ಸಂವಿಧಾನ ಆಶಯಗಳನ್ನು ಇನ್ನೂ ಈಡೇರಿಸಿಲ್ಲ:ಡಾ. ಪರಮೇಶ್ವರ್‌

By Kannadaprabha NewsFirst Published Sep 5, 2022, 2:02 PM IST
Highlights

ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಲು ಸಾಧ್ಯವಾಗಿಲ್ಲದೆ ಇರುವುದು ನಾಚಿಕೆಗೇಡು, ಸಂವಿಧಾನವನ್ನು ಗೌರವಿಸುವ ಬದಲು ಅದಕ್ಕೆ ಕೊಡಲಿ ಪೆಟ್ಟು ನೀಡುವ ಕೃತ್ಯಗಳು ದೇಶದಲ್ಲಿ ಹೆಚ್ಚಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.

ಕೋಲಾರ (ಸೆ.5) : ದೇಶವು ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸುತ್ತಿದ್ದರೂ ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಲು ಸಾಧ್ಯವಾಗಿಲ್ಲದೆ ಇರುವುದು ನಾಚಿಕೆಗೇಡು, ಸಂವಿಧಾನವನ್ನು ಗೌರವಿಸುವ ಬದಲು ಅದಕ್ಕೆ ಕೊಡಲಿ ಪೆಟ್ಟು ನೀಡುವ ಕೃತ್ಯಗಳು ದೇಶದಲ್ಲಿ ಹೆಚ್ಚಾಗಿದೆ, ಸಂವಿಧಾನದ ಬದಲು ಮಾನವೀಯತೆಯನ್ನು ಮರೆಸುವ ಮನುವಾದವನ್ನು ಜಾರಿಗೊಳಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಎಚ್ಚರಿಸಿದರು.

ಕೊರಟಗೆರೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವೆ: ಶಾಸಕ ಪರಮೇಶ್ವರ್‌

ಕೋಲಾರ(Kolar)ದಲ್ಲಿ ವಿವಿಧ ಸಂಘಟನೆಗಳು ತಮಗೆ ನೀಡಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅವರು, ಸಂವಿಧಾನಕ್ಕೆ ಕೊಡಲಿ ಪೆಟ್ಟು ಹಾಕುವ ಯತ್ನದ ವಿರುದ್ಧ ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದವರು ಎಚ್ಚೆತ್ತುಕೊಳ್ಳಬೇಕು, ಎಲ್ಲರೂ ಒಂದಾಗುವ ಮೂಲಕ ಆ ಪ್ರಯತ್ನಕ್ಕೆ ಕಡಿವಾಣ ಹಾಕಬೇಕು ಎಂದು ಕರೆ ನೀಡಿದರು. ಪರಿಶಿಷ್ಟಜಾತಿ ಮತ್ತು ವರ್ಗದವರು ಎಡ-ಬಲ-ಮಧ್ಯ ಎಂಬಿತ್ಯಾದಿ ಭಿನ್ನಾಪ್ರಾಯಗಳನ್ನು ಬಿಟ್ಟು ಒಂದಾಗಬೇಕು, ಅಂಬೇಡ್ಕರ್‌ ಅವರು ರೂಪಿಸಿದ ಸಂವಿಧಾನವನ್ನು ರಕ್ಷಣೆ ಮಾಡಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು ಎಂದು ಸಲಹೆ ಮಾಡಿದರು.ಎಲ್ಲ ಶೋಷಿತ ವರ್ಗಗಳು ಈಗಲೇ ಜಾಗೃತರಾಗದಿದ್ದರೆ ದೇಶದಲ್ಲಿ ಮುಂದೆ ಉಳಿಗಾಲವಿರುವುದಿಲ್ಲ, ಅಂಬೇಡ್ಕರ್‌ ಜನ್ಮತಾಳದಿದ್ದರೆ ಭಾರತದಲ್ಲಿ ನಮ್ಮ ಪರಿಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಅರ್ಥಮಾಡಿಕೊಂಡು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ಅಂಬೇಡ್ಕರ್‌(Ambedkar) ಕೇವಲ ಪರಿಶಿಷ್ಟಜಾತಿ ಮತ್ತು ವರ್ಗದವರಿಗೆ ಮಾತ್ರ ಮತದಾನ ಹಾಗೂ ಮೀಸಲಾತಿಯ ಹಕ್ಕು ನೀಡಲಿಲ್ಲ, ಎಲ್ಲ ಜಾತಿಯ ಶೋಷಿತರಿಗೆ ಸಮಾನ ಹಕ್ಕುಗಳನ್ನು ಕಲ್ಪಿಸುವ ಸಂವಿಧಾನವನ್ನು ರೂಪಿಸಿಕೊಟ್ಟಿದ್ದಾರೆ. ಇಂದು ಉತ್ತರ ಪ್ರದೇಶ, ಬಿಹಾರ್‌ದ್ದಂತಹ ರಾಜ್ಯಗಳಲ್ಲಿ ಶೋಷಿತ ವರ್ಗದ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುವ ದುಸ್ಥಿತಿ ಇದ್ದರೂ ಅಧಿಕಾರದಲ್ಲಿ ಇರುವವರು ಅದನ್ನು ತಡೆಯುತ್ತಿಲ್ಲ ಎಂದು ದೂಷಿಸಿದರು. ರಾಜ್ಯದಲ್ಲಿ ಒಂದೂವರೆ ಕೋಟಿ ದಲಿತರು ಇದ್ದು, ಎಲ್ಲರೂ ಒಂದಾದರೆ 150 ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮದೇ ಮೇಲುಗೈ ಆಗಿ ದಲಿತರ ಕೈಗೆ ಅಧಿಕಾರದ ಬೀಗ ಸಿಗುತ್ತದೆ ಎಂದು ಪರಮೇಶ್ವರ್‌ ನುಡಿದರು.

