ಎನ್‌ಡಿಎನಲ್ಲಿರುವ ಎಚ್‌ಡಿಕೆ ಬರ ಪರಿಹಾರಕ್ಕೆ ಒತ್ತಾಯಿಸಲಿ: ಸಿಎಂ ಸಿದ್ದರಾಮಯ್ಯ

By Kannadaprabha NewsFirst Published Nov 8, 2023, 9:23 PM IST
Highlights

ಬರ ಪರಿಹಾರ ನೀಡಿಲ್ಲವೆಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಅವರೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಹಾಸನ (ನ.08): ಬರ ಪರಿಹಾರ ನೀಡಿಲ್ಲವೆಂದು ಟೀಕಿಸುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೇ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿದ್ದಾರೆ. ಕೂಡಲೇ ಹಣ ಬಿಡುಗಡೆ ಮಾಡುವಂತೆ ಅವರೇ ಕೇಂದ್ರ ಸರ್ಕಾರವನ್ನು ಒತ್ತಾಯಿಸಬಹುದಲ್ಲಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಹಾಸನಾಂಬ ದೇವಿಯ ದರ್ಶನ ಪಡೆದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದರು.

ಈ ವರ್ಷ ಭೀಕರವಾದ ಬರಗಲಾವಿದೆ. ೨೧೬ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಇನ್ನೂ ಆರೇಳು ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡುತ್ತೇವೆ. ಇಡೀ ರಾಜ್ಯದಲ್ಲಿ ಸಂಪೂರ್ಣ ಬರಗಾಲವಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ತಂಡ ಕಳುಹಿಸಿತ್ತು. ನಾಲ್ಕು ತಂಡಗಳು ರಾಜ್ಯ ಪ್ರವಾಸ ಮಾಡಿ ಅಧಿಕಾರಿಗಳು, ಜನರಿಂದ ಮಾಹಿತಿ ಸಂಗ್ರಹ ಮಾಡಿದ್ದಾರೆ. ಈಗಾಗಲೇ ತಂಡ ಭೇಟಿ ಕೊಟ್ಟು ಇಪ್ಪತ್ತು ದಿನ ಆಗುತ್ತಾ ಬಂದಿದೆ. ವರದಿ ಕೊಟ್ಟಿದ್ದಾರೋ ಇಲ್ಲವೋ ಗೊತ್ತಿಲ್ಲ. ಎನ್‌ಡಿಆರ್‌ಎಫ್ ನಿಯಮಾವಳಿ ಪ್ರಕಾರವಾದರೂ ಪರಿಹಾರ ಬಿಡುಗಡೆ ಮಾಡಲಿ ಎಂದು ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದು ಹೇಳಿದರು.

‘ರಾಜ್ಯಕ್ಕೆ ೧೭,೯೦೧ ಕೋಟಿ ರು. ಹಣ ಬಿಡುಗಡೆ ಮಾಡಲು ಕೋರಿದ್ದೇವೆ. ರಾಜ್ಯದಲ್ಲಿ ೩೩,೭೨೭ ಕೋಟಿ ರು. ನಷ್ಟವಾಗಿದೆ. ಆಗಿರುವ ಎಲ್ಲಾ ನಷ್ಟಕ್ಕೂ ಕೇಂದ್ರ ಸರ್ಕಾರ ಹಣ ಕೊಡಲಾಗುವುದಿಲ್ಲ ಎನ್ನುವುದು ನಮಗೂ ಗೊತ್ತಿದೆ. ಕೇಂದ್ರ ಸರ್ಕಾರಕ್ಕೆ ನಾಲ್ಕು ಲಕ್ಷ ಕೋಟಿ ರು. ತೆರಿಗೆ ರೂಪದಲ್ಲಿ ಕೊಡುತ್ತೇವೆ. ನಮಗೆ ಅವರು ಕೊಡುವುದು ಕೇವಲ ೫೭ ಸಾವಿರ ಕೋಟಿ ರು. ನಾವು ನಮ್ಮ ಹಣ ಕೇಳುತ್ತಿದ್ದೇವೆ. ಇದು ಎಲ್ಲಾ ಕಾಲದಲ್ಲಿಯೂ ನಡೆಯುತ್ತಾ ಬಂದಿದೆ. ಆದರೆ ಕೇಂದ್ರ ಸರ್ಕಾರದವರು ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರಗಳಿಂದ ರಾಜ್ಯ ಸಾಲದ ಸುಳಿಗೆ: ಸಚಿವ ರಾಮಲಿಂಗಾರೆಡ್ಡಿ

‘ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರವನ್ನು ಒತ್ತಾಯಿಸಲು ರಾಜ್ಯದ ಮೂವರು ಸಚಿವರನ್ನು ಕಳುಹಿಸಿದರೂ ಯಾವ ಕೇಂದ್ರ ಮಂತ್ರಿಯೂ ಸಮಯ ಕೊಡಲಿಲ್ಲ. ಅವರು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಬಂದಿದ್ದಾರೆ. ನಾವು ಏನು ಮಾಡಬೇಕು ಹೇಳಿ? ಈ ನಿರ್ಲಕ್ಷ್ಯವನ್ನು ಏನೆಂದು ವ್ಯಾಖ್ಯಾನ ಮಾಡಬೇಕು, ವಿರೋಧ ಪಕ್ಷದವರು ಜಗಳ ಮಾಡಬೇಡಿ ಅಂತಾರೆ. ಎನ್‌ಡಿಎ ಜೊತೆ ಕುಮಾರಸ್ವಾಮಿ ಸೇರಿಸಿಕೊಂಡಿದ್ದಾರಲ್ಲಾ. ಅವರೇ ಹೇಳಿ ಹಣ ಬಿಡುಗಡೆ ಮಾಡಿ ಅಂತ ಕೇಳಲಿ’ ಎಂದರು.

click me!