ಜಿಲ್ಲೆಗೆ ಪ್ರವೇಶ ನಿರ್ಬಂಧ ಹಿನ್ನೆಲೆ; ಡಿಜಿಟಲ್‌ ಪ್ರಚಾರದ ಮೊರೆ ಹೋದ ವಿನಯ ಕುಲಕರ್ಣಿ

By Kannadaprabha NewsFirst Published Apr 21, 2023, 8:29 AM IST
Highlights

ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಕೋರಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ, ಧಾರವಾಡ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಇದೀಗ ಕ್ಷೇತ್ರದ ಜನರ ಭೇಟಿ ಹಾಗೂ ಮತ ಕೇಳಲು ಡಿಜಿಟಲ್‌ ಪ್ರಚಾರ(Digital campaigning)ಕ್ಕೆ ಮೊರೆ ಹೋಗಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ (ಏ.21) : ಚುನಾವಣಾ ಪ್ರಚಾರಕ್ಕಾಗಿ ಜಿಲ್ಲೆಯ ಪ್ರವೇಶಕ್ಕೆ ಅವಕಾಶ ಕೋರಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ, ಧಾರವಾಡ ಮತ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಲಕರ್ಣಿ ಇದೀಗ ಕ್ಷೇತ್ರದ ಜನರ ಭೇಟಿ ಹಾಗೂ ಮತ ಕೇಳಲು ಡಿಜಿಟಲ್‌ ಪ್ರಚಾರ(Digital campaigning)ಕ್ಕೆ ಮೊರೆ ಹೋಗಿದ್ದಾರೆ.

Latest Videos

ವಿಧಾನಸಭಾ ಚುನಾವಣೆ(Karnataka assembly election 2023)ಯ ಭಾಗವಾಗಿ ವಿನಯ ಕುಲಕರ್ಣಿ ಅವರು ಈಗಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದು, ಇಲ್ಲಿಯವರೆಗೂ ಅವರ ಅನುಪಸ್ಥಿ ಯಲ್ಲಿ ನಾಮಪತ್ರ ಸಲ್ಲಿಕೆ, ಪ್ರಚಾರ ಎಲ್ಲವೂ ಸಾಂಗವಾಗಿತ್ತು. ವಿನಯ(Vinaya kulkarni) ಅವರಿಗೆ ಟಿಕೆಟ್‌ ಘೋಷಿಸುವ ಮುಂಚಿನಿಂದಲೂ ಕ್ಷೇತ್ರದಲ್ಲಿ ಸಂಚರಿಸಿ ಅಭಿಮಾನಿಗಳು, ಕಾರ್ಯಕರ್ತರು ಪ್ರಚಾರ ಶುರು ಮಾಡಿದ್ದರು. ಆದರೆ, ನಾಮಪತ್ರ ಸಲ್ಲಿಕೆ ಆನಂತರ ಸ್ವತಃ ತಾವೇ ಕ್ಷೇತ್ರಕ್ಕೆ ಹೋಗಿ ಅದ್ಧೂರಿ ಪ್ರಚಾರ ನಡೆಸಬೇಕೆಂಬ ಆಶಯ ಹೊಂದಿದ್ದರು. ಆದರೆ, ನ್ಯಾಯಾಲಯ ದ ತೀರ್ಮಾನ ಅವರ ಆಶಯಕ್ಕೆ ತಣ್ಣೀರು ಎರಚಿದೆ. ಹೀಗಾಗಿ ಕ್ಷೇತ್ರದ ಜನರನ್ನು ನೇರವಾಗಿ ತಲುಪಲು ವಿನಯ ಕುಲಕರ್ಣಿ ಹೊಸ ಹಾದಿ ಹಿಡಿದಿದ್ದಾರೆ.

ನನ್ನ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ಗಟ್ಟಿಯಾಗಿ ಧ್ವನಿ ಎತ್ತಲಿಲ್ಲ : ಶೆಟ್ಟರ್

ಹೇಗೆ ಪ್ರಚಾರ?: ಧಾರವಾಡ ಕ್ಷೇತ್ರದಲ್ಲಿ ನಾಲ್ಕು ವಾಹನಗಳಿಗೆ ಬೃಹದಾಕಾರದ ಎಲ್‌ಇಡಿ ಸ್ಕ್ರೀನ್‌(LED Screen)ಅಳವಡಿಸಿ ಪ್ರತಿ ದಿನ ಹಳ್ಳಿ ಹಳ್ಳಿಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ ಮೂಲಕ ಮತ ಯಾಚಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಬೆಳಗ್ಗೆ 11ರಿಂದ 2ರ ವರೆಗೆ ಹಾಗೂ ಸಂಜೆ 4ರಿಂದ 6.30ರ ವರೆಗೆ ಈ ವಾಹನಗಳು ಕ್ಷೇತ್ರದ ಹಳ್ಳಿ ಹಳ್ಳಿಗಳಿಗೂ ಸಂಚರಿಸಲಿದ್ದು, ನೇರ ಪ್ರಸಾರದ ಮೂಲಕ ಮತದಾರನ್ನು ವಿನಯ್‌ ತಲುಪಲಿದ್ದಾರೆ. ಈ ವಾಹನದಲ್ಲಿ ಧ್ವನಿಮುದ್ರಿತ ಭಾಷಣಗಳಿದ್ದು, ಉಳಿದ ಸಮಯದಲ್ಲಿ ಈ ಮೂಲಕ ಗಮನ ಸೆಳೆಯುವುದು ಯೋಜನೆಯಾಗಿದೆ.

