
ನರಗುಂದ (ಜೂ.09): ಪುಣ್ಯಕೋಟಿ ನಾಡಿನಲ್ಲಿ ಗ್ಯಾರಂಟಿ ಕಾರ್ಡ್ ಹಿಡಿದು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ತಾವು ನುಡಿದಂತೆ ಎಲ್ಲ ಗ್ಯಾರಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ಜಾರಿಗೆ ತರುವ ಮೂಲಕ ಜನರ ಆಶೋತ್ತರಗಳನ್ನು ಈಡೇರಿಸಬೇಕೆಂದು ಮಾಜಿ ಸಚಿವ, ಶಾಸಕ ಸಿ.ಸಿ.ಪಾಟೀಲ್ ಆಗ್ರಹಿಸಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ಸಚಿವರಲ್ಲಿಯೇ ಅಪಸ್ವರ ಇದೆ. ಷರತ್ತುಗಳನ್ನು ಹಾಕದೇ ಗ್ಯಾರಂಟಿ ಯೋಜನೆಗಳನ್ನು ನೀಡಬೇಕು. ಅತಿಯಾದ ಷರತ್ತುಗಳು, ಕಂಡಿಷನ್ ಹಾಕಿದರೆ ಯೋಜನೆಗಳಿಂದ ವಂಚಿತರಾದ ಜನರು ಸರ್ಕಾರದ ವಿರುದ್ಧ ದಂಗೆ ಎಳಬಹುದು ಎಂಬ ಎಚ್ಚರಿಕೆ ನೀಡಿದರು.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಷರತ್ತುಗಳಿಲ್ಲದೇ ತಮ್ಮ ಕಿಸೆಯಲ್ಲಿನ ಹಣ ತೆಗೆದುಕೊಟ್ಟಹಾಗೆ ನನಗೂ ಫ್ರೀ, ನಿನಗೂ ಫ್ರೀ ಎಂದು ಐದು ಯೋಜನೆಗಳನ್ನು ಗ್ಯಾರಂಟಿ ಕೊಡುತ್ತೇವೆಂದು ಹೇಳಿದ್ದರು. ಆದರೆ ಈಗ ಮೇಲಿಂದ ಮೇಲೆ ಷರತ್ತುಗಳನ್ನು ಹಾಕುತ್ತಾ ಮತ ನೀಡಿದ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಖಂಡಿಸಿದರು. ಮಾಜಿ ಸಚಿವ ಬಿ.ಆರ್.ಯಾವಗಲ್ಲ ವಿರುದ್ಧ 6 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿ 4 ಬಾರಿ ಗೆಲುವು ಕಂಡಿದ್ದೇನೆ. ಪ್ರಥಮ ಬಾರಿಗೆ ಜೆಡಿಎಸ್ ಅಭ್ಯರ್ಥಿಯಾಗಿ ಮತ್ತು 2013ರಲ್ಲಿ ಗುಂಡು ತಗುಲಿ ನಾನು ಆಸ್ಪತ್ರೆಯಲ್ಲಿದ್ದೆ. ಚುನಾವಣೆಯಲ್ಲಿ ನೇರವಾಗಿ ಭಾಗವಹಿಸಿರಲಿಲ್ಲ.
ರಾಜ್ಯದಲ್ಲಿ ವರ್ಗಾವಣೆಗೆ ಪ್ರತಿ ಹುದ್ದೆಗೂ ದರ ನಿಗದಿ: ಎಚ್.ಡಿ.ಕುಮಾರಸ್ವಾಮಿ ಕಿಡಿ
ಹೀಗೆ ಎರಡು ಬಾರಿ ನಾನು ಸೋಲನ್ನು ಕಂಡಿದ್ದೇನೆ. ಬಿ.ಆರ್. ಯಾವಗಲ್ಲ ಅವರಿಗೆ ನನ್ನ ವಿರುದ್ಧ ನೇರವಾಗಿ ಎದುರಿಸಿ ಗೆಲ್ಲೋಕೆ ಆಗಿಲ್ಲ. ಈ ಬಾರಿಯೂ ಸೋತಿದ್ದಾರೆ. ಅಂತಹವರು ನಾನು ಶಾಸಕನಾಗಿರುವ ಕ್ಷೇತ್ರದ ವಿವಿಧ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುವುದು ಅವರಿಗೆ ಗೌರವ ತಂದು ಕೊಡುವುದಿಲ್ಲ. ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಲು ತಾವ್ಯಾರು? ತಮಗೇನು ಹಕ್ಕಿದೆ? ತಾವೇನು ಸಂವಿಧಾನ ಬದ್ಧ ಶಾಸಕರಾಗಿದ್ದೀರಾ? ಎಂಬ ಪ್ರಶ್ನೆ ಹಾಕಿದರು.
ರೋಣ ತಾಲೂಕಿನ 33 ಹಳ್ಳಿಗಳು ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತವೆ. ಹಾಗಂದ ಮಾತ್ರಕ್ಕೆ ಅವುಗಳೇನೂ ರೋಣ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಂಬಂಧಿಸುವುದಿಲ್ಲ. ಜಿ.ಎಸ್. ಪಾಟೀಲ ಸರ್ಕಾರ ತಮ್ಮದಿದೆ ಎಂದುಕೊಂಡು ನರಗುಂದ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು. ಗೌರವಾನ್ವಿತ ರಾಜಕಾರಣ ಮಾಡಬೇಕು. ಮತಕ್ಷೇತ್ರದ ಬಗ್ಗೆ ಅಷ್ಟೊಂದು ಕಾಳಜಿ ಇರುವ ಯಾವಗಲ್ಲ ತಮ್ಮದೇ ಕಾಂಗ್ರೆಸ್ ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಬೇಕೆಂದು ಹೇಳಿದರು.
ಬಿಜೆಪಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ: ಅಭಿಪ್ರಾಯ ಕೇಳಿದ ಅರುಣ್ಸಿಂಗ್
ಈ ವೇಳೆ ಅಜ್ಜನಗೌಡ ಪಾಟೀಲ, ಶಿವನಗೌಡ ಕರಿಗೌಡ್ರ, ಚಂಬಣ್ಣ ವಾಳದ, ಸಂಭಾಜಿ ಕಾಶೀದ, ಬಿ.ಬಿ. ಐನಾಪುರ, ಉಮೇಶಗೌಡ ಪಾಟೀಲ, ಚಂದ್ರು ದಂಡಿನ, ಮಹೇಶ ಹಟ್ಟಿ, ಪ್ರಕಾಶ ಪಟ್ಟಣಶೆಟ್ಟಿ, ಮಂಜುನಾಥ ಮೆಣಸಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.