ಪೈಲಟ್ ಪರ ತೀರ್ಪು ಬಂದರೆ, ಕಾಂಗ್ರೆಸ್ ಬಳಿ ಪ್ಲಾನ್ ಬಿ ರೆಡಿ!

By Suvarna NewsFirst Published Jul 20, 2020, 12:06 PM IST
Highlights

ಪೈಲಟ್‌ ಪರ ಹೈಕೋರ್ಟ್‌ ತೀರ್ಪು ಬಂದರೆ, ಕಾಂಗ್ರೆಸ್‌ ಬಳಿ ಪ್ಲಾನ್‌ ಬಿ| ತಕ್ಷಣವೇ ವಿಧಾನಸಭೆ ಅಧಿವೇಶನಕ್ಕೆ ದಿನಾಂಕ ನಿಗದಿ| ಪಕ್ಷದ ಪರ ಮತ ಚಲಾಯಿಸಲು ಕಾಂಗ್ರೆಸ್‌ ಶಾಸಕರಿಗೆ ವಿಪ್‌| ವಿಪ್‌ ಉಲ್ಲಂಘಿಸಿದವರ ವಿರುದ್ಧ ಕ್ರಮಕ್ಕೆ ಕೈ ಪಕ್ಷ ಪ್ಲಾನ್‌

ಜೈಪುರ(ಜು.20):  ಕಾಂಗ್ರೆಸ್‌ ವಿರುದ್ಧವೇ ತೊಡೆ ತಟ್ಟಿದ ರಾಜಸ್ಥಾನ ಕಾಂಗ್ರೆಸ್‌ ಘಟಕದ ಪದಚ್ಯುತ ಅಧ್ಯಕ್ಷ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿತ 18 ಶಾಸಕರ ಪರವಾಗಿ ಹೈಕೋರ್ಟ್‌ ತೀರ್ಪು ಪ್ರಕಟವಾದರೆ, ಮುಂದೇನು ಮಾಡಬೇಕು ಎಂಬ ತಂತ್ರವನ್ನು ಕಾಂಗ್ರೆಸ್‌ ಹೆಣೆಯುತ್ತಿದೆ.

ಯುವ ಪಡೆ ಕೈಕೊಟ್ಟರೆ ನಷ್ಟವಿಲ್ಲ: ಸಿಂಧಿಯಾ, ಪೈಲಟ್‌ಗೆ ರಾಹುಲ್‌ ಟಾಂಗ್‌!

ಪಕ್ಷ ವಿರೋಧಿ ಆರೋಪದಲ್ಲಿ ಪೈಲಟ್‌ ಹಾಗೂ ಅವರ ಬೆಂಬಲಿತ 18 ಶಾಸಕರಿಗೆ ಕಾಂಗ್ರೆಸ್‌ ಅನರ್ಹತೆ ನೋಟಿಸ್‌ ನೀಡಿದೆ. ಇದರ ವಿರುದ್ಧ ಬಂಡಾಯ ಕಾಂಗ್ರೆಸ್‌ ನಾಯಕರು ರಾಜಸ್ಥಾನ ಹೈಕೋರ್ಟ್‌ ಮೊರೆ ಹೋಗಿದ್ದು, ಸೋಮವಾರ ವಿಚಾರಣೆಗೆ ಬರಲಿದೆ. ಒಂದು ವೇಳೆ ರೆಬಲ್‌ ಕಾಂಗ್ರೆಸ್ಸಿಗರ ಪರವಾಗಿ ಕೋರ್ಟ್‌ ತೀರ್ಪು ಬಂದರೆ, ತಕ್ಷಣವೇ ವಿಧಾನಸಭೆ ಅಧಿವೇಶನ ಕರೆಯಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಸಚಿನ್‌ ಪೈಲಟ್‌ ಬಣ ಶಾಸಕರು ಬೆಂಗಳೂರಿಗೆ ಶಿಫ್ಟ್‌?

ಪ್ಲ್ಯಾನ್‌ ಬಿ ಪ್ರಕಾರ ಮುಖ್ಯಮಂತ್ರಿ ಗೆಹ್ಲೋಟ್‌ ವಿಧಾನಸಭೆಯಲ್ಲಿ ತಮ್ಮ ಬಹುಮತ ಸಾಬೀತುಪಡಿಸಲಿದ್ದಾರೆ. ಅದಕ್ಕಾಗಿ ಕಾಂಗ್ರೆಸ್‌ನ ಮುಖ್ಯ ಸಚೇತಕರಾದ ಮಹೇಶ್‌ ಜೋಷಿ ಅವರು ತಮ್ಮೆಲ್ಲಾ ಶಾಸಕರಿಗೆ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ವಿಪ್‌ ಜಾರಿಗೊಳಿಸಲಿದ್ದಾರೆ. ಆಗ ಒಂದು ವೇಳೆ ಪೈಲಟ್‌ ಬಣ ಅಧಿವೇಶನದಿಂದ ದೂರ ಉಳಿದು ಅಥವಾ ಅಧಿವೇಶನದಲ್ಲಿ ಭಾಗಿಯಾಗಿ ಪಕ್ಷದ ಪರವಾಗಿ ಮತ ಚಲಾಯಿಸದೇ ತಟಸ್ಥವಾದರೆ, ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಮೇಲೆ ಪಕ್ಷಾಂತರ ನಿಷೇಧ ಕಾಯ್ದೆ 2(1)(ಬಿ) ಅಡಿ ಅನರ್ಹಗೊಳಿಸುವುದು ಕಾಂಗ್ರೆಸ್‌ನ ಯೋಚನೆಯಾಗಿದೆ. ಆದಾಗ್ಯೂ, ಇದರ ವಿರುದ್ಧವೂ ಅನರ್ಹ ಶಾಸಕರು ನ್ಯಾಯಾಲಯ ಮೊರೆ ಹೋಗುವುದು ಇದ್ದೇ ಇದೆ.

click me!