ವಿನಯ ಅನುಪಸ್ಥಿತಿಯಲ್ಲಿ ಮತ್ತೊಮ್ಮೆ ಶೀವಲೀಲಾ ನಾಮಪತ್ರ ಸಲ್ಲಿಕೆ

ಕಳೆದ ಎರಡು ದಿನಗಳ ಹಿಂದೆ ವಿನಯ ಕುಲಕರ್ಣಿ ಪರವಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಗುರುವಾರ ಇಡೀ ತಮ್ಮ ಬೆಂಬಲಿಗರ, ಕಾರ್ಯಕರ್ತರ ಪಡೆಯೊಂದಿಗೆ ಭರ್ಜರಿಯಾಗಿ ತಮ್ಮ ಜನಶಕ್ತಿ ಪ್ರದರ್ಶನ ತೋರುವ ಮೂಲಕ ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಿದರು.

ಮುರುಘಾಮಠದಿಂದ ಅದ್ಧೂರಿಯಾಗಿ ಶುರುವಾದ ಮೆರವಣಿಗೆ ಸಿಬಿಟಿ ಮೂಲಕ ಸಾಗಿ ಕಲಾಭವನ ವೃತ್ತದ ಮೂಲಕ ಉಪ ವಿಭಾಗಾಧಿಕಾರಿ ಕಚೇರಿಗೆ ಬಂದು ಚುನಾವಣಾಧಿಕಾರಿ ಅಶೋಕ ತೇಲಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು.

ವಿನಯ ಕುಲಕರ್ಣಿ ಅವರ ಸ್ಪರ್ಧೆಯಿಂದ ಈಗಾಗಲೇ ಧಾರವಾಡ ಗ್ರಾಮೀಣ ಕ್ಷೇತ್ರ ತೀವ್ರ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ವಿನಯ ಅವರ ಮೇಲಿನ ಅಭಿಮಾನಕ್ಕಾಗಿ ಅವರ ನಾಮಪತ್ರ ಸಲ್ಲಿಕೆ ವೇಳೆ ಹತ್ತು ಸಾವಿರಕ್ಕೂ ಹೆಚ್ಚು ಜನ ಆಗಮಿಸಿ ಉಮೇದುವಾರಿಕೆಗೆ ಸಾಕ್ಷಿಯಾದರು. ಪ್ರತಿಯೊಬ್ಬರ ಕೈಯಲ್ಲಿ ವಿನಯ ಅವರ ಚಿಕ್ಕ ಚಿಕ್ಕ ಕಟೌಟ್‌ಗಳು ರಾರಾಜಿಸುತ್ತಿದ್ದವು. ಪ್ರತಿಯೊಬ್ಬರೂ ವಿನಯ ಅವರ ಮುಖವಾಡ ಧರಿಸಿ ವಿನಯ ಇಲ್ಲದಿದ್ದರೂ ಅವರಂತೆಯೇ ಗೋಚರಿಸಿ ರಾರ‍ಯಲಿಯಲ್ಲಿ ಗಮನಸೆಳೆದರು. ಜತೆಗೆ ಅವರ ಭಾವಚಿತ್ರಕ್ಕೆ ಕ್ಷೀರಾಭಿಷೇಕ ಸಹ ಮಾಡಿದರು.

ರಸ್ತೆಯ ಇಕ್ಕೆಲಗಳಲ್ಲೂ ಜನ ನಿಂತು ಬೆಂಬಲಿಸಿದರು. ರಾರ‍ಯಲಿಯಲ್ಲಿ ವಿನಯ ಅವರ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್‌ ಪಾಲ್ಗೊಂಡಿದ್ದರು. ಜನರತ್ತ ಕೈಬೀಸಿ ತಮ್ಮ ತಂದೆಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ವಿನಯ ಅವರು ಕುದುರೆ ಸವಾರಿಯಲ್ಲಿ ಎತ್ತಿದ ಕೈ. ಹೀಗಾಗಿ ಅವರ ಅಭಿಮಾನಿಗಳು ರಾರ‍ಯಲಿಯಲ್ಲಿ ಎರಡು ಕುದುರೆಗಳನ್ನೂ ತಂದು ಗಮನಸೆಳೆದರು. ತೆರೆದ ವಾಹನದ ಮೂಲಕ ಶಿವಲೀಲಾ ಅವರು ಮೆರವಣಿಗೆ ನಡೆಸಿದರು. ವಿನಯ ಅವರ ಅಭಿಮಾನಿಗಳು ತೆರೆದ ವಾಹನದ ಮೇಲಿದ್ದ ನಾಯಕರ ಮೇಲೆ ಹೂಮಳೆಗರೆದರು. ಅಲ್ಲದೇ ಕ್ರೇನ್‌ ಮೂಲಕ ಮಾಲಾರ್ಪಣೆ ಹಾಗೂ ವಿನಯ ಕುಲಕರ್ಣಿ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಜನ ‘ವಿಕೆ ಬಾಸ್‌ಗೆ ಜೈ’ ಎನ್ನುವ ಘೋಷಣೆಗಳನ್ನು ಕೂಗಿದರು.

