ಬಿಜೆಪಿಯಿಂದ ಕಾಂಗ್ರೆಸ್‌ ಪ್ರಣಾಳಿಕೆ ಪಂಚರಾಜ್ಯ ಚುನಾವಣೆಯಲ್ಲಿ ನಕಲು: ಶಾಸಕ ಶಾಮನೂರು ಶಿವಶಂಕರಪ್ಪ

By Kannadaprabha NewsFirst Published Nov 15, 2023, 11:57 AM IST
Highlights

ದೇಶದಲ್ಲಿ ಯಾವುದೇ ರಾಜ್ಯದಲ್ಲಿ ನೀಡದ ಅನೇಕ ಭರವಸೆಗಳನ್ನು ಈಡೇರಿಸಿ ಅಭಿವೃದ್ಧಿ ಕಡೆ ಗಮನಹರಿಸುವ ರಾಜ್ಯವಿದ್ದರೆ ಅದು ರಾಜ್ಯದ ಕಾಂಗ್ರೆಸ್ ಪಕ್ಷದ ಆಡಳಿತ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. 

ದಾವಣಗೆರೆ (ನ.15): ದೇಶದಲ್ಲಿ ಯಾವುದೇ ರಾಜ್ಯದಲ್ಲಿ ನೀಡದ ಅನೇಕ ಭರವಸೆಗಳನ್ನು ಈಡೇರಿಸಿ ಅಭಿವೃದ್ಧಿ ಕಡೆ ಗಮನಹರಿಸುವ ರಾಜ್ಯವಿದ್ದರೆ ಅದು ರಾಜ್ಯದ ಕಾಂಗ್ರೆಸ್ ಪಕ್ಷದ ಆಡಳಿತ ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ತಿಳಿಸಿದರು. ಕುಕ್ಕವಾಡ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಹಮ್ಮಿಕೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿ ಹಾಗೂ ಕುಕ್ಕುವಾಡ ಗ್ರಾಮ ಪಂಚಾಯ್ತಿಯಿಂದ ಹಮ್ಮಿಕೊಂಡಿದ್ದ ಡಾ.ಶಾಮನೂರು ಶಿವಶಂಕರಪ್ಪ ವೃತ್ತ ಉದ್ಘಾಟನಾ ಕಾರ‍್ಯಕ್ರಮದಲ್ಲಿ ಮಾತನಾಡಿ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ದೇಶಕ್ಕೆ ಮಾದರಿ ಎಂಬುದಕ್ಕೆ ಈಗ ನಡೆಯುತ್ತಿರುವ 5 ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಎಲ್ಲಾ ಪಕ್ಷಗಳು ನಕಲು ಮಾಡುತ್ತಿವೆ. 

ಇಲ್ಲಿನ ಬಿಜೆಪಿಯವರು ರಾಜ್ಯ ದಿವಾಳಿ ಆಗಲಿದೆ ಎನ್ನುತ್ತಿದ್ದರೆ ಬಿಜೆಪಿ ಹೈಕಮಾಂಡ್ ಚುನಾವಣೆ ನಡೆಯುವ ರಾಜ್ಯಗಳಲ್ಲಿ ನಮ್ಮ ಮಾದರಿ ಆಡಳಿತ ನೀಡುವ ಭರವಸೆ ನೀಡುತ್ತಿವೆ ಎಂದರು. ಕಳೆದ 8 ತಿಂಗಳ ಹಿಂದೆ ಈ ಭಾಗದ ಅನೇಕ ರಸ್ತೆಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿತ್ತು. ಈ ರಸ್ತೆಗೂ ಚಾಲನೆ ನೀಡಿದ್ದೆವು. ಕೆಲವು ತಾಂತ್ರಿಕ ತೊಂದರೆಗಳಿಂದಾಗಿ ಈ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಿಲ್ಲ. ಇದೀಗ ಈ ರಸ್ತೆಯನ್ನು ಸಂಪೂರ್ಣ ಅಭಿವೃದ್ಧಿ ಉದ್ದೇಶದಿಂದ ಲೋಕೋಪಯೋಗಿ ಇಲಾಖೆಯಿಂದ ಸುಮಾರು ₹3 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದರು. 

ರನ್ನ ಕಾರ್ಖಾನೆ ಅವ್ಯವಹಾರದಲ್ಲಿ ಭಾಗಿಯಾದವರಿಗೆ ಶಿಕ್ಷೆ ಗ್ಯಾರಂಟಿ: ಸಚಿವ ಆರ್.ಬಿ.ತಿಮ್ಮಾಪುರ

ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೆ.ಎನ್.ಮಂಜುನಾಥ್ ಮಾತನಾಡಿ ಈ ಗ್ರಾಮಕ್ಕೆ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಅಪಾರ, ಅವರಿಗೆ ನಾವೆಂದು ಚಿರಋಣಿ ಆಗಿರುತ್ತೇವೆ ಎಂದರು. ಈ ಸಂದರ್ಭದಲ್ಲಿ ಉದ್ಯಮಿ ಎಸ್.ಎಸ್.ಗಣೇಶ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಜಿ.ಸಿ.ನಿಂಗಪ್ಪ, ಕುಕ್ಕುವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸೌಭಾಗ್ಯಮ್ಮ, ಗ್ರಾಮದ ಮುಖಂಡರುಗಳಾದ ಡಿ.ಮಲ್ಲೇಶಪ್ಪ, ಜಿ.ಎಂ.ರುದ್ರಗೌಡ್ರು, ಕೆ.ಜಿ.ಮಹೇಶ್ವರಪ್ಪ, ಅಂಜಿನಪ್ಪ, ಲಿಂಗೇಶ್, ಅನ್ವರ್ ಬಾಷಾ, ರಿಯಾಜ್, ಲೋಕೋಪಯೋಗಿ ಇಲಾಖೆಯ ಕರ‍್ಯಪಾಲಕ ಅಭಿಯಂತರರಾದ ನರೇಂದ್ರಬಾಬು ಮತ್ತಿತರರಿದ್ದರು.

click me!