Prajadwani Bus Yatra: ಸಿದ್ದರಾಮಯ್ಯ, ಡಿಕೆಶಿ ಪ್ರತ್ಯೇಕ ಬಸ್‌ಯಾತ್ರೆಗೆ ಜನಸ್ತೋಮ

By Kannadaprabha NewsFirst Published Feb 4, 2023, 11:44 AM IST
Highlights

ರಾಜ್ಯ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಪ್ರಜಾಧ್ವನಿ’ ಬಸ್‌ ಯಾತ್ರೆಯ ಎರಡನೇ ಹಂತ ಶುಕ್ರವಾರದಿಂದ ಆರಂಭವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಯಾತ್ರೆಗೆ ಚಾಲನೆ ನೀಡಿದರೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದರ್‌ ಜಿಲ್ಲೆ ಬಸವ ಕಲ್ಯಾಣದಿಂದ ಯಾತ್ರೆ ಆರಂಭಿಸಿದರು. 

ಬೆಂಗಳೂರು (ಫೆ.04): ರಾಜ್ಯ ಕಾಂಗ್ರೆಸ್‌ ಹಮ್ಮಿಕೊಂಡಿರುವ ‘ಪ್ರಜಾಧ್ವನಿ’ ಬಸ್‌ ಯಾತ್ರೆಯ ಎರಡನೇ ಹಂತ ಶುಕ್ರವಾರದಿಂದ ಆರಂಭವಾಗಿದೆ. ಡಿ.ಕೆ.ಶಿವಕುಮಾರ್‌ ಅವರು ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಯಾತ್ರೆಗೆ ಚಾಲನೆ ನೀಡಿದರೆ, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬೀದರ್‌ ಜಿಲ್ಲೆ ಬಸವ ಕಲ್ಯಾಣದಿಂದ ಯಾತ್ರೆ ಆರಂಭಿಸಿದರು. ಬೆಳಗ್ಗೆ ಕುರುಡುಮಲೆಗೆ ಆಗಮಿಸಿದ ಡಿಕೆಶಿ, ಗಣೇಶ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಮುಳವಾಗಿಲಿನ ಮುಜಾವರ್‌ ಮೊಹಲ್ಲಾದ ಹೈದರ್‌ ಅಲಿ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.  ನಂತರ, ಕಪ್ಪಲಮಡಗು ಬಳಿಯ ಎಂಜಿ ಮಾರ್ಕೆಟ್‌ ಮೈದಾನ ಹಾಗೂ ಕೆಜಿಎಫ್‌ನಲ್ಲಿ ನಡೆದ ಬೃಹತ್‌ ಸಮಾವೇಶದಲ್ಲಿ ಮಾತನಾಡಿದರು. 

ಯಾತ್ರೆಗೆ ಆಗಮಿಸಿದ ಡಿಕೆಶಿಗೆ ಅಭಿಮಾನಿಗಳು ಬೃಹತ್‌ ಸೇವಂತಿ ಹಾರ ಹಾಕಿ, ಭರ್ಜರಿ ಸ್ವಾಗತ ಕೋರಿದರು. ಈ ಮಧ್ಯೆ, ಯಾತ್ರೆ ಅಂಗವಾಗಿ ಶುಕ್ರವಾರ ಬೀದರ್‌ ಜಿಲ್ಲೆ ಬಸವಕಲ್ಯಾಣಕ್ಕೆ ಆಗಮಿಸಿದ ಸಿದ್ದರಾಮಯ್ಯ, ಇಲ್ಲಿನ ಅನುಭವ ಮಂಟಪಕ್ಕೆ ಭೇಟಿ ನೀಡಿದರು. ಬಳಿಕ, ಬಸವಕಲ್ಯಾಣದ ತೇರು ಮೈದಾನದಲ್ಲಿ ಪ್ರಜಾಧ್ವನಿ ಯಾತ್ರೆಗೆ ಚಾಲನೆ ನೀಡಿದರು. ಬಳಿಕ, ಭಾಲ್ಕಿಗೆ ಆಗಮಿಸಿದ ಸಿದ್ದು, ಬೃಹತ್‌ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಈ ಮಧ್ಯೆ, ಸಮಾವೇಶದ ಹಿನ್ನೆಲೆಯಲ್ಲಿ ಭಾಲ್ಕಿಯ ಖಾಸಗಿ ಶಾಲೆಗಳಿಗೆ ರಜೆ ನೀಡಲಾಗಿತ್ತು. ಇದನ್ನು ವಿರೋಧಿಸಿ, ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

