಇಟ್ಟು ಬಂದವರಿಗೆ ಪಕ್ಷಕ್ಕೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದರು.

ಬೆಂಗಳೂರಿಗಿಂತಲೂ ಚೆನ್ನಾಗಿರುವ ನಗರ ಇದು. ಹರಿಹರ, ದಾವಣಗೆರೆ ಸೇರಿ ಕೈಗಾರಿಕಾ ಹಬ್ ಆಗಿತ್ತು. ಶಾಮನೂರು ಶಿವಶಂಕರಪ್ಪನವರಿಂದ ಎಜುಕೇಷನ್ ಹಬ್ ಆಗಿ, ದಾವಣಗೆರೆ ಗಮನ ಸೆಳೆಯುತ್ತಿದೆ. ನೂರಾರು ಕೋಟಿ ಪ್ಯಾಕೇಜ್ ರಸ್ತೆ ಅಗಲೀಕರಣ ಇತರೆ ಕಾರ್ಯಕ್ಕೆ ನೀಡಿದ್ದೇವೆ. ಶಾಮನೂರು ಶಿವಶಂಕರಪ್ಪ ಕೊಡುಗೆ ದೊಡ್ಡದು. ಸರ್ಕಾರದಿಂದ ಎಲ್ಲಾ ಕ್ಷೇತ್ರಗಳಿಗೂ ವಿಶೇಷ ಕೊಡುಗೆಯನ್ನು ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ದಕ್ಷಿಣ ಕ್ಷೇತ್ರದಲ್ಲಿ ಸಮರ್ಥ ಶಾಮನೂರು ಗೆಲ್ಲುವ ಸಂಪೂರ್ಣ ವಿಶ್ವಾಸವಿದೆ. ಬಾಗಲಕೋಟೆ ಕ್ಷೇತ್ರದಲ್ಲೂ ಕಾಂಗ್ರೆಸ್ ಜಯ ಸಾಧಿಸಲಿದೆ. ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಕ್ಕೆ ಕೊಡುಗೆ ಕೊಟ್ಟು, ದಾವಣಗೆರೆ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಿದೆ. ಎಲ್ಲ ಶಕ್ತಿ ಇದ್ದರೂ ಗ್ಯಾರಂಟಿ ಯೋಜನೆ ಮೂಲಕ ಆಸರೆ ಆಗುತ್ತಿದ್ದೇವೆ. ಜನರು ನೆನೆಸುತ್ತಿದ್ದಾರೆ, ನಮ್ಮಿಂದಲೂ ಸರ್ವೇ ಮಾಡಿಸಿದ್ದೇವೆ. ಕಾಂಗ್ರೆಸ್ ಪಕ್ಷವು ಉಪ ಚುನಾವಣೆಗಳಲ್ಲಿ ಜಯ ಸಾಧಿಸಲಿದೆ ಎಂದು ಡಿ.ಕೆ. ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ.ಶಾಮನೂರು, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ, ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ, ಮಾಜಿ ಸಚಿವ ಎಚ್.ಆಂಜನೇಯ ಇತರರು ಇದ್ದರು.

ಪತ್ರಿಕಾ ಜಾಹೀರಾತು ನೀತಿ-2026 ಬಗ್ಗೆ ಚರ್ಚೆ

ರಾಜ್ಯದಲ್ಲಿ ಕರ್ನಾಟಕ ಜಾಹೀರಾತು ನೀತಿ-2026 ವಿರೋಧಿಸಿ ದಾವಣಗೆರೆ ಜಿಲ್ಲೆಯ ಸ್ಥಳೀಯ ಪತ್ರಿಕೆಗಳು, ಪ್ರಾದೇಶಿಕ ಪತ್ರಿಕೆಗಳ ಸಂಪಾದಕರು ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ, ನನಗೆ, ಸಚಿವರಿಗೆ ಮನವಿ ಅರ್ಪಿಸಿದ್ದೀರಿ. ನಿಮ್ಮ ಬೇಡಿಕೆ ಕುರಿತಂತೆ ಬೆಂಗಳೂರಿನಲ್ಲಿ ಚರ್ಚಿಸಿ, ನಿಮಗೆ ಶಕ್ತಿ ತುಂಬಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಮಾಧ್ಯಮಗಳು ಪ್ರಜಾಪ್ರಭುತ್ವದ ಒಂದು ಅಂಗ. ನಿಮ್ಮ ಬೇಡಿಕೆಗೆ ಖಂಡಿತಾ ನಾವು ಸ್ಪಂದಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಉಪಚುನಾವಣೆಯಲ್ಲಿ ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವು ನಿಶ್ಚಿತ: ಸಚಿವ ಶಿವಾನಂದ ಪಾಟೀಲ
'ಕರ್ನಾಟಕವನ್ನ ದೇವರೇ ಉಳಿಸಬೇಕು': ರಾಜ್ಯ ಸರ್ಕಾರದ ವಿರುದ್ಧ ರಾಜ್ಯಸಭೆಯಲ್ಲಿ ಹೆಚ್.ಡಿ. ದೇವೇಗೌಡರ ಗುಡುಗು!