
ಹಾವೇರಿ, (ಫೆ.12): ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ. ನಿಮ್ಮ ಮಗನನ್ನು ಒಂದು ಉನ್ನತ ಕಾರ್ಯಕ್ಕಾಗಿ ಕಳಿಸಿದ್ದೀರಿ ಅಂತ ತಿಳಿದುಕೊಳ್ಳಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬೊಮ್ಮಾಯಿ (Basavaraj Bommai) ಅವರು ಸ್ವಕ್ಷೇತ್ರ ಶಿಗ್ಗಾವಿ ಕ್ಷೇತ್ರದ ಜನತೆಗೆ ಹೇಳಿದ್ದಾರೆ.
ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಇಂದು(ಶನಿವಾರ) ಮಾತನಾಡಿದ ಬಸವರಾಜ ಬೊಮ್ಮಾಯಿ, ನಿಮ್ಮ ಮಗನನ್ನು ಒಂದು ಉನ್ನತ ಕಾರ್ಯಕ್ಕಾಗಿ ಕಳಿಸಿದ್ದೀರಿ ಅಂತ ತಿಳಿದುಕೊಳ್ಳಿ. ಮಿಲಿಟರಿಗೆ ದೇಶ ಕಾಯೋಕೆ ಹೇಗೆ ಮಗನನ್ನು ಕಳಿಸ್ತೀರಿ ಹಾಗೆ ತಿಳಿದುಕೊಳ್ಳಿ. ಮನೆಯ ಮಗ ದೇಶ ಸೇವೆಗೆ ಕಳಿಸು ಹಾಗೆ ನನ್ನನ್ನು ಕಳಿಸಿದ್ದೀನಿ ಅಂದುಕೊಳ್ಳಿ. ನಾಡು ಕಟ್ಟೋಕೆ ನಿಮ್ಮ ಮನೆ ಮಗನನ್ನು ಕಳಿಸಿದ್ದೀವಿ ಅಂತ ತಿಳಿದುಕೊಳ್ಳಿ ಎಂದು ಶಿಗ್ಗಾವಿ ಕ್ಷೇತ್ರದ ಜನತೆಗೆ ಮನವಿ ಮಾಡಿದರು.
Basavaraj bommai Speech: ಸಿಎಂ ಭಾವನಾತ್ಮಕ ಭಾಷಣ, ರಾಜೀನಾಮೆ ಅಂತೆ-ಕಂತೆಗಳಿಗೆ ಪೂರಕವಾಯ್ತಾ?
ಸರ್ಕಾರದ ಹೃದಯ ಮಿಡಿತ ರೈತರ ಮೇಲಿದೆ, ದುಡಿಯುವ ವರ್ಗದ ಮೇಲಿದೆ. ದೇವರು ಎಲ್ಲಿದ್ದಾನೆ ಅಂದರೆ ರೈತರ ಶ್ರಮದಲ್ಲಿ, ರೈತನ ಬೆವರಿನಲ್ಲಿದ್ದಾನೆ. ಕುಡಿಯುವ ನೀರಿಗೆ ಈ ವರ್ಷ 7000 ಕೋಟಿ ರೂ ಕೊಟ್ಟು ಜಲ ಜೀವನ ಯೋಜನೆ ಕೊಡ್ತಾ ಇದ್ದೇವೆ. ಶಿಗ್ಗಾವಿ ಕ್ಷೇತ್ರದ ಪ್ರತಿ ಹಳ್ಳಿಗೆ ಹಾಗೂ ಹಾನಗಲ್ ಸೇರಿದಂತೆ 230 ಕ್ಕಿಂತ ಹೆಚ್ಚು ಹಳ್ಳಿಗಳಿಗೆ ತುಂಗಬದ್ರಾ ನದಿ ನೀರು ನಲ್ಲಿಗಳ ಮೂಲಕ ಪ್ರತಿ ಮನೆಗೆ ಕೊಡುತ್ತೇವೆ ಎಂದರು.
ಏನ್ ಸರ್ ತವರಿಗೆ ಹೊರಟಿದಿರಾ ಅಂತ ಬೆಳಿಗ್ಗೆ ಬೆಂಗಳೂರಿನಲ್ಲಿ ಪಪ್ರಕರ್ತರು ಕೇಳಿದ್ರು. ಇದು ನನ್ನ ತವರು ಮನೆ.. ನರೇಂದ್ರ ಮೋದಿ,ಅಮಿತ್ ಶಾ ಅವರ ದೂರದೃಷ್ಟಿ, ನಿಮ್ಮೆಲ್ಲರ ಆಶೀರ್ವಾದ ನಾನು ಸಿಎಂ ಆಗಿದ್ದೇನೆ ಎಂದು ಹೇಳಿದರು.
