
ಕನಕಪುರ/ರಾಮನಗರ(ಸೆ.06): ನಿಗಮ-ಮಂಡಳಿ ನೇಮಕಾತಿ ವೇಳೆ 15 ಮಂದಿ ಕಾಂಗ್ರೆಸ್ ಶಾಸಕರಿಗೆ ಮಾತ್ರ ಅವಕಾಶ ಕೊಡುತ್ತೇವೆ. ಉಳಿದ ಸ್ಥಾನಗಳನ್ನು ಕಾರ್ಯಕರ್ತರಿಗೆ ನೀಡಲಿದ್ದು, ಅವರಿಗೆ ಎರಡೂವರೆ ವರ್ಷದ ಅಧಿಕಾರಾವಧಿ ನೀಡುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕನಕಪುರದಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿ, ನಾನು ಮಾತ್ರ ಮಂತ್ರಿಯಾಗಿ, ಉಳಿದ ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ನಿಗಮ-ಮಂಡಳಿಗಳಲ್ಲಿ ಶಾಸಕರು ಹಾಗೂ ಕಾರ್ಯಕರ್ತರಿಗೆ ಅವಕಾಶ ನೀಡಲಾಗುವುದು. ಕಾಂಗ್ರೆಸ್ನ ಎಲ್ಲಾ ಶಾಸಕರು ನಿಗಮ-ಮಂಡಳಿಗಳಲ್ಲಿ ಅವಕಾಶ ಕೇಳುತ್ತಿಲ್ಲ. 20-25 ಮಂದಿ ಮಾತ್ರ ಕೇಳುತ್ತಿದ್ದಾರೆ. ಅದರಲ್ಲಿ 15 ಮಂದಿಗೆ ನಿಗಮ-ಮಂಡಳಿ ನೇಮಕ ವೇಳೆ ಅವಕಾಶ ನೀಡುತ್ತೇವೆ ಎಂದು ತಿಳಿಸಿದರು.
ರಾಹುಲ್ಗಾಂಧಿ ಯಾತ್ರೆಗೆ 1 ವರ್ಷ ಹಿನ್ನೆಲೆ; ನಾಡಿದ್ದು ಕಾಂಗ್ರೆಸ್ ಮತ್ತೆ ಪಾದಯಾತ್ರೆ
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿಯಮ ಬದಲಾವಣೆ ಮಾಡುತ್ತಿರುವ ಕುರಿತ ಪ್ರಶ್ನೆಗೆ, ಅದು ಆಡಳಿತಾತ್ಮಕ ವಿಚಾರ. ಆಡಳಿತಕ್ಕೆ ಅನುಕೂಲವಾಗುವಂತೆ ಕೆಲವೊಂದು ಬದಲಾವಣೆ ಮಾಡಲಾಗುತ್ತದೆ. ಪ್ರತಿ ಸರ್ಕಾರ ಬಂದಾಗಲೂ ಈ ರೀತಿಯ ಬದಲಾವಣೆ ಆಗುತ್ತದೆ ಎಂದು ಪ್ರತಿಕ್ರಿಯಿಸಿದರು.
ನಾಳೆ ಪಾದಯಾತ್ರೆ:
ಭಾರತ್ ಜೋಡೋ ಯಾತ್ರೆಗೆ ಸೆ.7ರಂದು ಒಂದು ವರ್ಷ ತುಂಬುತ್ತದೆ. ಇದೇ ನೆನಪಿಗೆ ಬೆಂಗಳೂರಿನಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಬೇಕು ಎನ್ನುವ ಆಲೋಚನೆ ಇತ್ತು. ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಆಗುತ್ತದೆ ಎನ್ನುವ ಕಾರಣಕ್ಕೆ ರಾಮನಗರದಲ್ಲಿ ಆ ಕಾರ್ಯಕ್ರಮ ಮಾಡುತ್ತಿದ್ದೇವೆ. ಪಾದಯಾತ್ರೆಯಲ್ಲಿ ಮುಖ್ಯಮಂತ್ರಿಗಳೂ ನಮ್ಮ ಜೊತೆ ಹೆಜ್ಜೆ ಹಾಕಲಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಮೇಕೆದಾಟು ಪಾದಯಾತ್ರೆ ವೇಳೆ ಚಳವಳಿಗಾರರು ಎಲ್ಲಿದ್ರು?: ಡಿಕೆಶಿ
ಅದೇ ದಿನ ಸಚಿವ ಸಂಪುಟ ಸಭೆಯೂ ಇರುವ ಕಾರಣ ಇತರೆ ಸಚಿವರಿಗೆ ಸೆ.8ರಂದು ಪಾದಯಾತ್ರೆ ಮಾಡಬಹುದು ಎಂದು ಸೂಚನೆ ನೀಡಿದ್ದೇವೆ. ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಒಂದು ಗಂಟೆ ಕಾಲ ಸಂಜೆ 5ರಿಂದ 6 ಗಂಟೆ ತನಕ ಈ ಕಾರ್ಯಕ್ರಮ ನಡೆಯಲಿದೆ ಎಂದು ಶಿವಕುಮಾರ್ ಹೇಳಿದರು.
20-25 ಶಾಸಕರಷ್ಟೇ ಹುದ್ದೆ ಕೇಳುತ್ತಿದ್ದಾರೆ
ನಾನು ಮಾತ್ರ ಮಂತ್ರಿಯಾಗಿ, ಉಳಿದ ಶಾಸಕರಿಗೆ ಅಧಿಕಾರ ಸಿಗದಿದ್ದರೆ ತಪ್ಪಲ್ಲವೇ? ಎಲ್ಲರಿಗೂ ಅವಕಾಶ ಸಿಕ್ಕೇ ಸಿಗುತ್ತದೆ. ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡಲಾಗುವುದು. ಕಾಂಗ್ರೆಸ್ನ ಎಲ್ಲಾ ಶಾಸಕರು ನಿಗಮ-ಮಂಡಳಿಗಳಲ್ಲಿ ಅವಕಾಶ ಕೇಳುತ್ತಿಲ್ಲ. 20-25 ಮಂದಿ ಮಾತ್ರ ಕೇಳುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.