
ಯಲ್ಲಾಪುರ (ಅ.15): ಸಚಿವ ಸ್ಥಾನ ಬಿಡುವಂತೆ ಹೈಕಮಾಂಡ್ ಕೇಳಿದರೆ, ಬಿಡಲು ಸಿದ್ಧ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಜೊತೆಗೆ ಸಂಪುಟ ಪುನಾರಚನೆ ವಿಚಾರವಾಗಿ ಹೈಕಮಾಂಡ್ ತೀರ್ಮಾನಕ್ಕೆ ಬದ್ಧನಾಗಿದ್ದೇನೆ ಎಂದರು. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಮುಖ್ಯಮಂತ್ರಿಗಳ ಮನೆಯಲ್ಲಿ ಸೋಮವಾರ ರಾತ್ರಿ ನಡೆದ ಔತಣಕೂಟದಲ್ಲಿ ಸಚಿವ ಸಂಪುಟ ಪುನಾರಚನೆಯ ವಿಚಾರ ಚರ್ಚೆಯೇ ಆಗಿಲ್ಲ. ಎಲ್ಲ ಇಲಾಖೆಯ ಸಚಿವರು ತಮ್ಮ ಇಲಾಖೆಗಳಲ್ಲಿ ಇನ್ನೂ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ ಅಷ್ಟೇ ಎಂದು ಸ್ಪಷ್ಟಪಡಿಸಿದರು.
ಆರ್ಎಸ್ಎಸ್ ನಿಷೇಧದ ಬಗ್ಗೆ ಪ್ರತಿಕ್ರಿಯಿಸಲ್ಲ: ಈ ವೇಳೆ ಮಾತನಾಡಿದ ಅವರು ನಾನು ಸಂಘದ ನಿಷೇಧದ ಬಗ್ಗೆ ಏನನ್ನೂ ಪ್ರತಿಕ್ರಿಯಿಸಲ್ಲ. ಆದರೆ, ಸರ್ಕಾರಿ ಶಾಲೆಗಳ ಆವರಣದಲ್ಲಿ ಚಟುವಟಿಕೆ ನಡೆಯಬಾರದೆಂಬುದಕ್ಕೆ ನನ್ನ ಬೆಂಬಲವಿದೆ ಎಂದ ಅವರು, ಆರ್ಎಸ್ಎಸ್ ತಮ್ಮದು ಸರ್ಕಾರಿ ಸಂಘಟನೆಯಲ್ಲ ಎಂದು ಹೇಳಿ, ರಾಜಕೀಯದಲ್ಲಿಯೇ ತೊಡಗಿ ಹೋಗಿದ್ದಾರೆ ಎಂಬ ಸಂಗತಿ ಇಡೀ ದೇಶಕ್ಕೆ ತಿಳಿದಿದೆ. ಹಾಗಾಗಿ ಸರ್ಕಾರಿ ಕಟ್ಟಡಗಳು, ಅದರ ಆವಾರಗಳಲ್ಲಿ ಚಟುವಟಿಕೆಗಳು ನಡೆಯದಂತೆ ನಿಷೇಧ ಹೇರುವುದು ಸರಿಯಾದ ಕ್ರಮ ಎಂದರು.
ರಾಜ್ಯದಲ್ಲಿ ಉತ್ತಮ ಸಿಎಂ: ಮುಖ್ಯಮಂತ್ರಿಗಳ ಬದಲಾವಣೆ ವಿಚಾರ ನನಗೆ ತಿಳಿದಿಲ್ಲ. ಸದ್ಯ ಉತ್ತಮ ಮುಖ್ಯಮಂತ್ರಿ ಇರುವಾಗ ಇನ್ನೊಂದು ಮುಖ್ಯಮಂತ್ರಿಗಳ ನೇಮಕದ ವಿಚಾರದ ಚರ್ಚೆ ಸರಿಯಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಸಿವು ಮುಕ್ತ ಕರ್ನಾಟಕ ಚಿಂತನೆಯಂತೆ ಇಂದಿರಾ ಕ್ಯಾಂಟೀನ್ಗಳು ಅಗತ್ಯ ಸ್ಥಳಗಳಲ್ಲಿ ನಿರ್ಮಾಣಗೊಳ್ಳುತ್ತಿವೆ. ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅಗತ್ಯವಾದ ಯೋಜನೆಗಳನ್ನು ರೂಪಿಸಿ ಅದನ್ನು ಪ್ರತಿಯೊಬ್ಬರಿಗೆ ತಲುಪಿಸುವ ಧ್ಯೇಯವನ್ನು ಸರ್ಕಾರ ಹೊಂದಿದ್ದು, ಯಾವುದೇ ಭೇದ ಭಾವವಿಲ್ಲದೆ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ಅನ್ನಭಾಗ್ಯ ಯೋಜನೆಯಲ್ಲಿ ಐದು ಕೆ.ಜಿ. ಅಕ್ಕಿಯ ಜತೆ ಕುಟುಂಬ ಸದಸ್ಯರ ಸಂಖ್ಯೆ ಆಧಾರದಲ್ಲಿ ಮುಂದಿನ ಎರಡು ತಿಂಗಳಲ್ಲಿ ಬೇಳೆ, ಎಣ್ಣೆ, ಸಕ್ಕರೆ ಹಾಗೂ ಇತರ ಕೆಲವು ಸಾಮಗ್ರಿ ವಿತರಿಸಲು ಯೋಜನೆ ರೂಪಿಸಲಾಗಿದೆ. ಅಧಿಕಾರಿಗಳು ಜನರನ್ನು ಗೊಂದಲಕ್ಕೆ ತಳ್ಳದೇ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದರು.ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿದ್ದರು.
137 ಮಂದಿಗೆ 94 ಸಿ ಹಾಗೂ 94 ಸಿಸಿ ಹಕ್ಕುಪತ್ರ ವಿತರಿಸಲಾಗಿದೆ. ಅರಣ್ಯ ತೊಡಕಿರುವ 584 ಹಾಗೂ ತಾಂತ್ರಿಕ ಅಡಚಣೆ 703 ಅರ್ಜಿಗಳನ್ನು ವಿಲೇವಾರಿ ಮಾಡುವ ಕೆಲಸ ತಕ್ಷಣ ನಡೆಯಬೇಕು. ಅಕ್ರಮ ಸಕ್ರಮ, ಕುಮ್ಕಿ, 9/11 ನೀತಿಯನ್ನು ಸರ್ಕಾರ ಸಡಿಲಗೊಳಿಸುವ ಮೂಲಕ ಜನಸಾಮಾನ್ಯರಿಗೆ ನೆರವಾಗಬೇಕು. ಜಿಲ್ಲಾ ಪಂಚಾಯಿತಿ, ಪಿಡಬ್ಲ್ಯೂಡಿ, ಗ್ರಾಮೀಣ ರಸ್ತೆಗಳಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ಒದಗಿಸಬೇಕು. ಕೆಂಪು ಕಲ್ಲು, ಮರಳು ಸಮಸ್ಯೆಯನ್ನು ಶೀಘ್ರ ಪರಿಹರಿಸುವುದು ಅಗತ್ಯ ಎಂದು ಪೂಂಜ ಹೇಳಿದರು.ಎಂಎಲ್ ಸಿ ಮಂಜುನಾಥ ಭಂಡಾರಿ ಮಾತನಾಡಿ, ಇಂದಿರಾ ಕ್ಯಾಂಟೀನ್ ಬಡವರ್ಗದ ಜನರಿಗೆ, ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ನೀಡುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.