
ಬೆಂಗಳೂರು, (ಫೆ.01): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ದೇಶದ 2022-23ನೇ ಸಾಲಿನ ಕೇಂದ್ರ ಬಜೆಟ್ (Uinon Budget 2022) ಅನ್ನು ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದರು.
ಈ ಬಜೆಟ್ನಲ್ಲಿ ಕರ್ನಾಟಕಕ್ಕೆ (Karnataka) ಏನಾದರೂ ಸಿಗುತ್ತೆ ಎನ್ನುವ ಭಾರೀ ನಿರೀಕ್ಷೆಗಳು ಇದ್ದವು. ಆದ್ರೆ, ಆ ನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಇನ್ನು ಈ ಬಜೆಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪ್ರತಿಕ್ರಿಯಿಸಿದ್ದು, ಬಜೆಟ್ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
"
Union Budget 2022: ಯಾವ ಕ್ಷೇತ್ರಕ್ಕೆ ಏನೇನು ಸಿಕ್ಕಿದೆ.? ನಿರ್ಮಲಕ್ಕನ ಲೆಕ್ಕ ಹೀಗಿದೆ
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಕರ್ನಾಟಕದ 25 ಸಂಸದರು ಹಾಗೂ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್ನಲ್ಲಿ ರಾಜ್ಯಕ್ಕೆ ಸುರಿಮಳೆಯನ್ನೇ ಸುರಿಸಿದ್ದಾರೆ. ರಾಜ್ಯಕ್ಕೆ ಹೆಸರೇ ಇಲ್ಲದಂತ ಬಜೆಟ್ ಕೊಡಿಸಿದ್ದಾರೆ ಅದಕ್ಕೆ ನಾವು ಅವರನ್ನ ಅಭಿನಂದಿಸ್ತೇನೆ ಎಂದು ಲೇವಡಿ ಮಾಡಿದರು.
ನಿರ್ಮಲಾ ಸೀತಾರಾಮ್ ನಮ್ಮ ರಾಜ್ಯದಿಂದ ಹೋಗಿದ್ದಾರೆ. ಇಲ್ಲಿನ ಋಣ ತೀರಿಸಬೇಕೆಂದು ಕಾರ್ಯಕ್ರಮ ಕೊಡಬೇಕಿತ್ತು. ಇದು ಕೇಂದ್ರದ ಬಜೆಟ್ ಅಲ್ಲ. ಇದೊಂದು ಕೋವಿಡ್ ಬಜೆಟ್ ಆಗಿದೆ. ಕೋವಿಡ್ ನಿಂದ ಜನಸಾಮಾನ್ಯರು ನರಳುತ್ತಿದ್ದಾರೆ. ಈ ಬಜೆಟ್ ಕೂಡ ಇದೇ ರೀತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನರೇಗಾ ಹಣವನ್ನೂ ಕಡಿಮೆ ಮಾಡಿದರು. 2ಕೋಟಿ ಉದ್ಯೋಗ ಕೊಡ್ತೇವೆ ಎಂದಿದ್ದರು. ಅದನ್ನು ಈಗ 60 ಲಕ್ಷಕ್ಕೆ ಇಳಿಸಿದ್ದಾರೆ. ಕೊರೋನಾ ಸಂದರ್ಭದಲ್ಲಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ರೈತರಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ. ಬಜೆಟ್ನಿಂದ ರೈತರಿಗೆ ಏನಾದರೂ ಸಹಾಯವಾಗಿದೆಯಾ.?ವೇತನದವರಿಗೂ ರಿಲೀಫ್ ಇಲ್ಲ. 40 ವರ್ಷದಿಂದ ಇಂತಹ ರೋಗಿಷ್ಟ ಬಜೆಟ್ ನೋಡಿಲ್ಲ ಎಂದು ಕಿಡಿಕಾರಿದರು.
ಇನ್ನು ಬಡ್ಡಿರಹಿತ ಸಾಲ ರಾಜ್ಯಕ್ಕೆ ಕೊಟ್ಟಿದ್ದಾರೆ. ಬಡ್ಡಿ ರಹಿತ ಸಾಲ ಜನರಿಗೆ ಕೊಡುತ್ತಿದ್ದಾರಾ..? ಡಿಜಿಟಲ್ ವಿವಿ ರಾಜ್ಯದಲ್ಲಿ ಮಾಡಿಬಿಡಲಿ. ಜಮೀನನ್ನು ನಾವೇ ಕೊಡಿಸುತ್ತೇವೆ ಮಾಡಿಸಿ. ಸಿಎಂ ಡಿಜಿಟಲ್ ವಿವಿ ರಾಜ್ಯಕ್ಕೆ ತರಲಿ. ಇನ್ನು ಸರ್ಕಾರದಲ್ಲಿ ಮೆಂಟಲ್ ಕೇಸ್ ಜಾಸ್ತಿ ಇವೆ ಹೀಗಾಗಿ ನಿಮ್ಹಾನ್ಸ್ಗೆ ನೂಡಲ್ ಏಜೆನ್ಸಿ ಕೊಟ್ಟಿದ್ದಾರೆ. ಈ ಬಜೆಟ್ ವಿಚಾರದಲ್ಲಿ ಬಿಜೆಪಿಯವರಿಗೆ ಸನ್ಮಾನ ಮಾಡಬೇಕು ಎಂದು ಲೇವಡಿ ಮಾಡಿದರು.
ಯಡಿಯೂರಪ್ಪ ಪ್ರತಿಕ್ರಿಯೆ
ಭಾರತ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲ ಸೀತಾರಾಮನ್ ಮಂಡಿಸಿದ 2022-23ನೇ ಸಾಲಿನ ಆಯವ್ಯಯವು ಕೋವಿಡ್-19ರಿಂದ ಉಂಟಾದ ಆರ್ಥಿಕ ಹಿಂಜರಿತವನ್ನು ಸರಿಪಡಿಸುವ ದೃಷ್ಟಿಯಲ್ಲಿ ಹಾಗೂ ದೀರ್ಘಾವಧಿ ಆರ್ಥಿಕ ಅಭಿವೃದ್ಧಿಯ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕವಾಗಿದೆ. ಡಿಜಿಟಲೀಕರಣ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು, ವಿಶೇಷವಾಗಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಬಜೆಟ್ ಆಗಿದೆ ಎಂದಿದ್ದಾರೆ.
ಪ್ರತಿ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಒದಗಿಸುವುದು, ನಗರ ಪ್ರದೇಶದಲ್ಲಿ ವಿದ್ಯುತ್ ಚಾಲಿತ ವಾಹನಗಳಿಗೆ ಬ್ಯಾಟರಿ ಸ್ವಾಪಿಂಗ್ ಕೇಂದ್ರ ಸ್ಥಾಪನೆ ಉದ್ದೇಶಿಸಿರುವುದು ಸ್ವಾಗತಾರ್ಹ ವಿಷಯ.
ದೇಶದ ಪ್ರಮುಖ ನದಿಗಳ ಜೋಡಣೆ, ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿರುವುದು, 2023ರ ವರ್ಷವನ್ನು "ಅಂತರಾಷ್ಟ್ರೀಯ ಸಿರಿಧಾನ್ಯ" ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಮಂಡಿಸಿರುವ ವಿತ್ತ ಸಚಿವರನ್ನು ಹಾಗೂ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.