ಸಿಲಿಂಡರ್‌ ಬೆಲೆ ಹೆಚ್ಚಿಸುವ ಬದಲು ಉಚಿತ ಸೌಧೆ ಒಲೆ ನೀಡಿ: ಬಿಜೆಪಿ ವಿರುದ್ಧ ಕಾಂಗ್ರೆಸ್‌ ಕಿಡಿ

By Girish GoudarFirst Published May 22, 2022, 5:44 AM IST
Highlights

*   ಉಜ್ವಲ ಯೋಜನೆ ರದ್ದು ಪಡಿಸಿ
*   ಬಿಜೆಪಿ ಸರ್ಕಾರದ ವಿರುದ್ಧ ಪುಷ್ಪಾ ಆಕ್ರೋಶ
*   ಯುಪಿಎ ಅವಧಿಯಲ್ಲಿ 10 ಬೆಲೆ ಹೆಚ್ಚಳವಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸ್ಮೃತಿ ಇರಾನಿ
 

ಬೆಂಗಳೂರು(ಮೇ.22):  ಕಳೆದ 8 ವರ್ಷದಲ್ಲಿ ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ ಬೆಲೆ ಸುಮಾರು .600 ಹಾಗೂ ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆ .845 ಹೆಚ್ಚಳ ಮಾಡಲಾಗಿದೆ. ಕೇಂದ್ರ ಸರ್ಕಾರವು ಈ ರೀತಿ ಮಹಿಳೆಯರ ಶೋಷಣೆ ಮಾಡುವ ಬದಲು ಉಜ್ವಲ ಯೋಜನೆ ರದ್ದುಪಡಿಸಿ ಉಚಿತ ಸೌಧೆ ಒಲೆ ಯೋಜನೆ ಜಾರಿಗೆ ತರಲಿ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಡಾ. ಪುಷ್ಪಾ ಅಮರನಾಥ್‌ ಒತ್ತಾಯಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಗ್ಯಾಸ್‌ ಸಿಲಿಂಡರ್‌ಗಳಿಗೆ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಶೋಭಾ ಕರಂದ್ಲಾಜೆ ಹಾಗೂ ಸ್ಮೃತಿ ಇರಾನಿ ಅವರ ಫೋಟೋ, ಹೂವಿನ ಹಾರ ಹಾಕಿ ಸಾಂಕೇತಿಕವಾಗಿ ಪ್ರತಿಭಟಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆಯರಿಗೆ ಅಚ್ಛೇ ದಿನ್‌ ಭರವಸೆ ನೀಡಿ ಅಧಿಕಾರಕ್ಕೆ ಬಂದವರು ಶೋಷಣೆ ಮಾಡುತ್ತಿದ್ದಾರೆ. ಕೇವಲ ಅಡುಗೆ ಅನಿಲ ಮಾತ್ರವಲ್ಲದೆ ಪೆಟ್ರೋಲ್‌, ಡೀಸೆಲ್‌, ದಿನನಿತ್ಯದ ಅಗತ್ಯದ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಜೀವನವನ್ನು ಅತಂತ್ರಗೊಳಿಸಿದೆ. ಬಿಜೆಪಿಯಲ್ಲಿನ ಮಹಿಳಾ ನಾಯಕಿಯರೂ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ ಎಂದು ಕಿಡಿ ಕಾರಿದರು.

Latest Videos

LPG Price Hike: ಗ್ಯಾಸ್‌ ಸಿಲಿಂಡರ್ ದರ ಮತ್ತೆ 50 ರೂ ಏರಿಕೆ, ಜನಸಾಮಾನ್ಯರಿಗೆ ಮತ್ತಷ್ಟು ಹೊರೆ!

ಯುಪಿಎ ಅವಧಿಯಲ್ಲಿ 10 ಬೆಲೆ ಹೆಚ್ಚಳವಾದರೆ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ ಈಗ ಎಲ್ಲಿದ್ದಾರೆ. ಸರ್ಕಾರವು ಸತ್ತು ಮಲಗಿದ್ದು, ನಾವು ಹೋರಾಟ ಮಾಡುತ್ತಿದ್ದರೂ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಿದೆ. ಹೀಗಾಗಿ ಸರ್ಕಾರವೇ ಉಚಿತ ಸೌಧೆ ಒಲೆ ನೀಡುವ ಮೂಲಕ ನ್ಯಾಯ ಒದಗಿಸಲಿ ಎಂದು ಆಗ್ರಹಿಸುತ್ತಿದ್ದೇವೆ ಎಂದರು.

ಇನ್ನು ರಾಜ್ಯದಲ್ಲಿ ದಲಿತ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ಹೆಚ್ಚಾಗುತ್ತಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಕ್ಷೇತ್ರದಲ್ಲೇ ದಲಿತ ಕುಟುಂಬದ ಮೇಲೆ ದೌರ್ಜನ್ಯ ನಡೆದಿದ್ದರೂ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಜ್ಞಾನೇಂದ್ರ ಅವರು ಚಕಾರ ಎತ್ತಿಲ್ಲ ಎಂದು ಕಿಡಿ ಕಾರಿದರು. ಬಿಬಿಎಂಪಿ ಮಾಜಿ ಮೇಯರ್‌ ಜಿ. ಪದ್ಮಾವತಿ ಸೇರಿ ಹಲವರು ಹಾಜರಿದ್ದರು.
 

click me!