ನನ್ನನ್ನು ಹೃದಯದಲ್ಲಿ ಇಟ್ಟುಕೊಂಡಿದ್ದೀರಿ. ನಿಮ್ಮ ವಿಶ್ವಾಸಕ್ಕೆ ನ್ಯಾಯ ಕೊಡುವ ಕೆಲಸ ಮಾಡುವೆ. ಆದರೆ ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರುವ ಕೆಲಸ ಮಾಡುವುದಿಲ್ಲ ಎಂದು ಭರವಸೆ ನೀಡಿದರು.
ಬಹಳ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇದೆ. ರಾಜ್ಯದ ಸಮಗ್ರ ಆಗುಹೋಗು ನೋಡಬೇಕಿದೆ. ದಿನಕ್ಕೆ 15 ತಾಸು ಕೆಲಸ ಮಾಡಬೇಕಾಗುತ್ತದೆ. ದಿನಕ್ಕೆ 15 ತಾಸು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.
ಕೋವಿಡ್ ಸಂಕಷ್ಟ ನಮ್ಮ ಕರ್ನಾಟಕದಲ್ಲೂ ಆಗಿದೆ. ಸಂಪನ್ಮೂಲ ಕ್ರೂಡಿಕರಿಸಿ ಯಾವುದೇ ಯೋಜನೆಗಳಿಗೆ ಹಣದ ಕೊರತೆ ಆಗದಂತೆ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಬಜೆಟ್ ಪೂರ್ವ ಅನೇಕ ಕಾರ್ಯಕ್ರಮ ನೀಡಿದ್ದೇನೆ . ರೈತರ ಮಕ್ಕಳಿಗೆ ಪ್ರೋತ್ಸಾಹ ಧನ, ಗ್ರಾಮೀಣ ಪ್ರದೇಶದ ರೈತ ವಿದ್ಯಾನಿಧಿ ಹಣ ಕೊಡ್ತಿದ್ದೇವೆ. ನಿರಂತರ ಮಳೆಯಿಂದ ರೈತರ ಫಸಲು ಹಾಳಾಗಿತ್ತು. ಒಂದು ಹೆಕ್ಟೇರ್ ಗೆ 13000 ರೂ ಪರಿಹಾರ ಕೊಡ್ತಾ ಇದ್ದೇವೆ. ಮುಂದಿನ ತಿಂಗಳು ಬಜೆಟ್ ಮಂಡಿಸಲಿದ್ದೇನೆ ಎಂದು ಭಾವನಾತ್ಮಕವಾಗಿ ನುಡಿದರು.
ಇನ್ನು ಹಿಜಾಬ್ ವಿಚಾರದ ಹಿಂದೆ ಕೆಲವು ಸಂಘಟನೆಗಳ ಕೈವಾಡ ಇದೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಏಜೆನ್ಸಿಯವರು ಆ ಕೆಲಸವನ್ನ ನೋಡ್ಕೋತಾರೆ. ಎಲ್ಲ ಕಡೆ ಶಾಂತಿ ನೆಲೆಸಬೇಕು. ಶಾಲೆ ಕಾಲೇಜುಗಳಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದರು.
ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ನಾವು ಜಾರಿ ಮಾಡಬೇಕು. ಎಲ್ಲ ಮಕ್ಕಳು ಯಾವುದೇ ಬೇಧ ಭಾವವಿಲ್ಲದೆ ಒಮ್ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡಬೇಕು. ಇದು ನನ್ನ ಮೊದಲನೆ ಕರ್ತವ್ಯ. ಆ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಬಜೆಟ್ ಪ್ರಕ್ರಿಯೆ ಆರಂಭ ಮಾಡಿದ್ದು, ಎಲ್ಲ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದೇನೆ. ಕೇಂದ್ರ ಸರಕಾರದ ಯೋಜನೆಗಳ ಜೊತೆಗೆ ರಾಜ್ಯ ಸರಕಾರದ ಯೋಜನೆಗಳನ್ನ ಜೋಡಿಸಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡುತ್ತೇನೆ ಎಂದು ತಿಳಿಸಿದರು.
ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಸಿದ್ದರಾಮಯ್ಯ ನವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರ ಕಾಲದಲ್ಲಿ ಹೆಚ್ಚು ಸಾಲ ಇತ್ತು. ಯಾವುದೇ ವಿಪತ್ತುಗಳು ಹಾಗೂ ಕೋವೀಡ್ ಇಲ್ಲದ ಸಮಯದಲ್ಲೂ ಹೆಚ್ಚು ಸಾಲ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಟಾಗ್ ಕೊಟ್ಟರು.
ಈ ಹಿಂದಿನ ಎಲ್ಲಾ ಸಾಲಗಳನ್ನು ನಿಭಾಯಿಸಿ ಕೋವೀಡ್ ಹಿನ್ನಲೆಯಲ್ಲೂ ಈಗ ಆರ್ಥಿಕತೆ ಸ್ವಲ್ಪ ಚೇತರಿಕೆಯಾಗುತ್ತಿದೆ. ನಮ್ಮ ಸಂಪನ್ಮೂಲ ಕ್ರೋಡಿಕರಿಸಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.