ಲೋಕಸಭಾ ಚುನಾವಣೆಗೂ ಮುನ್ನವೇ ರಾಜ್ಯ ಸರ್ಕಾರ ಪತನ: ನಳಿನ್‌ ಕಟೀಲ್‌ ಭವಿಷ್ಯ

By Kannadaprabha NewsFirst Published Nov 5, 2023, 8:03 AM IST
Highlights

ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಪತನವಾಗಲಿದೆ. ಅಲ್ಲದೆ, ಸಿಎಂ ಬದಲಾವಣೆ ಸಹ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಭವಿಷ್ಯ ನುಡಿದಿದ್ದಾರೆ. 

ಬಾಗಲಕೋಟೆ (ನ.05): ಲೋಕಸಭೆ ಚುನಾವಣೆಗೂ ಮುನ್ನ ರಾಜ್ಯ ಸರ್ಕಾರ ಪತನವಾಗಲಿದೆ. ಅಲ್ಲದೆ, ಸಿಎಂ ಬದಲಾವಣೆ ಸಹ ಫಿಕ್ಸ್ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ ಭವಿಷ್ಯ ನುಡಿದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್‌ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಪರೇಶನ್ ಕಮಲ ನಡೆಯಲ್ಲ. ಬದಲಾಗಿ ಆಪರೇಶನ್ ಹಸ್ತ ನಡೆಯುತ್ತಿದೆ. ಬರದ ನಡುವೆ ಕೈ ನಾಯಕರು ಕುರ್ಚಿಗಾಗಿ ಕಸರತ್ತು ನಡೆಸಿದ್ದಾರೆ. ನಾವೇನು ಸರ್ಕಾರ ಕೆಡವಲ್ಲ. ಅದು ತಾನಾಗಿಯೇ ಬೀಳಲಿದೆ ಎಂದರು. ಸರ್ಕಾರ ಬೀಳೋದನ್ನೇ ನಾವು ಕಾಯುತ್ತಿಲ್ಲ. ರಾಜ್ಯದ ಜನತೆಯ ಪರವಾಗಿ ನಮ್ಮ ಪಕ್ಷ ಇದೆ. 

ಅಧಿಕಾರಕ್ಕಾಗಿ ಜಗಳ ಇರುವುದು ಕಾಂಗ್ರೆಸ್‌ನಲ್ಲಿ. ಸರ್ಕಾರ ಪತನವಾದರೆ ಅದಕ್ಕೆ ಕಾಂಗ್ರೆಸ್ ಪಕ್ಷವೇ ಹೊಣೆಯಾಗಲಿದೆ. ಬರ ಕಾಮಗಾರಿಯನ್ನು ಸಂಪೂರ್ಣ ನಿರ್ಲಕ್ಷಿಸಿರುವ ಕಾಂಗ್ರೆಸ್‌ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ರೈತರ ಶಾಪದಿಂದಲೇ ಈ ಸರ್ಕಾರ ಬಿದ್ದು ಹೋಗಲಿದೆ ಎಂದು ಕಟೀಲ್ ತಿಳಿಸಿದರು. ವಿಪಕ್ಷ ನಾಯಕನ ಆಯ್ಕೆ ಏಕೆ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್, ಕಾದು ನೋಡೋಣ, ಹೇಗಾದರೂ ಮುಖ್ಯಮಂತ್ರಿ ಬದಲಾಗಲಿದ್ದಾರೆ. ಬದಲಾದ ಸನ್ನಿವೇಶದಲ್ಲಿ ಆ ಬಗ್ಗೆ ಯೋಚಿಸೋಣ ಎಂದು ನಸುನಕ್ಕರು. ಇದೇ ವೇಳೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಅವರ ಹೆಸರು ಕೇಳಿ ಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಕಟೀಲ್ ಪ್ರತಿಕ್ರಿಯೆ ನೀಡದೇ ಮೌನವಹಿಸಿದರು.

ಮೊದಲು ಎಸ್ಟಿಮೇಟ್ ರಿಪೋರ್ಟ್‌ ಕಳುಹಿಸಿ, ನಂತರ ಪರಿಹಾರ ಕೇಳಿ: ಬರ ಪರಿಹಾರಕ್ಕಾಗಿ ಕೈ ನಾಯಕರು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಕಟೀಲ್, ಬಿಎಸ್‌ವೈ ಇದ್ದಾಗ ನೆರೆಬಂತು. ತಕ್ಷಣ ಅವರು ಸಂತ್ರಸ್ತ ಕುಟುಂಬಗಳಿಗೆ ತಲಾ ₹25 ಸಾವಿರ ಪರಿಹಾರ ಕೊಟ್ಟಿದ್ದರು. ಮನೆ ಬಿದ್ದವರಿಗೆ ತಲಾ ₹5 ಲಕ್ಷ ಘೋಷಣೆ ಮಾಡಿದ್ದರು. ತುರ್ತಾಗಿ ಅವರೇ ನೆರೆಪೀಡಿತ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದರು. ಪರಿಸ್ಥಿತಿ ಅರಿತು ಒಳ್ಳೆಯ ಕಾರ್ಯ ಮಾಡಿದ್ದರು. 

ಕಾಂಗ್ರೆಸ್‌ ಸೇರುತ್ತೇನೆಂದು ಹೇಳೂ ಇಲ್ಲ, ಅರ್ಜಿ ಹಾಕಿಲ್ಲ: ಎಂ.ಪಿ.ರೇಣುಕಾಚಾರ್ಯ

ಅದೇ ರೀತಿ ಒಳ್ಳೆ ಹೃದಯ ಇರುವ ನಮ್ಮ ಪ್ರಧಾನಿ ಮೋದಿಜಿ ಕೂಡ ಈಗ ರಾಜ್ಯ ಸರ್ಕಾರದವರು ಕೇಳುವ ಮುಂಚೆಯೇ ಬರ ಸಮೀಕ್ಷಾ ತಂಡವನ್ನು ಅಧ್ಯಯನಕ್ಕೆ ಕಳುಹಿಸಿದ್ದಾರೆ. ಈಗ ರಾಜ್ಯ ಸರ್ಕಾರ ಎಸ್ಟಿಮೇಟ್ ರಿಪೋರ್ಟ್‌ ಕಳುಹಿಸಬೇಕಿದೆ. ಅದನ್ನು ಕಳುಹಿಸದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಅದನ್ನು ಕಳುಹಿಸಿದ ನಂತರ ಕೇಂದ್ರ ಸರ್ಕಾರ ಪರಿಹಾರ ಹಂಚಿಕೆಯ ಕುರಿತು ಕ್ರಮವಹಿಸುತ್ತದೆ. ಅದನ್ನು ಬಿಟ್ಟು, ನೇರವಾಗಿ ನಮಗೆ ₹10 ಸಾವಿರ ಕೋಟಿ ಕೊಡಿ, ₹20 ಸಾವಿರ ಕೋಟಿ ಕೊಡಿ ಎಂದರೆ ಕೊಡಲು ಸಾಧ್ಯವಿಲ್ಲ. ಇದನ್ನು ಅರಿತು ಕಾಂಗ್ರೆಸ್‌ ಮುಖಂಡರು ಮಾತನಾಡಬೇಕು ಎಂದು ಕಟೀಲ್ ವಾಗ್ದಾಳಿ ನಡೆಸಿದರು.

click me!