ವಿಜಯಪುರ ಮೇಯರ್‌ ಹುದ್ದೆ ಕಾಂಗ್ರೆಸ್‌ ಪಾಲು: ಯತ್ನಾಳ್‌ಗೆ ಮುಖಭಂಗ

By Kannadaprabha NewsFirst Published Jan 10, 2024, 6:13 AM IST
Highlights

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 14 ತಿಂಗಳು ಗತಿಸಿದ್ದವು. ಆದರೆ, ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಯನ್ನು ಜ.9ರಂದು ನಿಗದಿಪಡಿಸಲಾಗಿತ್ತು. ಹೀಗಾಗಿ ಸಹಜವಾಗಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಪಾಲಿಕೆಯಲ್ಲಿ ಬಿಜೆಪಿ ಒಟ್ಟು 35 ಸದಸ್ಯ ಬಲದ ಪೈಕಿ 17 ಸ್ಥಾನಗಳನ್ನು ತನ್ನದಾಗಿಸಿಕೊಂಡು ಸರಳವಾಗಿ ಅಧಿಕಾರ ಹಿಡಿಯಬಹುದಿತ್ತು. ಆದರೆ, ಕಾಂಗ್ರೆಸ್‌ನ ಶಕ್ತಿಪ್ರದರ್ಶನದ ಎದುರು ಸುಲಭವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

ವಿಜಯಪುರ(ಜ.10):  ಚುನಾವಣೆ ಜರುಗಿ 14 ತಿಂಗಳು ಗತಿಸಿದ ನಂತರ ವಿಜಯಪುರ ಮಹಾನಗರ ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ಗಳೆರಡೂ ಕಾಂಗ್ರೆಸ್‌ ಪಾಲಾದವು. ಪಾಲಿಕೆಯಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿಗೆ ಪಾಲಿಕೆ ಮೇಲೆ ಹಿಡಿತ ಸಾಧಿಸದೇ ಮುಖಭಂಗ ಅನುಭವಿಸುವಂತಾಯಿತು.

ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಆಗಿ 34ನೇ ವಾರ್ಡ್‌ ಸದಸ್ಯರಾದ ಮೆಹೇಜಬಿನ್ ಹೊರ್ತಿ ಹಾಗೂ ಉಪಮೇಯರ್ ಆಗಿ 18ನೇ ವಾರ್ಡ್‌ ಸದಸ್ಯ ದಿನೇಶ ಹಳ್ಳಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಸಚಿವ ಎಂ.ಬಿ.ಪಾಟೀಲ ಅವರ ತಂತ್ರಗಾರಿಕೆ ಫಲಿಸುವ ಮೂಲಕ ಮಹಾನಗರ ಪಾಲಿಕೆಯಲ್ಲಿ ಕೈ ದಿಗ್ವಿಜಯ ಸಾಧಿಸಿತು. ಆದರೆ, ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದರೂ ಅಧಿಕಾರ ಪಡೆಯುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಯತ್ನ ಕೈಗೂಡದೇ ಸೋಲೊಪ್ಪಿಕೊಳ್ಳಬೇಕಾಯಿತು.

Latest Videos

ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹರಿಪ್ರಸಾದ್‌ ಸಂಚು: ಯತ್ನಾಳ

ವಿಜಯಪುರ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 14 ತಿಂಗಳು ಗತಿಸಿದ್ದವು. ಆದರೆ, ಮೇಯರ್‌ ಮತ್ತು ಉಪಮೇಯರ್‌ ಚುನಾವಣೆಯನ್ನು ಜ.9ರಂದು ನಿಗದಿಪಡಿಸಲಾಗಿತ್ತು. ಹೀಗಾಗಿ ಸಹಜವಾಗಿ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು. ಪಾಲಿಕೆಯಲ್ಲಿ ಬಿಜೆಪಿ ಒಟ್ಟು 35 ಸದಸ್ಯ ಬಲದ ಪೈಕಿ 17 ಸ್ಥಾನಗಳನ್ನು ತನ್ನದಾಗಿಸಿಕೊಂಡು ಸರಳವಾಗಿ ಅಧಿಕಾರ ಹಿಡಿಯಬಹುದಿತ್ತು. ಆದರೆ, ಕಾಂಗ್ರೆಸ್‌ನ ಶಕ್ತಿಪ್ರದರ್ಶನದ ಎದುರು ಸುಲಭವಾಗಿ ಸೋಲೊಪ್ಪಿಕೊಳ್ಳಬೇಕಾಯಿತು.

