
ಬೆಂಗಳೂರು (ಜು.31): ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡುತ್ತಾರೆ ಎನ್ನುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ನಾನು ಆ ಹುದ್ದೆಯ ಆಕಾಂಕ್ಷಿ ಅಲ್ಲ. ಅದು ಕೇಳಿ ಪಡೆಯುವಂಥದ್ದೂ ಅಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೀಗ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಭವಿಷ್ಯದ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಒಂದು ದೊಡ್ಡ ಜವಾಬ್ದಾರಿ. ಅದು ಕೇಳಿ ಪಡೆಯುವ ಸಂಗತಿ ಅಲ್ಲ. ಯಾರಿಗೆ, ಯಾವಾಗ ಕೊಡಬೇಕು ಎಂಬುದನ್ನು ಪಕ್ಷದ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಬಿಜೆಪಿ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಭ್ರಷ್ಟಾಚಾರ ಆರೋಪ ಕುರಿತು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ತನಿಖೆಗೆ ಮುಂದಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರವಿ, ಖಂಡಿತ ಅವರು ತನಿಖೆ ಮಾಡಬೇಕು, ಮಾಡಲಿ. ಸತ್ಯಾಸತ್ಯ ಬಯಲಿಗೆಳೆಯಲಿ. ಮೂರು ತಿಂಗಳ ಒಳಗೆ ವರದಿ ಸಲ್ಲಿಸಿ. ಯಾರು ಯಾರಿಗೆ ಲಂಚ ಕೊಟ್ಟಿದ್ದಾರೆ ಎಂದು ಎಫ್ಐಆರ್ ಹಾಕಿ. ಅಧಿಕಾರಿಗಳು ಯಾರಿದ್ದಾರೆ, ಶಾಸಕರು, ಸಚಿವರು ಯಾರು? ಅಥವಾ ಯಾರ ಮೇಲೆ ಆರೋಪ ಇತ್ತು ಎಂಬುದನ್ನು ಬಹಿರಂಗಪಡಿಸಲಿ ಎಂದು ಆಗ್ರಹಿಸಿದರು.
ಜುಲೈನಿಂದಲೇ ಫ್ರೀ ವಿದ್ಯುತ್: ಸಚಿವ ಕೆ.ಜೆ.ಜಾರ್ಜ್
ಆರೋಪಿಗಳನ್ನು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ: ಕಾನೂನು ಬಾಹಿರ ಘಟನೆಗಳಲ್ಲಿ ಭಾಗಿಯಾಗಿದ್ದವರು ಅಮಾಯಕರು ಎಂದು ಪರಿಗಣಿಸಿ ಅವರನ್ನು ಕೇಸ್ನಿಂದ ಕೈಬಿಡಲು ಹೊರಟಿರುವುದು ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಷ್ಟೇ ಅಲ್ಲ, ದೇಶದ ಸಮಗ್ರತೆಗೂ ಅಪಾಯಕಾರಿ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಕೆ.ಜೆ.ಹಳ್ಳಿ, ಡಿ.ಜೆ. ಹಳ್ಳಿ ಪ್ರಕರಣದ ಆರೋಪಿಗಳ ವಿರುದ್ಧದ ಪ್ರಕರಣ ಕೈಬಿಡುವಂತೆ ಶಾಸಕ ತನ್ವೀರ್ ಸೇಠ್ ಸರ್ಕಾರಕ್ಕೆ ಪತ್ರ ಬರೆದಿರುವ ಕುರಿತು ಪ್ರತಿಕ್ರಿಯಿಸಿ, ಈ ಪ್ರಕರಣದಲ್ಲಿ ಇಡೀ ಊರಿಗೆ ಬೆಂಕಿ ಹಾಕಿ 250 ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕಿ, ಪೊಲೀಸ್ ಠಾಣೆಯನ್ನು ಧ್ವಂಸ ಮಾಡಿ ರಾಜ್ಯದ ಇತಿಹಾಸದಲ್ಲೇ ಭೀಕರ ಘಟನೆ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರದ ಗಲಭೆ, ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಹಾಕಿದಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿ ಆಗಿರುವವರನ್ನು ಕಾಂಗ್ರೆಸ್ನವರು ಅಮಾಯಕರೆಂದು ಪರಿಗಣಿಸುವುದು ಅಪಾಯಕಾರಿ ಎಂದರು. ಇಂತಹ ರಾಜಕಾರಣದ ಆಟ ಖಂಡನೀಯ, ನಿಮ್ಮ ಓಲೈಕೆ ರಾಜನೀತಿ ಪರಿಣಾಮ 2013 ರಿಂದ 2018ರ ವರೆಗೆ 32 ಕ್ಕೂ ಹೆಚ್ಚು ಜನ ಹಿಂದೂ ಸಂಘಟನೆ ಕಾರ್ಯಕರ್ತರ ಕೊಲೆಗೆ ಕಾರಣವಾಯಿತು. ಅಂದು ಮಾಡಿದ ತಪ್ಪನ್ನೇ ಮತ್ತೆ ಮಾಡಲು ಹೊರಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಒಳಗೊಂಡಂತೆ ಎಲ್ಲ ರೀತಿಯ ಹೋರಾಟವನ್ನೂ ಮಾಡುತ್ತೇವೆ.
ಹಣ ಹಾಗೂ ಹೆಣದ ಮೇಲೆ ಕಾಂಗ್ರೆಸ್ ರಾಜಕಾರಣ: ಎನ್.ರವಿಕುಮಾರ್
ಗೃಹ ಸಚಿವರು ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದೆಂದು ಅರ್ಥ ಮಾಡಿಕೊಳ್ಳದ ಸ್ಥಿತಿಗೆ ಬಂದಿರುವುದು ದುರ್ದೈವ. ನಿಮಗೆ ಓಟ್ ಹಾಕಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಎಲ್ಲಾ ಅಪರಾಧವನ್ನೂ ಮನ್ನಿಸಲು ಸಾಧ್ಯವೇ, ರಾಜ್ಯ, ದೇಶದ ಮೇಲೆ ಏನು ಪರಿಣಾಮ ಆಗುತ್ತದೆ ಎಂದು ಗೊತ್ತಾ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಅಮಾಯಕತೆ, ರಾಜ್ಯವನ್ನು ಅಸಹಾಯಕತೆಗೆ ದೂಡಬಾರದು. ಈ ವಿಷಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಮತ್ತು ಸಂವಿಧಾನ ರಕ್ಷಿಸುವ ಜವಾಬ್ದಾರಿಯೂ ನಿಮ್ಮ ಮೇಲಿದೆ ಎನ್ನುವುದನ್ನು ಮರೆಯಬಾರದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.