ಕಾಂಗ್ರೆಸ್ ನ ಟ್ರಬಲ್ ಶೂಟರ್, ಸಂಧಾನ ಸೂತ್ರಧಾರ ಎಂದೇ ಬಿಂಬಿತರಾಗಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಲ್ಲ ಅಂದ್ರೆ ರಾಜ್ಯ ಕಾಂಗ್ರೆಸ್ ನಲ್ಲಿ ಏನು ನಡೆಯುವದಿಲ್ಲ ಎಂದು ಮತ್ತೊಮ್ಮೆ ಸಾಬೀತಾಗಿದೆ. ಅದೇನಂತೀರಾ ಇಲ್ಲಿದೆ ನೋಡಿ.
ಬೆಳಗಾವಿ, [ಡಿ.11]: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಕೈ ಶಾಸಕರ ಸಭೆ ಕರೆದು ಮುಖಭಂಗಕ್ಕೊಳಗಾಗಿದ್ದಾರೆ.
ಬೆಳಗಾವಿ ಸುವರ್ಣಸೌಧದಲ್ಲಿ ಇಂದು [ಮಂಗಳವಾರ] ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು ಮಧ್ಯಾಹ್ನ 1.30ಕ್ಕೆ ರಾಜ್ಯ ಕೈ ಶಾಸಕರ ಸಭೆ ಕರೆದಿದ್ದರು.
ಆದ್ರೆ ಸಮಯ 3 ಗಂಟೆಯಾದರೂ ಸಭೆಗೆ ಯಾವೊಬ್ಬ ಕಾಂಗ್ರೆಸ್ ಶಾಸಕರು ಬರದೇ ದಿನೇಶ್ ಗುಂಡುರಾವ್ ವಿರುದ್ಧ ತಿರುಗಿಬಿದ್ದಿದ್ದು, ಸಚಿವ ಸಂಪುಟ ಸಭೆ ಬಗ್ಗೆ ಚರ್ಚೆ ಮಾಡ್ತೀರಾ? ನಿಗಮ ಮಂಡಳಿ ನೇಮಕದ ಬಗ್ಗೆ ಚರ್ಚಿಸೋದಾದ್ರೆ ಸಭೆಗೆ ಬರ್ತಿವಿ. ಇಲ್ಲದಿದ್ದರೆ ಏಕೆ ಸಭೆಗೆ ಬರಬೇಕು?.
ಡಿ.18 ರಂದು ಸಿದ್ದರಾಮಯ್ಯ ಅವರು ಸಿಎಲ್ ಪಿ ಕರೆದಿರುವಾಗ ಈಗ ಏಕೆ ಶಾಸಕರ ಸಭೆ? ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಸ್ವಪಕ್ಷದ ಶಾಸಕರು ಪ್ರಶ್ನಿಸಿದ್ದು, ಸಿದ್ದರಾಮಯ್ಯ ಅವರು ಬರುವ ವರೆಗೆ ಶಾಸಕರ ಸಭೆ ಅಗತ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಇದ್ರಿಂದ ದಿನೇಶ್ ಗುಂಡುರಾವ್ ಅಪಹಾಸ್ಯಕ್ಕೀಡಾಗಿದ್ದು, ಸಭೆಗೆ ಯಾವೊಬ್ಬ ಶಾಸಕರು ಬರದ ಹಿನ್ನಲೆಯಲ್ಲಿ ಸಭೆ ರದ್ದು ಮಾಡಿದ್ದಾರೆ. ಇದು ಕಾಂಗ್ರೆಸ್ ಶಾಸಕರು ಸಿದ್ದರಾಮಯ್ಯ ಅವರ ಮೇಲೆ ಇಟ್ಟಿರುವ ವಿಶ್ವಾಸವೋ ಅಥವಾ ಸಿದ್ದರಾಮಯ್ಯ ಅವರು ಶಾಸಕರನ್ನು ನಡೆಸಿಕೊಳ್ಳುವ ರೀತಿನೋ ಗೊತ್ತಿಲ್ಲ.
ಒಟ್ಟಿನಲ್ಲಿ ಈ ಬೆಳವಣಿಗೆ ಅಂದರೆ ಒಬ್ಬ ಪಕ್ಷದ ಅಧ್ಯಕ್ಷರ ಮಾತಿಗೂ ಯಾವ ಶಾಸಕರು ಬೆಲೆ ಕೊಟ್ಟಿಲ್ಲದಿರುವುದನ್ನು ನೋಡಿದ್ರೆ, ಸಿದ್ದರಾಮಯ್ಯ ಇಲ್ಲದೇ ಕಾಂಗ್ರೆಸ್ ನಲ್ಲಿ ಏನು ನಡೆಯುವುದಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಹ ರಾಜ್ಯದಲ್ಲಿ ಯಾವುದೇ ಒಂದು ರಾಜಕೀಯ ಕಾರ್ಯ ಚಟುವಟಿಕೆಗಳನ್ನು ಮಾಡಬೇಕೆಂದರೂ ಸಿದ್ದರಾಮಯ್ಯ ಮುಂದಿಟ್ಟುಕೊಂಡು ಅವರ ಅಭಿಪ್ರಾಯಗಳನ್ನು ಕೇಳುತ್ತಾರೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರವನ್ನು ಸರಿಯಾದ ಹಾದಿಯತ್ತ ನಡೆಸಲು ಸಮನ್ವಯ ಸಮಿತಿಯ ಅಧ್ಯಕ್ಷರನ್ನಾಗಿ ಸಿದ್ದು ಅವರನ್ನು ನೇಮಿಸಿರುವುದನ್ನ ಇಲ್ಲಿ ಸ್ಮರಿಸಬಹುದು.