‘ಮೋದಿ ಚೋರ್‌ ಹೈ’ ಎಂದ ಆನಂದ್‌ಗೇಕೆ ಟಿಕೆಟ್‌?: ಬಿಜೆಪಿಯಲ್ಲಿ ಗದ್ದಲ

By Web DeskFirst Published Nov 16, 2019, 8:35 AM IST
Highlights

‘ಮೋದಿ ಚೋರ್‌ ಹೈ’ ಎಂದ ಆನಂದ್‌ಗೆ ಟಿಕೆಟ್‌ ಏಕೆ?| ಹೊಸಪೇಟೆ ಬಿಜೆಪಿ ಸಭೆಯಲ್ಲಿ ಆಕ್ರೋಶ| ಗದ್ದಲ ಹೆಚ್ಚಾದ್ದರಿಂದ ಸಭೆಯಿಂದ ಹೊರ ನಡೆದ ರವಿಕುಮಾರ್‌, ದೇವೇಂದ್ರಪ್ಪ

ಹೊಸಪೇಟೆ[ನ.16]: ಮಾಜಿ ಸಚಿವ ಆನಂದ ಸಿಂಗ್‌ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಉಪ ಚುನಾವಣೆಯಲ್ಲಿ ಟಿಕೆಟ್‌ ನೀಡಿದ ಹಿನ್ನೆಲೆಯಲ್ಲಿ ಸ್ಥಳೀಯ ಬಿಜೆಪಿಯ ಕೆಲ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಗದ್ದಲ ನಡೆಸಿದ ಘಟನೆ ಹೊಸಪೇಟೆಯ ಪಕ್ಷದ ಕಚೇರಿಯಲ್ಲಿ ಶುಕ್ರವಾರ ನಡೆಯಿತು.

ಉಪ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಜಯನಗರ (ಹೊಸಪೇಟೆ) ವಿಧಾನಸಭಾ ಕ್ಷೇತ್ರದ ಉಸ್ತುವಾರಿ ರವಿಕುಮಾರ್‌ ಹಾಗೂ ಸಂಸದ ದೇವೇಂದ್ರಪ್ಪ ಸೇರಿ ಜಿಲ್ಲಾ ಮುಖಂಡರ ಸಮ್ಮುಖದಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶ ಹೊರ ಹಾಕಿದರು.

ಬಳ್ಳಾರಿ: ಆನಂದ್ ಸಿಂಗ್ ಇನ್, ಶ್ರೀರಾಮುಲು ಔಟ್, ಏನಿದು ಬಿಜೆಪಿ ಲೆಕ್ಕಾಚಾರ?

ಸಭೆ ಅಧ್ಯಕ್ಷತೆ ವಹಿಸಿ ರವಿಕುಮಾರ್‌ ಮಾತನಾಡಲು ಆರಂಭಿಸುತ್ತಿದ್ದಂತೆ ಆನಂದ್‌ ಸಿಂಗ್‌ ಅವರ ಬಿಜೆಪಿ ಸೇರ್ಪಡೆ ವಿರುದ್ಧ ಕೆಲ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ಕೋಮವಾದಿ ಬಿಜೆಪಿ’, ‘ಮೋದಿ ಚೋರ್‌ ಹೈ’ ಎಂದು ಹೇಳಿಕೆ ನೀಡಿದ್ದ ಆನಂದ ಸಿಂಗ್‌ಗೆ ಯಾವ ಸಿದ್ಧಾಂತದ ಆಧಾರದ ಮೇಲೆ ನೀವು ಟಿಕೆಟ್‌ ನೀಡಿದ್ದೀರಿ? ಅನೇಕ ವರ್ಷಗಳಿಂದ ಪಕ್ಷದ ತತ್ವ-ಸಿದ್ಧಾಂತಕ್ಕೆ ಅಂಟಿಕೊಂಡು ತಳಮಟ್ಟದಿಂದ ಕೆಲಸ ಮಾಡಿದ ಕಾರ್ಯಕರ್ತರನ್ನು ಪಕ್ಷ ಕಡೆಗಣಿಸಿರುವುದು ಸರಿಯಲ್ಲ ಎಂದು ಹರಿಹಾಯ್ದರು.

ಈ ಸಭೆಯಲ್ಲಿ ಆನಂದ ಸಿಂಗ್‌ ಆವರಾಗಲೀ, ಅವರ ಬೆಂಬಲಿಗರಾಗಲೀ ಉಪಸ್ಥಿತರಿರಲಿಲ್ಲ. ಕಾರ್ಯಕರ್ತರ ಗದ್ದಲ, ಗಲಾಟೆ ಜೋರಾಗುತ್ತಿದ್ದಂತೆ ಉಸ್ತುವಾರಿ ರವಿಕುಮಾರ್‌, ಸಂಸದ ವೈ. ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ ಇತರರು ಸಭೆಯಿಂದ ಹೊರ ನಡೆದರು.

ನಾನು ಅಭಿವೃದ್ಧಿಯ ಕನಸಿಟ್ಟುಕೊಂಡು ರಾಜಕೀಯಕ್ಕೆ ಬಂದವನು ಎಂದ ಅನರ್ಹ ಶಾಸಕ

ನಂತರ ಮಾತನಾಡಿದ ರವಿಕುಮಾರ್‌ ಅವರು, ಆನಂದಸಿಂಗ್‌ ಹಾಗೂ ಸ್ಥಳೀಯ ಕಾರ್ಯಕರ್ತರ ನಡುವೆ ಅಸಮಾಧಾನವಿದೆ. ಸಿಂಗ್‌ ಪಕ್ಷಕ್ಕೆ ಬಂದರೆ ಸ್ಥಳೀಯ ಮೂಲ ಕಾರ್ಯಕರ್ತರನ್ನು ಕಡೆಗಣಿಸುತ್ತಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಿ, ಅಸಮಾಧಾನ ದೂರ ಮಾಡಿ ಎಲ್ಲವನ್ನು ಸರಿ ಮಾಡಲಾಗುವುದು. ಶನಿವಾರ ಮತ್ತೊಮ್ಮೆ ಕಾರ್ಯಕರ್ತರ ಸಭೆ ನಡೆಸಿ ಕಾರ್ಯಕರ್ತರ ಮನವೊಲಿಸಲಾಗುವುದು. ಎಲ್ಲವೂ ಸರಿಹೋಗುತ್ತದೆ ಎಂಬ ವಿಶ್ವಾಸವಿದೆ. ಸೋಮವಾರ ಸರಳ ರೀತಿಯಲ್ಲಿ ಆನಂದಸಿಂಗ್‌ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

ವಿಜಯನಗರ ಸ್ಥಾಪನೆಗೆ ಕಾಲ ಹತ್ತಿರ, ಬಳ್ಳಾರಿ ಇಬ್ಭಾಗಕ್ಕೆ ಸಿಎಂ ಒಪ್ಪಿಗೆ?

click me!