ಮೇಯರ್‌ಗೆ ಮಾತ್ರ ಪೈಪೋಟಿ:

ಮಹಾನಗರ ಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯರಿಗೆ ಮೀಸಲಿತ್ತು. ಅದರಂತೆ ಉಪಮೇಯರ್‌ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿತ್ತು. ಅದರಂತೆ ಪಾಲಿಕೆ ನೂತನ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಸಂಜಯ ಶೆಟ್ಟೆಣ್ಣವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು. ಮೇಯರ್ ಹುದ್ದೆಗೆ ಆಯ್ಕೆ ಬಯಸಿ ಬಿಜೆಪಿಯಿಂದ ವಾರ್ಡ್ ನಂ.೧೨ರ ಸದಸ್ಯೆ ರಶ್ಮೀ ಕೋರಿ ಎರಡು ಸುತ್ತಿನಲ್ಲಿ, ಕಾಂಗ್ರೆಸ್‌ನಿಂದ ವಾರ್ಡ್ ೩೪ರ ಸದಸ್ಯೆ ಮೆಹಜಬೀನ್ ಹೊರ್ತಿ ಮೂರು ಸುತ್ತಿನಲ್ಲಿ ನಾಮಪತ್ರ ಸಲ್ಲಿಸಿದರು. ಇನ್ನು ಉಪಮೇಯರ್‌ ಸ್ಥಾನಕ್ಕೆ ಬಿಜೆಪಿಯಲ್ಲಿ ಪಪಂಗೆ ಸೇರಿದ ಸದಸ್ಯರ ಯಾರೂ ಇರಲಿಲ್ಲ. ಕಾಂಗ್ರೆಸ್‌ನಿಂದ 18ನೇ ವಾರ್ಡ್‌ ಸದಸ್ಯ ದಿನೇಶ ಹಳ್ಳಿ ನಾಮಪತ್ರ ಸಲ್ಲಿಸಿದರು

ಒಟ್ಟು ೩೫ ಸದಸ್ಯ ಬಲದ ಮಹಾನಗರ ಪಾಲಿಕೆಗೆ ೨೦೨೨ರ ಅಕ್ಟೋಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ೧೭, ಕಾಂಗ್ರೆಸ್ ೧೦, ಎಐಎಂಐಎಂ ೨, ಜೆಡಿಎಸ್ ೧ ಹಾಗೂ ಪಕ್ಷೇತರರು ೫ ಸ್ಥಾನದಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಸಂಖ್ಯಾಬಲದಲ್ಲಿ ಹೆಚ್ಚಿತ್ತು.

ನಿಗದಿಯಂತೆ ಮಂಗಳವಾರ ಬೆಳಗ್ಗೆ ೯ ರಿಂದ ೧೧ ಗಂಟೆಯವರೆಗೆ ಮೇಯರ್ ಸ್ಥಾನಕ್ಕೆ ೨ ಅಭ್ಯರ್ಥಿಗಳಿಂದ ೫ ನಾಮಪತ್ರಗಳು ಸ್ವೀಕೃತವಾಗಿದ್ದವು. ಮಹಾಪೌರ ಸ್ಥಾನಕ್ಕೆ ಸಲ್ಲಿಕೆಯಾದ ೫ ನಾಮಪತ್ರ ಹಾಗೂ ಉಪಮೇಯರ್ ಸ್ಥಾನಕ್ಕೆ ಸಲ್ಲಿಕೆಯಾದ ೨ ನಾಮಪತ್ರಗಳು ಕ್ರಮಬದ್ಧವಾಗಿದ್ದವು.

