ಚಲವಾದಿ ಸಮುದಾಯಕ್ಕೆ ಬಿಜೆಪಿ ಟಿಕೆಟ್‌ ಕಡೆಗಣನೆ: ಕಮಲ ನಾಯಕರ ವಿರುದ್ಧ ಆಕ್ರೋಶ

By Kannadaprabha NewsFirst Published Oct 23, 2022, 7:30 PM IST
Highlights

ಬಿಜೆಪಿ 5 ಸ್ಥಾನಗಳಲ್ಲಿ ಒಂದೂ ಸ್ಥಾನ ಪರಿಶಿಷ್ಟಜಾತಿ ಸಮುದಾಯಕ್ಕೆ ನೀಡಿಲ್ಲ. ಬಿಜೆಪಿ ಪರಿಶಿಷ್ಟಜಾತಿ ಸಮುದಾಯಕ್ಕೆ ಭಾರಿ ಅವಮಾನ ಮಾಡಿದೆ ಎಂದ ಚಂದ್ರಶೇಖರ ಕೊಡಬಾಗಿ 

ವಿಜಯಪುರ(ಅ.23):  ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಟಿಕೆಟ್‌ ಹಂಚಿಕೆಯಲ್ಲಿ ಬಿಜೆಪಿ ಪರಿಶಿಷ್ಟಜಾತಿ ಬಲಗೈ ಸಮುದಾಯಕ್ಕೆ ಮಲತಾಯಿ ಧೋರಣೆ ಅನುಸರಿಸಿದೆ ಎಂದು ಚಲವಾದಿ ಮಹಾಸಭಾದ ಜಿಲ್ಲಾ ಅಧ್ಯಕ್ಷ , ನ್ಯಾಯವಾದಿ ಸುನೀಲ ಉಕ್ಕಲಿ, ಹಿರಿಯ ಮುಖಂಡ ಚಂದ್ರಶೇಖರ ಕೊಡಬಾಗಿ ಆರೋಪಿಸಿದರು.

ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 35 ವಾರ್ಡ್‌ಗಳ ಪೈಕಿ 5 ವಾರ್ಡ್‌ಗಳು ಪರಿಶಿಷ್ಟಜಾತಿಗೆ ಮೀಸಲಾಗಿವೆ. ಬೇರೆ ಪಕ್ಷಗಳು ಪರಿಶಿಷ್ಟಜಾತಿಗೆ ಆದ್ಯತೆ ನೀಡಿವೆ. ಆದರೆ, ಬಿಜೆಪಿ 5 ಸ್ಥಾನಗಳಲ್ಲಿ ಒಂದೂ ಸ್ಥಾನ ಪರಿಶಿಷ್ಟಜಾತಿ ಸಮುದಾಯಕ್ಕೆ ನೀಡಿಲ್ಲ. ಬಿಜೆಪಿ ಪರಿಶಿಷ್ಟಜಾತಿ ಸಮುದಾಯಕ್ಕೆ ಭಾರಿ ಅವಮಾನ ಮಾಡಿದೆ ಎಂದರು.

ವಿಜಯಪುರ ಪಾಲಿಕೆ ಚುನಾವಣೆ, ಬಂಡಾಯವೆದ್ದ 14 ಶಾಸಕರಿಗೆ ಬಿಜೆಪಿ ಕೋಕ್

ಪರಿಶಿಷ್ಟಜಾತಿಗೆ ಸೇರಿದ ಸಂಸದ ರಮೇಶ ಜಿಗಜಿಣಗಿ, ಕುಡಚಿ ಶಾಸಕ ಪಿ.ರಾಜೀವ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್‌.ಎಸ್‌. ಪಾಟೀಲ ಕೂಚಬಾಳ ಅವರು ಟಿಕೆಟ್‌ ಹಂಚಿಕೆ ಸಮಿತಿಯಲ್ಲಿ ಸದಸ್ಯರಾಗಿದ್ದರೂ ಪರಿಶಿಷ್ಟಜಾತಿಗೆ ಸೇರಿದ ಚಲವಾದಿ ಸಮುದಾಯಕ್ಕೆ ಟಿಕೆಟ್‌ ನೀಡದೆ ಭಾರಿ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಪರಿಶಿಷ್ಟಜಾತಿಗೆ ಸೇರಿದ ಚಲವಾದಿ ಸಮುದಾಯದ ನಾಯಕರು, ಮುಖಂಡರು ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಹಿರಿಯರು ಮತ್ತು ಕಿರಿಯರು ಅನೇಕ ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಸುಮಾರು 5 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿದ ಪರಿಶಿಷ್ಟರಿಗೆ ಪಾಲಿಕೆ ಚುನಾವಣೆæಯಲ್ಲಿ ಟಿಕೆಟ್‌ ನೀಡದೆ ಸಾಮಾಜಿಕ ನ್ಯಾಯ ಒದಗಿಸಿ ಕೊಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಟೀಕಿಸಿದರು.

ಪರಿಶಿಷ್ಟಜಾತಿಯ ಚಲವಾದಿ ಸಮುದಾಯಕ್ಕೆ ಬಿಜೆಪಿ ಮಲತಾಯಿ ಧೋರಣೆ ಅಸುಸರಿಸಿದೆ. ಬಿಜೆಪಿ ಈ ನಡೆಯನ್ನು ಪರಿಶಿಷ್ಟಜಾತಿಗೆ ಸೇರಿದ ಚಲವಾದಿ ಮಹಾಸಭಾ ಗಂಭೀರವಾಗಿ ಪರಿಗಣಿಸುತ್ತದೆ ಎಂದರು. ಗೋಷ್ಠಿಯಲ್ಲಿ ಜಿಲ್ಲಾ ಚಲವಾದಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಶಶಿಕಾಂತ ಹೊನವಾಡಕರ, ಗೋಪಾಲ ಅಥರ್ಗಾ, ಪ್ರದೀಪ ಕ್ಯಾತನ, ವೈ.ಎಚ್‌. ವಿಜಯಕರ ಮತ್ತಿತರರು ಇದ್ದರು.
 

click me!