ಮಸ್ಕಿಯಲ್ಲಿ ಬಿಜೆಪಿಯಿಂದ ಹಣ ಹಂಚಿಕೆ: ಗಂಭೀರ ಸ್ವರೂಪ ಪಡೆದ ಪ್ರಕರಣ

By Suvarna NewsFirst Published Apr 9, 2021, 3:36 PM IST
Highlights

ಮಸ್ಕಿ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಬಿಜೆಪಿ ಸರ್ಕಾರ ಹಾಗೂ ಅಧಿಕಾಇರಗಳ ವಿರುದ್ಧ ಕೈ ನಾಯಕರು ಬೀದಿಗಿಳಿದಿದ್ದಾರೆ.

ಮಸ್ಕಿ (ರಾಯಚೂರು), (ಏ.09): ಮಸ್ಕಿ ವಿಧಾನಸಭೆ ಉಪಚುನಾವಣೆ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇದರ ಮಧ್ಯೆ ಕುರುಡು ಕಾಂಚಾಣ ಕುಣಿಯುತ್ತಿದೆ.

ಹೌದು...ಮಸ್ಕಿ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಬಿಜೆಪಿ ಕಾರ್ಯಕರ್ಯತರು ಮತದಾರರಿಗೆ ಹಣ ಹಂಚಿತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇನ್ನು ಕೆಲ ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ಹೆಸರಿನಲ್ಲಿ ಹಣ ಹಂಚುತ್ತಿದ್ದ ಕಾರ್ಯಕರ್ತರನ್ನು ಜನರು ಹಿಡಿದು ತರಾಟೆಗೆ ತೆಗೆದುಕೊಂಡಿರುವ ಪ್ರಸಂಗಗಳು ಸಹ ನಡೆದಿವೆ.

ಈ ಮತದಾರರಿಗೆ ಹಣ ಹಂಚಿಕೆ ಪ್ರಕರಣ ಗಂಭೀರ ಸ್ವರೂಪ ಪಡೆದಿದ್ದು, ಕಾಂಗ್ರೆಸ್ ಶಾಸಕರು, ಮುಖಂಡರು ರಸ್ತೆಗಿಳಿದು ಪ್ರತಿಭಟನೆ ನಡೆಸಿದೆ.

ಆಕಾಶ ಕಳಚಿದರೂ 5 ಎ ಕಾಲುವೆ ಜಾರಿ ಖಚಿತ: ಮಾತು ಕೊಟ್ಟ ಸಿದ್ದರಾಮಯ್ಯ

ಕ್ಷೇತ್ರದಲ್ಲಿ ಬಿಜೆಪಿ ಪರವಾಗಿ‌ ಒಂದು ವೋಟಿಗೆ 200 ರೂಪಾಯಿ ಹಣ ಹಂಚಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡರು ಹೋರಾಟಕ್ಕಿಳಿದರು. ಈ ವೇಳೆ ಚುನಾವಣಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು.

ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ರನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವಂತೆ ಒತ್ತಾಯಿಸಿದ ಮುಖಂಡರು ಕ್ರಮಕ್ಕೆ ಮುಂದಾಗದ ಅಧಿಕಾರಿಗಳ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಬೇರೆ-ಬೇರೆ ಜಿಲ್ಲೆಗಳಿಂದ ಹಣ ನೀಡಲು ಬಂದವರನ್ನು ಕೂಡಲೇ ಕ್ಷೇತ್ರದಿಂದ ಆಚೆ ಕಳುಹಿಸಬೇಕು ಎಂದು ಆಗ್ರಹಿಸಿದರು.

ಮಸ್ಕಿಯಲ್ಲಿ ಬಿಜೆಪಿ ಸರ್ಕಾರವಿಲ್ಲ. ಸದ್ದಾಂ ಸರ್ಕಾರವಿದೆ. ಹಣ ಹಂಚಿಕೆ ಮಾಹಿತಿ ನೀಡಿದರೂ ಪೊಲೀಸರು ಕ್ರಮಕ್ಕೆ ಮುಂದಾಗುತ್ತಿಲ್ಲ. ಪೊಲೀಸ್ ಅಧಿಕಾರಿಗಳಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಗಾನೂರು, ತುರವಿಹಾಳ ಗ್ರಾಮದಲ್ಲಿ ಹಣ ಹಂಚಿಕೆ ಮಾಡಿದವರ ವಿರುದ್ದ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಚುನಾವಣಧಿಕಾರಿ ಕಚೇರಿ ಎದುರು ಧರಣಿ ಕುಳಿತರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ, ಮಾಜಿ ಸಚಿವ ಆಂಜನೇಯ, ಎನ್ ಎಸ್.ಬೋಸರಾಜ್, ಬಸವರಾಜ್ ರಾಯರೆಡ್ಡಿ, ಹಂಪನಗೌಡ ಬಾದರ್ಲಿ, ಬಿ.ವಿ.ನಾಯಕ ಸೇರಿದಂತೆ  ಸೇರಿ ಹಲವಾರು ನಾಯಕರು, ನೂರಾರು ಕಾರ್ಯಕರ್ತರು ಸೇರಿದ್ದರು.

click me!