ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಸಿ.ಪಿ.ಯೋಗೇಶ್ವ‌ರ್‌ ಬಿಜೆಪಿ ಅಭ್ಯರ್ಥಿಯಾದ್ರೂ ಜೆಡಿಎಸ್ ಬೆಂಬಲ!

By Kannadaprabha NewsFirst Published Jul 5, 2024, 1:24 PM IST
Highlights

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವ‌ರ್‌ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಪಾಳೆಯದಲ್ಲಿ ಒಲವು ವ್ಯಕ್ತವಾಗಿದೆ. 

ಬೆಂಗಳೂರು (ಜು.05): ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವ‌ರ್‌ ಸ್ಪರ್ಧಿಸಿದರೂ ಅವರಿಗೆ ಬೆಂಬಲ ನೀಡುವ ಬಗ್ಗೆ ಜೆಡಿಎಸ್ ಪಾಳೆಯದಲ್ಲಿ ಒಲವು ವ್ಯಕ್ತವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರನ್ನು ಕಣಕ್ಕಿಳಿಸುವಲ್ಲಿ ಮತ್ತು ಗೆಲ್ಲಿಸುವಲ್ಲಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಗೆಲುವಿಗೆ ಯೋಗೇಶ್ವರ್ ಶ್ರಮ ಸಾಕಷ್ಟು ಇದೆ. ಈ ಋಣ ತೀರಿಸಲು ಯೋಗೇಶ್ವರ್ ಅವರನ್ನು ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಲ್ಲಿಸಿ ಗೆಲ್ಲಿಸಬೇಕು ಎಂಬ ಅಭಿಪ್ರಾಯ ಜೆಡಿಎಸ್‌ ಮುಖಂಡರಿಂದಲೇ ವ್ಯಕ್ತವಾಗುತ್ತಿದೆ ಎಂದು ತಿಳಿದುಬಂದಿದೆ. 

ಎಚ್.ಡಿ.ಕುಮಾರಸ್ವಾಮಿ ಸಹ ಉಪಚುನಾವಣೆ ಘೋಷಣೆಯಾದ ಬಳಿಕ ಅಭ್ಯರ್ಥಿ ಆಯ್ಕೆ ಎಂದು ಹೇಳಿದರೂ ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ಕಾರ್ಯಕರ್ತರು, ಸ್ಥಳೀಯ ಸಿ.ಪಿ.ಯೋಗೇಶ್ವರ್ ನಾಯಕರಲ್ಲಿ ಅವರೇ ಅಭ್ಯರ್ಥಿ ಎಂಬ ನಿಲುವು ಬಿತ್ತಿದ್ದಾರೆ. ಅವರನ್ನು ಗೆಲ್ಲಿಸುವಲ್ಲಿ ಅವಿರತವಾಗಿ ಶ್ರಮಿಸಲು ಉಭಯಪಕ್ಷಗಳಕಾರ್ಯಕರ್ತರು ಸಹ ಮುಂದಾಗಿದ್ದಾರೆ. ಆದರೂ ಬಿಜೆಪಿ-ಜೆಡಿಎಸ್‌ನ ಹೈಕಮಾಂಡ್ ತೀರ್ಮಾನವೇ ಅಂತಿಮವಾ ಗಿರುವುದರಿಂದ ಯಾರಿಗೆ ಟಿಕೆಟ್ ಲಭಿಸಲಿದೆ ಎಂಬುದು ತೀವ್ರ ಕೂತುಹಲ ಮೂಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಭದ್ರಕೋಟೆ ಎನಿಸಿದ ಭಾಗದಲ್ಲಿಯೇ ಜೆಡಿಎಸ್ ಸೋಲನುಭವಿಸಿದೆ. 

ಇದರಿಂದ ಪಕ್ಷದ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗಿದೆ. ಭದ್ರಕೋಟೆ ಯಾಗಿರುವ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಹೊಸ ಹುಮ್ಮಸ್ಸು ಬರಬೇಕಾದರೆ ಯೋಗೇಶ್ವರ್ ಅವರನ್ನು ಜೆಡಿಎಸ್‌ನಿಂದ ಸ್ಪರ್ಧಿಸಿ ಗೆಲ್ಲಿಸಿಕೊಳ್ಳ ಬೇಕು ಎಂಬುದು ಸ್ಥಳೀಯ ಜೆಡಿಎಸ್‌ ನಾಯಕರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿಯೇ ಯೋಗೇಶ್ವರ್ ಅವರನ್ನು ಜೆಡಿಎಸ್‌ನಿಂದಲೇ ಕಣಕ್ಕಿಳಿಯುವಂತೆ ಮಾಡಲು ಒತ್ತಾಯಗಳು ಕೇಳಿ ಬಂದಿವೆ. ಆದರೆ, ಯೋಗೇಶ್ವರ್‌ಗೆ ಜೆಡಿಎಸ್‌ನಿಂದ ಸ್ಪರ್ಧಿಸಲು ಆಸಕ್ತಿ ಇಲ್ಲ. ಬಿಜೆಪಿಯಿಂದಲೇ ಟಿಕೆಟ್ ಸಿಕ್ಕರೆ ಮಾತ್ರ ಉಪಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ. 

ಸಿಎಂ ಸಿದ್ದು ತಾಕತ್ತಿದ್ದರೆ ಸರ್ಕಾರ ವಿಸರ್ಜಿಸಿ ಚುನಾವಣೆಗೆ ಬನ್ನಿ: ಬಿ.ಎಸ್.ಯಡಿಯೂರಪ್ಪ

ಒಂದು ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದಿದರೆ ವಿಧಾನಪರಿಷತ್ ಸದಸ್ಯತ್ವ ಸ್ಥಾನದಲ್ಲಿಯೇ ಮು೦ದುವರೆಯುವ ಇಚ್ಛೆಯನ್ನು ಹೊಂದಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಗೂಯೋಗೇಶ್ವರ್ ಕಾರಣಕರ್ತರಾಗಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಾಗಿ ಕಣಕ್ಕಿಳಿದು ಕಾಂಗ್ರೆಸ್‌ಗೆ ತಿರುಗೇಟು ನೀಡಲು ತಂತ್ರಗಾರಿಕೆ ರೂಪಿಸುವಲ್ಲಿ ಯೋಗೇಶ್ವರ್ ಪಾತ್ರ ಸಹ ಇದೆ. ಉಭಯ ಪಕ್ಷಗಳ ಸ್ಥಳೀಯ ನಾಯಕರಿಗೂ ಯೋಗೇಶ್ವರ್ ಪಾತ್ರದ ಬಗ್ಗೆ ತಿಳಿದಿದೆ. ಹೀಗಾಗಿ ಅವರಿಗೆ ಬೆಂಬಲ ನೀಡಲು ಎರಡೂ ಪಕ್ಷಗಳ ನಾಯಕರು ಒಲವು ಹೊಂದಿದ್ದಾರೆ. ಆದರೆ, ಮುಂದಿನ ದಿನದಲ್ಲಿ ಎರಡು ಪಕ್ಷಗಳ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

click me!