Saffron Flag remark ಗೋಲ್ವಾಲ್ಕರ್‌ ಅವರೇ ಈಶ್ವರಪ್ಪ ಕನಸಲ್ಲಿ ಬಂದು ಕೇಸರಿ ಧ್ವಜ ಹೇಳಿಕೆ ನೀಡಿರಬೇಕು, ಖರ್ಗೆ ತಿರುಗೇಟು!

By Kannadaprabha NewsFirst Published Feb 20, 2022, 5:00 AM IST
Highlights
  • ಧರಣಿ ನಿರತ ನಾಯಕರ ಭೇಟಿ ಮಾಡಿದ ಖರ್ಗೆ
  • ಈಶ್ವರಪ್ಪ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ
  • ಅಹೋರಾತ್ರಿ ಧರಣಿಗೆ ಸ್ಪೂರ್ತಿ ತುಂಬಿದ ಖರ್ಗೆ

ಬೆಂಗಳೂರು(ಫೆ.20): ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ(mallikarjun kharge) ಅವರು ಅಹೋರಾತ್ರಿ ಧರಣಿ(Overnight stir) ನಡೆಸುತ್ತಿರುವ ಕಾಂಗ್ರೆಸ್‌ ಶಾಸಕರನ್ನು ಶನಿವಾರ ವಿಧಾನಸೌಧದಲ್ಲಿ ಭೇಟಿಯಾಗಿ ಕೆಲ ಕಾಲ ಚರ್ಚೆ ನಡೆಸಿದರು.

ವಿಧಾನಸಭೆ(Karnataka assembly) ಮೊಗಸಾಲೆಯಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಧರಣಿ ನಿತರ ಎಲ್ಲ ಶಾಸಕರೊಂದಿಗೆ ಮಾತುಕತೆ ನಡೆಸಿದರು. ಬಳಿಕ ವಿಧಾನ ಪರಿಷತ್‌ ಮೊಗಸಾಲೆಯಲ್ಲಿ ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಪಕ್ಷದ ಇತರೆ ಸದಸ್ಯರನ್ನು ಭೇಟಿ ಮಾಡಿ ಅಹೋರಾತ್ರಿ ಧರಣಿಗೆ ಸ್ಪೂರ್ತಿ ತುಂಬಿದರು.

Latest Videos

Flag Row: ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ಪಟ್ಟು, ಫೆ. 21 ರವರೆಗೆ ಧರಣಿ ನಡೆಸಲು ತೀರ್ಮಾನ

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಅವರು ರಾಷ್ಟ್ರಧ್ವಜಕ್ಕೆ(National Flag) ಅಪಮಾನ ಮಾಡುವ ಹೇಳಿಕೆ ನೀಡಿರುವುದರಿಂದ ರಾಜ್ಯ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಜನ ಅವರ ಹೇಳಿಕೆ ಖಂಡಿಸಿ ಮಾತನಾಡುತ್ತಿದ್ದಾರೆ. ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಈ ರೀತಿ ಮಾತನಾಡುವುದು ಸರಿಯಲ್ಲ. ಅವರ ಮಾತು ಈಗಿರುವ ದೇಶದ ತ್ರಿವರ್ಣ ಧ್ವಜವನ್ನು ತೆಗೆಯುತ್ತೇವೆ ಎಂಬರ್ಥದ್ದಾಗಿದೆ. ಈ ಮಾತು ಹೊಸದಲ್ಲ. ಆರೆಸ್ಸೆಸ್‌ಗೆ ಇಪ್ಪತ್ತು ಮೂವತ್ತು ವರ್ಷ ಶಕ್ತಿ ಕೊಟ್ಟ ಗೋಲ್ವಾಲ್ಕರ್‌ ಗುರೂಜಿಯೇ ನಮ್ಮದು ಕೇಸರಿ ರಾಷ್ಟ್ರಧ್ವಜ ಆಗಬೇಕು ಎಂದು ಹೇಳಿದ್ದಾರೆ. ಬಹುಶಃ ಅವರೇ ಈಶ್ವರಪ್ಪ ಅವರ ಕನಸಲ್ಲಿ ಬಂದು ಈ ಹೇಳಿಕೆ ನೀಡಿರಬೇಕು ಎಂದರು.

