
ಬೆಂಗಳೂರು, (ಮೇ.01): ಮದ್ಯ ಮಾರಾಟ 48 ದಿನಗಳಿಂದ ನಿಂತಿದ್ದು, ಈ ಮೂಲಕ ಅಮಲು ಮುಕ್ತ ಸಮಾಜದತ್ತ ಅರಿವಿಲ್ಲದೆ ದಾಪುಗಾಲಿಡುತ್ತಿದ್ದೇವೆ. ಇದೇ ಅವಕಾಶ ಬಳಸಿ ರಾಜ್ಯದಲ್ಲಿ ಪೂರ್ಣ ಪಾನ ನಿಷೇಧಿಸುವಂತೆ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲಾಕ್ಡೌನ್ ವಿಸ್ತರಣೆ: ಮದ್ಯ ಪ್ರಿಯರಿಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್
ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಮದ್ಯ ವ್ಯಸನದಿಂದ ಅಧಿಕಾರ ದುರುಪಯೋಗ, ಜಗಳ, ಅಶಾಂತಿ ಭ್ರಷ್ಟ ವ್ಯವಸ್ಥೆ ನಿರ್ಮಾಣಕ್ಕೆ ಕಾರಣವಾಗಿದೆ. ಹೀಗಾಗಿ ಮದ್ಯಪಾನ ನಿಷೇಧಿಸುವುದು ಇಂದಿನ ಅತ್ಯಂತ ಅವಶ್ಯಕತೆಯಾಗಿದೆ ಎಂದಿದ್ದಾರೆ.
ಶ್ರಮಜೀವಿಗಳು ಬಡವರು, ಜೀವನದ ಜಂಜಾಟದಿಂದ ತತ್ತರಿಸಿದವರ ಸುಖಕ್ಕಾಗಿ ಮದ್ಯಪಾನ ಬೇಕೇಬೇಕು ಎಂದು ವಾದಿಸುವವರಿದ್ದಾರೆ. ಮದ್ಯಪಾನ ಶ್ರಮ ಜೀವಿಗಳಿಗೆ ತಾತ್ಕಾಲಿಕ ಸಮಾಧಾನ ನೀಡಿದರೂ ಅವರ ಬಡತನ ಹೆಚ್ಚಿ ಮರಣಗಳು ಹೆಚ್ಚುತ್ತವೆ. ನಿರಂತರ ಮನೆಯಲ್ಲಿ ಸುಖ - ಶಾಂತಿ ಬದಲು , ದುಃಖ ಕಷ್ಟಗಳಿಗೆ ಭದ್ರ ಬುನಾದಿ ಹಾಕುತ್ತದೆ. ಮದ್ಯಪಾನದಿಂದ ಹೆಣ್ಣುಮಕ್ಕಳು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಮಕ್ಕಳು ತಮ್ಮ ಬಾಲ್ಯದ ಸುಖ ನೆಮ್ಮದಿಯಿಂದ ವಂಚಿತರಾಗುತ್ತಿದ್ದಾರೆ. ಮದ್ಯಪಾನ ಕುಟುಂಬಗಳನ್ನು ಒಡೆಯುತ್ತಿದೆ. ಸುಶಿಕ್ಷಿತ ವರ್ಗದಲ್ಲಿ ವಿವಾಹ ವಿಚ್ಛೇದನಗಳು ವಿಪರೀತ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದು ಅವರು ತಿಳಿಸಿದ್ದಾರೆ.
ಮದ್ಯಪಾನ ನಿಷೇದ ಅತ್ಯಂತ ಕಠಿಣವಾದರೂ ಇದು ಶ್ರೇಷ್ಠ ಕೆಲಸ. ಪ್ರಸಕ್ತ ಪ್ರಕೃತಿ ರೂಪಿಸಿರುವ ಪರಿಸ್ಥಿತಿಯ ಪ್ರಯೋಜನ ಪಡೆದು ಸಂತಸದ , ನೆಮ್ಮದಿಯ , ತೃಪ್ತಿಯ ಸಮಾಜ ನಿರ್ಮಾಣದತ್ತ ಹೆಜ್ಜೆಗಳನ್ನಿಡಲು ಮುಖ್ಯಮಂತ್ರಿಗಳು ದೃಢ ಸಂಕಲ್ಪರಾಗಬೇಕು. ಮದ್ಯಪಾನ ನಿಷೇಧಕ್ಕೆ ಸುಸಂಸ್ಕೃತ ಸಮಾಜ, ಅದಲ್ಲಿಯೂ ಮಹಿಳಾ ಸಂಘಟನೆಗಳು ಹೊರಾಡುತ್ತಿವೆ. ಇದನ್ನು ಗಮನದಲ್ಲಿರಿಸಿಕೊಂಡು ನಾಡಿನ ಅಭಿವೃದ್ಧಿ ಸೂಚ್ಯಂಕಕ್ಕಿಂತ ಸಮಾಜದ ಸಂತೋಷದ , ನೆಮ್ಮದಿಯ ಸೂಚ್ಯಂಕ ಹೆಚ್ಚುವಂತೆ ಮಾಡಲು ನಿರ್ಮಲ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಅವರು ಮನವಿ ಮಾಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.