
ಮುದ್ದೇಬಿಹಾಳ (ಮೇ.16): ಸಂಪುಟ ಪುನರ್ರಚನೆ ಬಂದಾಗ ಉತ್ತರ ಕರ್ನಾಟಕದಲ್ಲಿ ಅಪ್ಪಾಜಿ ನಾಡಗೌಡ, ಎಚ್.ಕೆ.ಪಾಟೀಲ ಅವರ ಹೆಸರು ಮುನ್ನೆಲೆಗೆ ಬರುತ್ತದೆ. ಆದರೆ, ಇಲ್ಲಿವರೆಗೂ ನಮಗೆ ಸಿಗಬೇಕಾದ ಗೌರವ ಸ್ಥಾನ ಸಿಕ್ಕಿಲ್ಲ. ಇದರಿಂದ ನೋವಾಗಿದೆ. ಈ ಬಾರಿ ಸಚಿವ ಸ್ಥಾನ ಸಿಗುತ್ತದೆ ಎಂಬ ನಿರೀಕ್ಷೆ ಇದೆ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಯಾವ ಕೋಟಾದಲ್ಲಿ ನಮಗೆ ಸಚಿವ ಸ್ಥಾನ ಸಿಗಬೇಕು ಅದು ಸಿಕ್ಕಿಲ್ಲ. ಇದು ಬೇಸರ ಸಂಗತಿ. ಕಳೆದ 40 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ನಿಷ್ಠನಾಗಿ ಪಕ್ಷದ ಶಕ್ತಿಗೆ ಶ್ರಮಿಸಿದ್ದೇನೆ.
ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣನೆ ಮಾಡಲಾಗುತ್ತಿದೆ. ಇವರು ಹೇಳಿದಂತೆ ಕೇಳಿಕೊಂಡು ಬಿದ್ದಿರುತ್ತಿದ್ದಾರೆ ಎಂಬ ಮನೋಭಾವ ಮೂಡುತ್ತಿದೆ. ಕಾಂಗ್ರೆಸ್ ಪಕ್ಷದ ಕೇಂದ್ರದ ಎಲ್ಲ ವರಿಷ್ಠರ ಬಗ್ಗೆ ಅಪಾರಗೌರವ ಹೊಂದಿದ್ದೇನೆ. ಕಾಂಗ್ರೆಸ್ನಲ್ಲಿರುವ ಪ್ರಾಮಾಣಿಕರನ್ನು ಗೌರವಿಸುವ ಕೆಲಸವಾಗಬೇಕು. ನಾನು ಮಂತ್ರಿ ಸ್ಥಾನದ ಪ್ರಬಲ ಆಕಾಂಕ್ಷಿ ಹೌದು. ಹಿರಿಯ ಶಾಸಕರು ಇದ್ದರೂ ಗೌರವ ಸ್ಥಾನಮಾನ ಸಿಗುತ್ತಿಲ್ಲ. ಈ ಬಗ್ಗೆ ಮತಕ್ಷೇತ್ರದ ಕಾರ್ಯಕರ್ತರು ಹಾಗೂ ಜನರಲ್ಲೂ ನೋವಿದೆ ಎಂದರು.
ಹೈಕ್ಮಾಂಡ ಬಗೆಹರಿಸಲಿ:ಮುಖ್ಯಮಂತ್ರಿ ಬದಲಾವಣೆ ಗೊಂದಲವನ್ನು ಹೈಕಮಾಂಡ್ ನಿವಾರಿಸಬೇಕು. ಸಿದ್ದರಾಮಯ್ಯ ನಾಯಕತ್ವ ಒಪ್ಪಿದ್ದೇನೆ. ಶಾಸಕರಲ್ಲಿ ಇರುವ ವೈಮನಸು ನಿವಾರಿಸುವತ್ತ ಹೈಕಮಾಂಡ್ ಗಮನ ಹರಿಸಬೇಕು. ಡಿ.ಕೆ.ಶಿವಕುಮಾರ ನಾವು ಒಟ್ಟಿಗೆ ರಾಜಕಾರಣ ಆರಂಭಿಸಿದ್ದೇವೆ. ಡಿಕೆಶಿ ನಮಗೂ ಆಪ್ತರೆ, ಹೈಕಮಾಂಡ್ ವಿರುದ್ಧ ಯಾರೂ ಹೋಗುವುದಿಲ್ಲ ಎಂದರು.
