ಸಿದ್ದು ಅಮೃತೋತ್ಸವದಿಂದ ಬಿಜೆಪಿಗರಿಗೆ ನಡುಕ: ಪರಂ

By Kannadaprabha NewsFirst Published Aug 4, 2022, 4:30 AM IST
Highlights

ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 15 ಲಕ್ಷ ಜನ ಸೇರಿದ್ದಾರೆ. ಕಾಂಗ್ರೆಸ್ಸಿನೊಂದಿಗೆ ನಾವಿದ್ದೇವೆಂಬ ಸಂದೇಶವನ್ನು ದಾವಣಗೆರೆ ಕಾರ್ಯಕ್ರಮದಲ್ಲಿ ಸೇರಿರುವ ಲಕ್ಷಾಂತರ ಜನರು ರವಾನಿಸಿದ್ದಾರೆ: ಪರಮೇಶ್ವರ

ದಾವಣಗೆರೆ(ಆ.04):  ನೋಂದಾಯಿತ ಗುತ್ತಿಗೆದಾರರ ಸಂಘವೇ ರಾಜ್ಯ ಬಿಜೆಪಿ ಸರ್ಕಾರದಲ್ಲಿ ಶೇ.40 ಕಮೀಷನ್‌ ದಂಧೆ ನಡೆಯುತ್ತಿರುವ ಬಗ್ಗೆ ದೂರು ನೀಡಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿಯವರು ಸಿದ್ದರಾಮಯ್ಯನವರ 5 ವರ್ಷದ ಅಧಿಕಾರಾವಧಿಯಲ್ಲಿ ಇಂತಹ ಒಂದೇ ಒಂದು ಭ್ರಷ್ಟಾಚಾರದ ನಿದರ್ಶನವಿದ್ದರೆ ಅದನ್ನು ತೆಗೆದು ಮುಂದೆ ಇಡಲಿ ನೋಡೋಣ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಸವಾಲು ಹಾಕಿದ್ದಾರೆ. ಬುಧವಾರ ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಸುಮಾರು 15 ಲಕ್ಷ ಜನ ಸೇರಿದ್ದಾರೆ. ಕಾಂಗ್ರೆಸ್ಸಿನೊಂದಿಗೆ ನಾವಿದ್ದೇವೆಂಬ ಸಂದೇಶವನ್ನು ದಾವಣಗೆರೆ ಕಾರ್ಯಕ್ರಮದಲ್ಲಿ ಸೇರಿರುವ ಲಕ್ಷಾಂತರ ಜನರು ರವಾನಿಸಿದ್ದಾರೆ. ಈ ಜನರನ್ನು, ಕಾರ್ಯಕ್ರಮವನ್ನು ನೋಡಿಯೇ ಬಿಜೆಪಿಗೆ ನಡುಕ ಶುರುವಾಗಿದೆ ಎಂದರು.

ಎಂಟು ವರ್ಷ ಕೆಪಿಸಿಸಿ ಅಧ್ಯಕ್ಷನಾಗಿದ್ದ ನನ್ನನ್ನು ಸಿದ್ದರಾಮಯ್ಯ ತಮ್ಮ ಸಹೋದರಂತೆ ಕಂಡು, ಕಾಂಗ್ರೆಸ್ಸನ್ನು ಅಧಿಕಾರಕ್ಕೆ ತರಲು ಮುಂದಾಗಿದ್ದನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ಸಂವಿಧಾನದ ಆಶಯಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿದ್ದು ಸಿದ್ದರಾಮಯ್ಯ. ರಾಜ್ಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ. ಕೆಲವರು ಮಾತ್ರ ಆಸ್ತಿ ಮಾಡಿಕೊಳ್ಳುತ್ತಿದ್ದಾರೆ. ಬಳ್ಳಾರಿಯ ಗಣಿ ಧಣಿಗಳು ಇದೇ ರೀತಿ ವಶಪಡಿಸಿಕೊಂಡಿದ್ದಾಗ, ಭ್ರಷ್ಟಾಚಾರದ ವಿರುದ್ಧ ಸದನದಲ್ಲೇ ತೊಡೆ ತಟ್ಟಿ, ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದವರು. ಇಡೀ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಬೀದಿಗಿಳಿದು ನಿರಂತರ ಹೋರಾಟ ನಡೆಸಿದ್ದವರು. ಈಗಲೂ ಭ್ರಷ್ಟಾಚಾರಿ ಬಿಜೆಪಿ ಸರ್ಕಾರದ ವಿರುದ್ಧ ಜನತೆ ಜಾಗೃತರಾಗಬೇಕು ಎಂದು ಕರೆ ನೀಡಿದರು.

Siddaramotsava: ಸೂತಕದ ಮನೆಯಲ್ಲಿ ಸಂಭ್ರಮ ಎಷ್ಟು ಸರಿ: ಸಿ.ಟಿ.ರವಿ ಪ್ರಶ್ನೆ

ತಮ್ಮ 5 ವರ್ಷದ ಅಧಿಕಾರಾವಧಿಯಲ್ಲಿ ಸಿದ್ದರಾಮಯ್ಯ 165 ಭರವಸೆಗಳನ್ನು ಕಾರ್ಯ ರೂಪಕ್ಕೆ ತರುವ ಮೂಲಕ ನುಡಿದಂತೆ ನಡೆದಿದ್ದಾರೆ. 68 ಸಾವಿರ ಕೋಟಿ ಅನುದಾನವನ್ನು 5 ವರ್ಷದಲ್ಲಿ ನೀರಾವರಿ ಯೋಜನೆಗಳಿಗೆ ಕೊಟ್ಟವರು. ಬಿಜೆಪಿ ಯಾವ ರೀತಿ ಅಧಿಕಾರಕ್ಕೆ ಬಂದಿದೆಯೆಂಬುದು ಎಲ್ಲರಿಗೂ ಗೊತ್ತಿದೆ. ಸಾಮಾನ್ಯ ಜನರು ಉಪಯೋಗಿಸುವ ಮಜ್ಜಿಗೆ, ಮೊಸರಿಗೂ ತೆರಿಗೆ ಹಾಕಿದ್ದು ಇತಿಹಾಸದಲ್ಲೇ ಇರಲಿಲ್ಲ. ಶ್ರೀರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಮಜ್ಜಿಗೆಗೂ ಶೇ.5 ತೆರಿಗೆ ಹಾಕಿದ್ದಾರೆ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಿಂದುಳಿದವರು, ಶೋಷಿತರು, ದಲಿತರು ಹೀಗೆ ಎಲ್ಲಾ ವರ್ಗದ ಜನರಿಗೆ ಸಮಾನತೆ, ಧ್ವನಿ ಇಲ್ಲದವರಿಗೆ ಧ್ವನಿ ನೀಡಲು 4 ದಶಕದಿಂದ ಶ್ರಮಿಸುತ್ತಿರುವ ನಾಯಕ ಸಿದ್ದರಾಮಯ್ಯ. ಸಿದ್ದರಾಮಯ್ಯ ಆಳ್ವಿಕೆಯ 5 ವರ್ಷದಲ್ಲಿ ಇಂತಹದ್ದು ಒಂದೇ ಒಂದು ಭ್ರಷ್ಟಾಚಾರದ ಬಗ್ಗೆ ನೀವು ಜನತೆ ಮುಂದೆ ತೆಗೆದು ಇಡಿ ನೋಡೋಣ ಎನ್ನುವ ಮೂಲಕ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
 

click me!