ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಮಾಡದಿದ್ದರೆ ಪಕ್ಷ ವಿಸರ್ಜನೆ: ಸಿ.ಎಂ. ಇಬ್ರಾಹಿಂ

By Kannadaprabha NewsFirst Published Oct 1, 2022, 8:30 PM IST
Highlights

ಬಿಜೆಪಿ-ಕಾಂಗ್ರೆಸ್‌ಗಿಂತ ವಿಭಿನ್ನ ಪೈಪೋಟಿಗೆ ಜೆಡಿಎಸ್‌ ತನ್ನದೇ ಆದ ಯೋಜನೆ ತಯಾರಿ: ಸಿ.ಎಂ.ಇಬ್ರಾಹಿಂ 

ರಾಯಚೂರು(ಅ.01): ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್‌ಗಿಂತ ವಿಭಿನ್ನವಾಗಿ ಪೈಪೋಟಿ ನೀಡಲು ಜೆಡಿಎಸ್‌ ತನ್ನದೇ ಆದಂತಹ ಯೋಜನೆಗಳನ್ನು ರೂಪಿಸಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ನೀಡಿದ ಭರವಸೆಯಂತೆ ಅಭಿವೃದ್ಧಿ ಕೆಲಸ-ಕಾರ್ಯಗಳನ್ನು ಮಾಡದೇ ಇದ್ದಲ್ಲಿ ಪಕ್ಷವನ್ನೇ ವಿಸರ್ಜನೆ ಮಾಡಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ಶುಕ್ರವಾರ ನಗರದಲ್ಲಿ ಮಾತನಾಡಿದ ಅವರು, ಹಿಂದೆ ಇಂತಹ ವಾಗ್ದಾನ ನೀಡಿದ ರಾಜಕೀಯ ಪಕ್ಷಗಳಿಲ್ಲ. ಉಭಯ ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್‌ ವಿಭಿನ್ನ ರಾಜಕೀಯ ಪ್ರಚಾರದ ಮುಖಾಂತರ ಜನಸಾಮಾನ್ಯರ ಬಳಿಗೆ ತೆರಳಿ, ಭಯಮುಕ್ತ, ಹಸಿವುಮುಕ್ತ ಕರ್ನಾಟಕ ಮಾಡುವ ಸಂಕಲ್ಪದೊಂದಿಗೆ ಪಂಚರತ್ನ ಯೋಜನೆ ಜಾರಿಗೊಳಿಸುವ ಭರವಸೆ ಜನರ ಮುಂದಿರಿಸಿ, ಪಕ್ಷಕ್ಕೆ ಮತ ಕೇಳುವುದಾಗಿ ಹೇಳಿದರು.

ಪಿಎಫ್‌ಐ ಬ್ಯಾನ್‌ ಮಾಡುವುದರ ಮೂಲಕ ಐದು ವರ್ಷ ಡಿವೋರ್ಸ್‌ ನೀಡಲಾಗಿದೆ. ನಂತರ ಏನು ಮಾಡುತ್ತಾರೆ? ಪಿಎಫ್‌ಐ ವಿರುದ್ಧ ಮೇಲೆ ಗುರುತರ ಆರೋಪಗಳಿದ್ದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಬೇಕು. ಅವರಿಗೆ ಕಠಿಣ ಶಿಕ್ಷೆ ಗುರಿಪಡಿಸಬಹುದಿತ್ತು ಎಂದರು.

ಬಿಜೆಪಿ ನಡೆಸುತ್ತಿರುವ ದುರಾಡಳಿತದ ವಿರುದ್ಧ ರಾಹುಲ್‌ ಹೋರಾಟ: ಈಶ್ವರ ಖಂಡ್ರೆ

ರಾಹುಲ್‌ ಗಾಂಧಿ ಪಾದಯಾತ್ರೆ ಮಾಡುತ್ತಿದ್ದು, ಅದನ್ನು ಭಾರತ್‌ ಜೋಡೋ ಎಂದು ಕರೆಯುತ್ತಿದ್ದಾರೆ. ಇಷ್ಟಕ್ಕು ಎಲ್ಲಿಯಾದರು ಏನಾದರು ಹರಿದು ಹೋಗಿದೆಯೇ? ಸೂಜಿ-ಧಾರ ತೆಗೆದುಕೊಂಡು ಹೋಲಿಗೆ ಹಾಕಿದ್ದಾರಾ? ಭಾರತ್‌ ಜೋಡೋ ಎಂದರೇನು? ಎಲ್ಲ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆಯೇ? ಕಾಂಗ್ರೆಸ್ಸಿಗರು ಮೊದಲು ಕಾರ್ಯಕ್ರಮ ಘೋಷಣೆ ಮಾಡಿ ಪಾದಯಾತ್ರೆ ನಡೆಸಲಿ, ನಾವು ಬೇಡ ಜಂಗಮರು, ಜೆಡಿಎಸ್‌ ಸಹ ಪಂಚರತ್ನ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುವುದಾಗಿ ತಿಳಿಸಿದರು.

ಬರುವ 2024ರ ಚುನಾವಣೆಗೆ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್‌, ಲಾಲುಪ್ರಸಾದ್‌ ಯಾದವ, ನಿತೀಶ್‌ ಕುಮಾರ ಸೇರಿದಂತೆ ಇತರೆ ಮುಖಂಡರು ಯೋಜನೆಯೊಂದನ್ನು ಸಿದ್ಧಗೊಳಿಸುತ್ತಿದ್ದು, ಮುಂಬರುವ ದಿನಗಳಲ್ಲಿ ರಾಜಕೀಯವಾಗಿ ಪ್ರಬಲ ಪೈಪೋಟಿಗೆ ವೇದಿಕೆ ಸಿದ್ಧವಾಗುತ್ತಿದೆ ಎಂದರು. ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುತ್ತಿರುವುದರ ಕುರಿತು ಸ್ಪಂದಿಸಿದ ಇಬ್ರಾಯಿಂ ಹಾಳೂರಿಗೆ ಉಳಿದೋನೇ ಗೌಡ ಎಂದು ಗೇಲಿ ಮಾಡಿದರು.

ಸಮಾವೇಶ: 

ರಾಯಚೂರು ತಾಲೂಕಿನ ಗಿಲ್ಲೆಸುಗೂರು ಗ್ರಾಮದಲ್ಲಿ ಪಕ್ಷದ ಸಮಾವೇಶವನ್ನು ಸಿಎಂ ಇಬ್ರಾಹಿಂ ಉದ್ಘಾಟಿಸಿದರು. ಪಕ್ಷದ ಶಾಸಕರು, ಆಕಾಂಕ್ಷಿಗಳು,ಕಾರ್ಯಕರ್ತರು ಇದ್ದರು. ಪೂರ್ವನಿಗತಿಯಂತೆ ಸಮಾವೇಶಕ್ಕೆ ಎಚ್‌.ಡಿ.ಕುಮಾರ ಸ್ವಾಮಿ ಬರಬೇಕಾಗಿತ್ತು. ಆದರೆ, ಮಳೆಯಿಂದಾಗಿ ಅವರು ಬರುವುದು ರದ್ದಾಯಿತು. ಮಳೆಯಲ್ಲಿಯೇ ಕಾರ್ಯಕ್ರಮ ನಡೆಯಿತು.
 

click me!