ಕಾಂಗ್ರೆಸ್ಗೆ ತನ್ನದೆಯಾದ ಇತಿಹಾಸ ಇದೆ. ಆದರೆ, ಇದೀಗ ಕೆಲವರಿಗೆ ಸಚಿವ ಸ್ಥಾನ ನೀಡುತ್ತೀರಿ. ಅವರು ಹೇಳಿದವರಿಗೆ ಸ್ಥಾನ ನೀಡುತ್ತಿರಿ. ಹೀಗೆ ಮಾಡುವುದರಿಂದ ಪಕ್ಷಕ್ಕೆ ದಕ್ಕೆಉಂಟಾಗುತ್ತಿದೆ. ತಮ್ಮ ಹಿಂಬಾಲಕರಿಗೆ ಅಧಿಕಾರ ಕೊಡಿಸಲು ಷಡ್ಯಂತ್ರ ಮಾಡುತ್ತಾರೆ. ಕಾಂಗ್ರೆಸ್ಸಿಗರಿಂದಲೇ ಕಾಂಗ್ರೆಸ್ಗೆ ದಕ್ಕೆಯಾಗುತ್ತಿದೆ. ಇದು ಆಂತರಿಕ ಬೇಗುದಿಗೆ ಕಾರಣವಾಗುತ್ತಿದೆ. ಈ ಬಗ್ಗೆ ಪಕ್ಷ ಗಮನ ಹರಿಸಬೇಕು. ಮೂಲ ಕಾಂಗ್ರೆಸ್ಸಿಗರಿಗೆ ಗೌರವ ಕೊಡುವ ಕೆಲಸವಾಗಬೇಕು. ಹಿರಿತನಕ್ಕೆ ತಕ್ಕಂತೆ ಸ್ಥಾನಮಾನ ಸಿಗದಿರುವುದು ನೋವಿನ ಸಂಗತಿ ಎಂದರು.
ನಮ್ಮ ಕಾಂಗ್ರೆಸ್ಸಿನ ಕೆಲವರು ನನಗೆ ಸಚಿವ ಸ್ಥಾನ ದೊರಕಬಾರದು ಎಂಬುದರ ಬಗ್ಗೆ ಬಹುದೊಡ್ಡ ಲಾಭಿ ನಡೆಸಿ ನನಗೆ ಮಂತ್ರಿ ಸ್ಥಾನ ಸಿಗದಂತೆ ನೋಡಿಕೊಳ್ಳುವ ಮೂಲಕ ಬಹುದೊಡ್ಡ ಷಡ್ಯಂತ್ರ ನಡೆಸುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಈಗಲೇ ನಿಲ್ಲಬೇ.ಕು ನಾನು ಕೂಡ ರಾಜಕೀಯದ ಎಲ್ಲ ತಿರುವುಗಳನ್ನು ಕಂಡಿದ್ದೇನೆ ಅನುಭವ ಹೊಂದಿದ್ದೇನೆ. ನಮಗೂ ರಾಜಕಾರಣ ಮಾಡಲು ಬರುತ್ತದೆ ಎಂಬುದು ತೋರಿಸಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.
ಸದ್ಯ ಮುಖ್ಯಮಂತ್ರಿ ಸಿದ್ರಾಮಯ್ಯನವರ ಕುರ್ಚಿ ಗಟ್ಟಿಯಾಗಿದೆ. ಆದರೆ, ಕೆಲವರಿಂದ ಪಕ್ಷಕ್ಕೆ ಮುಜುಗರ ಉಂಟಾಗುತ್ತಿದೆ. ನಾಯಕತ್ವ ಬದಲಾವಣೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ನಮ್ಮ ಶಾಸಕಾಂಗ ಪಕ್ಷದಲ್ಲಿಯೂ ಈ ಬಗ್ಗೆ ಚರ್ಚೆಗೆ ಬಂದಿಲ್ಲ. ಹಾಗಾಗಿ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲವೂ ಸರಿ ಇದೆ. ನಾನು ನಾಯಕ ನಾಗಬೇಕು ಎಂಬುದು ಎಲ್ಲರ ಆಸೆ ಆಗಿರುತ್ತದೆ. ಅದು ತಪ್ಪಲ್ಲ. ಆದರೆ, ನಾಯಕತ್ವದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ತಿರ್ಮಾನಿಸುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.