ಸರ್ಕಾರದ ಇಲಾಖಾವಾರು ಭ್ರಷ್ಟಾಚಾರ ಜಗಜ್ಜಾಹೀರು: ಪರಂ

ಮಾಜಿ ಸ್ವೀಕರ್‌ ರಮೇಶ್‌ಕುಮಾರ್‌ ಮಾತನಾಡಿ, ಸಂವಿಧಾನವನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ಪ್ರತಿಕ್ಷಣ ತೊಡಗುತ್ತಿರುವವರ ಕೈಗೆ ಅಧಿಕಾರ ಹೋಗಿದೆ, ಅದನ್ನು ತಪ್ಪಿಸದಿದ್ದರೆ ದೇಶದಲ್ಲಿ ಶೋಷಿತರಿಗೆ ಉಳಿಗಾಲವಿರುವುದೇ ಇಲ್ಲ ಎಂದು ಎಚ್ಚರಿಸಿದರು. ರಾಜ್ಯ ಮತ್ತು ದೇಶದಲ್ಲಿ ಆಡಳಿತವು ವಿಧಾನಸೌಧದ ಬದಲು ಕೇಶವ ಕೃಪ ಮತ್ತು ಆರ್‌ಎಸ್‌ಎಸ್‌ ಕೇಂದ್ರ ಕಚೇರಿಗಳ ಹಿಡಿತದಲ್ಲಿ ನಡೆಯುತ್ತಿದೆ, ನಾವು ಈಗಲೂ ಎಚ್ಚರವಹಿಸದಿದ್ದರೆ ಸಂವಿಧಾನಕ್ಕೆ ಅಪಚಾರ ಉಂಟು ಮಾಡುವುದು ಖಚಿತ ಹಾಗೂ ನಾವು ಹುಳುಗಳಂತೆ ಹುಡುಕಬೇಕಾಗುತ್ತದೆ ಎಂದು ಎಚ್ಚರಿಸಿದರು. ಈ ವೇಳೆ ಡಿಎಸ್‌ಎಸ್‌ ಮುಖಂಡ ಎಸ್‌.ಮುನಿಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಇದ್ದರು.

click me!