ಚುನಾವಣಾ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೆ ಬಿಜೆಪಿ ಸದಸ್ಯರು ಚುನಾವಣಾ ಪ್ರಕ್ರಿಯೆಯಿಂದ ದೂರ ಉಳಿದು ಹೊರ ನಡೆದರು. ಕೋರಂ ಅನ್ವಯ ೧೪ ಜನರ ಸದಸ್ಯರ ಹಾಜರಾತಿ ಇದ್ದ ಪರಿಣಾಮ ಚುನಾವಣಾ ಪ್ರಕ್ರಿಯೆ ಸರಾಗವಾಗಿ ಸಾಗಿತು. ಕೈ ಎತ್ತುವ ಮೂಲಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ೨೨ ಜನ ಸದಸ್ಯರು ಕೈ ಎತ್ತುವ ಮೂಲಕ ಬೆಂಬಲ ನೀಡಿದರು. ಹೀಗಾಗಿ ಮೇಯರ್‌ ಆಗಿ ಮಹೇಜಬಿನ್ ಹೊರ್ತಿ ಆಯ್ಕೆಯಾದರು. ಉಪಮೇಯರ್‌ ಸ್ಥಾನಕ್ಕೆ ದಿನೇಶ ಹಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರು ಕೂಡ ಅವಿರೋಧವಾಗಿ ಆಯ್ಕೆಯಾದರು.

ಬಿಜೆಪಿ ವರಿಷ್ಠರ ಎದುರು ಇಲ್ಲಿನ ಅಡ್ಜಸ್ಟ್‌ಮೆಂಟ್‌ ಎಲ್ಲ ಹೇಳಿದ್ದೇನೆ: ಶಾಸಕ ಬಸನಗೌಡ ಯತ್ನಾಳ

ಬಿಜೆಪಿಯಿಂದ ಚುನಾವಣಾ ಬಹಿಷ್ಕಾರ:

ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಮುಂದೂಡುವ ವಿಷಯವಾಗಿ ನೋಟಿಸ್ ಜಾರಿಯಾಗಿದ್ದರೂ ತರಾತುರಿಯಲ್ಲಿ ಪ್ರಾದೇಶಿಕ ಆಯುಕ್ತರು ಚುನಾವಣಾ ಪ್ರಕ್ರಿಯೆ ನಡೆಸಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಬಿಜೆಪಿ ಪಾಲಿಕೆ ಸದಸ್ಯರು ಹಾಗೂ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸಂಸದ ರಮೇಶ ಜಿಗಜಿಣಗಿ ಅವರು ಚುನಾವಣಾ ಪ್ರಕ್ರಿಯೆಯನ್ನು ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.
ಕಪ್ಪು ಬಟ್ಟೆ ಪ್ರದರ್ಶಿಸುತ್ತಾ ‘ಪ್ರಾದೇಶಿಕ ಆಯುಕ್ತರಿಗೆ ಧಿಕ್ಕಾರ’ ಎಂಬ ಕೂಗು ಮೊಳಗಿಸುತ್ತಾ ಹೊರ ನಡೆದರು. ನೀತಿ ನಿಯಮಗಳನ್ನು ಮೀರಿ ಚುನಾವಣೆ ನಡೆಸಲಾಗಿದೆ. ಪ್ರಾದೇಶಿಕ ಆಯುಕ್ತರು ಈ ವಿಷಯವಾಗಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹೈಕೋರ್ಟ್‌ನಲ್ಲೂ ಪ್ರಶ್ನೆ ಮಾಡಲಾಗಿತ್ತು:

ಮೇಯರ್, ಉಪಮೇಯರ್ ಸ್ಥಾನದ ಮೀಸಲಾತಿ ಪ್ರಶ್ನಿಸಿ, ಕೆಲ ಸದಸ್ಯರು ಹೈಕೋರ್ಟ್ ಮೇಟ್ಟಿಲೇರಿದ್ದ ಕಾರಣ ೧೪ ತಿಂಗಳಿಂದ ಪಾಲಿಕೆಯ ಮೇಯರ್‌ ಮತ್ತು ಉಪಮೇಯರ್‌ ಸ್ಥಾನಕ್ಕೆ ಚುನಾವಣೆ ನಡೆದಿರಲಿಲ್ಲ. ಈ ಮಧ್ಯೆ ಇತ್ತೀಚೆಗಷ್ಟೇ ಬಿಜೆಪಿ ಪಾಲಿಕೆ ಸದಸ್ಯರೊಬ್ಬರ ಅಕಾಲಿಕ ನಿಧನದಿಂದಾಗಿ ಮತ್ತೆ ಚುನಾವಣೆ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದ್ದವು. ಈ ವಿಷಯವಾಗಿ ಬಿಜೆಪಿ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಮಂಗಳವಾರ ಮಾತ್ರ ಚುನಾವಣೆ ನಿಗದಿಯಂತೆ ನಡೆಯಿತು.

click me!