100% ಸೋಲುವ ಕೈ ಶಾಸಕರಿಗೆ ಟಿಕೆಟ್‌ ಇಲ್ಲ: ಸಿದ್ದರಾಮಯ್ಯ

ಕುರುಡುಮಲೆ ಗಣೇಶನಿಗೆ ಡಿಕೆಶಿಯಿಂದ 10 ಕೆಜಿ ಬೆಳ್ಳಿ ಆಭರಣ ಕೊಡುಗೆ: ಸುಮಾರು 10 ಕೆಜಿ ತೂಕದ ಬೆಳ್ಳಿ ಆಭರಣಗಳನ್ನ ಮಾಡಿಸಿರುವ ಡಿ.ಕೆ.ಶಿವಕುಮಾರ್‌, ಕುರುಡುಮಲೆ ವಿನಾಯಕನಿಗೆ ಕೊಡುಗೆಯಾಗಿ ಸಲ್ಲಿಸಿದ್ದಾರೆ. ಪೂಜೆ ವೇಳೆ, ಕುರುಡುಮಲೆ ಗಣಪತಿಯನ್ನು 10 ಕೆಜಿ ಬೆಳ್ಳಿ ಆಭರಣಗಳಿಂದ ಅಲಂಕರಿಸಲಾಗಿತ್ತು.

ಕೆಎಚ್‌ ಮುನಿಸು ಶಮನ: ಯಾತ್ರೆ ಮುಳಬಾಗಿಲಿಗೆ ಹೊರಟಾಗ ಮಾರ್ಗಮಧ್ಯೆ ಕೋಲಾರದ ಪವನ್‌ ಕಾಲೇಜು ಮುಂಭಾಗ ಡಿ.ಕೆ.ಶಿವಕುಮಾರ್‌ ಅವರನ್ನು ಕೆಎಚ್‌.ಮುನಿಯಪ್ಪ ಮತ್ತವರ ಅಭಿಮಾನಿಗಳು ಸ್ವಾಗತಿಸಿದರು. ಆದರೆ, ಬಸ್‌ ಏರಲು ಮುನಿಯಪ್ಪ ನಿರಾಕರಿಸಿದರು. ಈ ವೇಳೆ, ಅವರ ಮನವೊಲಿಸಿದ ಡಿಕೆಶಿ, ಮುನಿಯಪ್ಪರನ್ನು ಬಲವಂತವಾಗಿ ಬಸ್‌ ಹತ್ತಿಸುವಲ್ಲಿ ಯಶಸ್ವಿಯಾದರು. ಅವರ ಜೊತೆ ಕುರುಡುಮಲೆ ದೇವಾಲಯಕ್ಕೆ ಮುನಿಯಪ್ಪ ಆಗಮಿಸಿದರು. ಆದರೆ, ಮುಳಬಾಗಿಲು ಸಮಾವೇಶದಲ್ಲಿ ಪಾಲ್ಗೊಳ್ಳದೆ, ಕೆಜಿಎಫ್‌ ಸಮಾವೇಶದಲ್ಲಿ ಭಾಗಿಯಾದರು.

ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಸಂಪೂರ್ಣ ವಿಫಲ: ನನಗೆ ಪವಿತ್ರವಾದ ದಿನವೆಂದು ಪುರಂದರ ದಾಸರ ಕೀರ್ತನೆ ಹೇಳಿದ ಡಿ.ಕೆ. ಶಿವಕುಮಾರ್‌ ಮುಳಬಾಗಿಲಿನ ವಿಘ್ನ ವಿನಾಯಕನ ದರ್ಶನ ಮತ್ತು ದರ್ಗಾಕ್ಕೆ ಹೋಗಿ ಆಂಜನೇಯನ ದರ್ಶನಕ್ಕೆ ಹೋಗಿ ನಿಮ್ಮ ದರ್ಶನಕ್ಕೆ ಅವಕಾಶ ಸಿಕ್ಕಿದೆ, ನಾವೆಲ್ಲ ಬಂದಿರೋದು ನಿಮ್ಮ ಜಯಕಾರ ಹೂವಿನ ಹಾರಕ್ಕಲ್ಲ, ಮುಳಬಾಗಿಲಿನ ಜನರ ಜೊತೆ ನಾವಿದ್ದೇವೆ ಎಂದು ಹೇಳಲು ನಾವು ಬಂದಿದ್ದೇವೆ. ನಿಮ್ಮ ಸಮಸ್ಯೆ ಆಲಿಸಲು ನಾವು ಬಂದಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಮುಳಬಾಗಿಲು ತಾಲೂಕಿನ ಕಪ್ಪಲಮಡಗು ಗ್ರಾಮದ ಎಂ.ಜಿ ಮಾರುಕಟ್ಟೆಯ ಮೈದಾನದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಪ್ರಜಾಧ್ವನಿ ಯಾತ್ರೆಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಜಾಧ್ವನಿಯಾಗಿ ನಾವೆಲ್ಲ ನಿಲ್ಲಬೇಕು ಎಂದು ಈ ಪ್ರವಾಸ ಮಾಡುತಿದ್ದೇವೆ, ಜನಸಂಘಟನೆ ಮಾಡೋದು ಸುಲಭವಲ್ಲ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್‌ರನ್ನ ಡಿಕೆಶಿ ಶ್ಲಾಘಿಸಿದರು.

ಎಲ್ಲರೂ ಒಗ್ಗಟಾಗಿದ್ದೇವೆ, ಮುನಿಯಪ್ಪ, ಪರಮೇಶ್ವರ್‌ಗೆ ಮುನಿಸಿಲ್ಲ: ಡಿ.ಕೆ.ಶಿವಕುಮಾರ್‌

ಕೋಲಾರ ಜಿಲ್ಲೆಯಲ್ಲಿ ಬಹಳ ದಣಿದ ಜನ ಇದ್ದೀರಾ, ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ವಿಫಲವಾಗಿದೆ, 15 ಲಕ್ಷವಲ್ಲ ಬರೀ ಅಕೌಂಟ್‌ ಓಪನ್‌ ಆಯಿತು, ಕರ್ನಾಟಕದಲ್ಲಿ ಆಪರೇಷನ್‌ ಮೂಲಕ ಬಂದ ಸರ್ಕಾರ ಇದೆ, ಜಾತ್ಯತೀತ ಸರ್ಕಾರಕ್ಕಾಗಿ ಜೆಡಿಎಸ್‌ಗೆ ಬಲ ನೀಡಿದ್ದೆವು, ಆದರೆ ಅವರಿಂದ ಸರ್ಕಾರ ಉಳಿಸಲು ಸಾಧ್ಯವಾಗಲಿಲ್ಲ, ಕುಮಾರಸ್ವಾಮಿಯವರೇ ನಂಬಿದ ಜನರಿರುತ್ತಾರೆ, ಈ ದೇಶಕ್ಕೆ ಕಾಂಗ್ರೆಸ್‌ ಮಾತ್ರ ಬೇಕಿರೋದು. ಬಿಜೆಪಿ ಆಡಳಿತ, ಕುಮಾರಸ್ವಾಮಿ ಆಡಳಿತ ಎಲ್ಲವನ್ನೂ ನೋಡಿದ್ದಾರೆ ಎಂದರು.

click me!