ಈಶ್ವರಪ್ಪ ವಿರುದ್ಧ ಘೋಷಣೆ:
ಉಭಯ ಸದನಗಳು ಆರಂಭಗೊಂಡ ಕೂಡಲೇ ಕಾಂಗ್ರೆಸ್‌ ಸದಸ್ಯರು ಸದನದ ಬಾವಿಗಿಳಿದು ಧರಣಿ ಆರಂಭಿಸಿದರು. ಸ್ಪೀಕರ್‌ ಹಾಗೂ ಸಭಾಪತಿ ಪೀಠಗಳ ಮುಂಭಾಗ ನಿಂತು ಈಶ್ವರಪ್ಪ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪರಿಷತ್ತಿನಲ್ಲಿ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸುವ ಹಾಗೂ ರಾಷ್ಟ್ರದ್ರೋಹಿ ಎಂದು ಬಿಂಬಿಸುವ ಪ್ಲೇಕಾರ್ಡ್‌ಗಳನ್ನು ಪ್ರದರ್ಶಿಸಿದರು. ಇದಕ್ಕೆ ಪರಿಷತ್‌ನಲ್ಲಿ ಹಾಗೂ ಈಶ್ವರಪ್ಪ ಅವರ ಹರಕಲು ಬಾಯಿಗೆ ಬೀಗ ಹಾಕಿ ಎಂದು ಒತ್ತಾಯಿಸಿದ್ದಕ್ಕೆ ವಿಧಾನಸಭೆಯಲ್ಲಿ ಕೋಲಾಹಲಕರ ಸನ್ನಿವೇಶ ಸೃಷ್ಟಿಯಾಯಿತು.

Flag Row ರಾಷ್ಟ್ರಧ್ವಜ ಬದಲಿಸುವುದು ಕಾಂಗ್ರೆಸ್‌ ಅಜೆಂಡಾ, ಸಾಕ್ಷಿ ಕೊಟ್ಟ ಬಿಜೆಪಿ

ಈ ನಡುವೆಯೇ ಸ್ಪೀಕರ್‌ ಹಾಗೂ ಸಭಾಪತಿ ಅವರು ಪ್ರಶ್ನೋತ್ತರ ಮತ್ತು ವಿಧೇಯಕ ಮಂಡನೆಗೆ ಅವಕಾಶ ನೀಡುವ ಮೂಲಕ ಕಲಾಪ ನಡೆಸುವ ಪ್ರಯತ್ನ ನಡೆಸಿದರು. ಬಳಿಕ ಕಾಂಗ್ರೆಸ್‌ ಧೋರಣೆ ಟೀಕಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಿಜಾಬ್‌ ವಿವಾದ ಚರ್ಚಿಸಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗದೆ ಇಲ್ಲದ ವಿಷಯವನ್ನು ಇಟ್ಟುಕೊಂಡು ಅಮೂಲ್ಯವಾದ ಸದನದ ಸಮಯ ವ್ಯರ್ಥ ಮಾಡಲಾಗುತ್ತಿದೆ. ಇದು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದರು.

ದನಿಗೂಡಿಸಿದ ಕಾಗೇರಿ ಅವರು, ಇದನ್ನು ಸದನದ ಹೊರಗೆ ಇಟ್ಟುಕೊಳ್ಳಬೇಕು. ಪ್ರತಿಭಟನೆ ಮಾಡುವುದಾದರೆ ಸದನದ ಹೊರಗೆ ಹೋಗಿ ಪ್ರತಿಭಟನೆ ನಡೆಸಿ ಎಂದಿದ್ದು ಕೋಲಾಹಲ ಸೃಷ್ಟಿಸಿ ಮಾಜಿ ಸ್ಪೀಕರ್‌ ಕೆ.ಆರ್‌. ರಮೇಶ್‌ಕುಮಾರ್‌ ಅವರು, ನಮ್ಮನ್ನು ಅಮಾನತು ಮಾಡಿ ಎಂದು ಸವಾಲು ಹಾಕಿದರು. ಇದಕ್ಕೆ ಬೊಮ್ಮಾಯಿ ಆಕ್ಷೇಪ ವ್ಯಕ್ತಪಡಿಸಿ ನೀವು ಸ್ಪೀಕರ್‌ ಆಗಿದ್ದಾಗ ಎಷ್ಟುಮಂದಿಯನ್ನು ಅಮಾನತು ಮಾಡಿದ್ದಿರಿ. ಇಂತಹ ನಡವಳಿಕೆ ನಿಮ್ಮ ಅಜೆಂಡಾ ತೋರಿಸುತ್ತದೆ ಎಂದು ದೂರಿದ್ದರಿಂದ ವಾಗ್ವಾದ ತಾರಕಕ್ಕೇರಿ ಮಧ್ಯಾಹ್ನ 12.40ರ ವೇಳೆಗೆ ಸೋಮವಾರಕ್ಕೆ ಸದನವನ್ನು ಮುಂದೂಡಲಾಯಿತು.

click me!