ಶಿವಲೀಲಾ ಅವರು ಉಪವಿಭಾಗಾ​ಧಿಕಾರಿ ಕಚೇರಿಗೆ ನಾಮಪತ್ರ ಸಲ್ಲಿಸಲು ಬಂದ ವೇಳೆ ಮಾಜಿ ಸಚಿವ, ಕಲಘಟಗಿ ಕಾಂಗ್ರೆಸ್‌ ಅಭ್ಯರ್ಥಿ ಸಂತೋಷ್‌ ಲಾಡ್‌ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಸಾಥ್‌ ನೀಡಿದರು.

ಈ ಸಮಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಲೀಲಾ ಕುಲಕರ್ಣಿ, ವಿನಯ ಕುಲಕರ್ಣಿ ಅವರಿಗೆ ಪ್ರವೇಶ ನಿರಾಕರಣೆ ಇದ್ದರೂ ಅವರ ಮೇಲಿನ ಅಭಿಮಾನದಿಂದ ಸಾವಿರಾರು ಜನರು ಸ್ಪಂದಿಸಿದ್ದು ನೋಡಿದರೆ, 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ಸಾಧ್ಯತೆ ಇದೆ. ಅವರ ಪರವಾಗಿ ನಾನು, ಮಕ್ಕಳು ಮನೆ ಮನೆಗೆ ಹೋಗಿ ಮತ ಕೇಳುತ್ತೇವೆ. ಕ್ಷೇತ್ರದಲ್ಲಿ ಏನಾದರೂ ಅಹಿತಕರ ಘಟನೆ ನಡೆದರೆ ಅವರ ತಲೆಗೆ ಕಟ್ಟುವ ಸಂಸ್ಕೃತಿ ಬೆಳೆದಿದೆ. ಆದರೆ, ಜನರು ನಮ್ಮವರ ಮೇಲೆ ವಿಶ್ವಾಸ ಹೊಂದಿದ್ದಾರೆ. ಅವರು ಜಿಲ್ಲೆಯ ಗಡಿಯಲ್ಲಿ ಕುಳಿತು ಸ್ಪರ್ಧೆ ಮಾಡುತ್ತಾರೆ. ಕೋರ್ಚ್‌ಗೆ ಮತ್ತೆ ಮನವಿ ಸಲ್ಲಿಸುತ್ತೇವೆ. ನ್ಯಾಯಾಲಯ ನಮ್ಮವರ ಪರವಾಗಿ ತೀರ್ಪು ನೀಡಲಿದೆ ಎಂಬ ಭರವಸೆ ಇದೆ ಎಂದು ಭಾವನಾತ್ಮಕವಾಗಿ ಹೇಳಿದರು.

ವಿನಯ್ ಕುಲಕರ್ಣಿ ಅನುಪಸ್ಥಿತಿಯಲ್ಲಿ ಶಕ್ತಿ ಪ್ರದರ್ಶನ: ಶಿವಲೀಲಾ ಕುಲಕರ್ಣಿ ನಾಮಪತ್ರ ಸಲ್ಲಿಕೆ

ತಂದೆಯವರು ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಬೆನ್ನೆಲುಬಾಗಿದ್ದರು. ಷಡ್ಯಂತ್ರದಿಂದ ಅವರನ್ನು ಜಿಲ್ಲೆಯಿಂದ ಹೊರ ಹಾಕಿದ್ದಾರೆ. ನಾವು ಮೂರು ವರ್ಷಗಳಿಂದ ಕಷ್ಟದಲ್ಲಿದ್ದೇವೆ. ಕ್ಷೇತ್ರದ ಜನರು ನೊಂದಿದ್ದಾರೆ. ತಂದೆಯವರ ಮೇಲೆ ಜನರು ಅದರಲ್ಲೂ ಯುವಕರು ಅಪಾರ ಪ್ರೀತಿ ಹೊಂದಿದ್ದು, ಅವರ ಗೆಲವು ನಿಶ್ಚಿತವಾಗಿದೆ.

ಹೇಮಂತ ಕುಲಕರ್ಣಿ, ವಿನಯ ಅವರ ಪುತ್ರ

click me!