'ಧರಂ ಸಿಂಗ್ ಅವಧಿಯಲ್ಲಿ ಬಿಎಸ್‌ವೈ ಕಾಂಗ್ರೆಸ್‌ ಸೇರಲು ಯತ್ನಿಸಿದ್ದರು!'

By Kannadaprabha NewsFirst Published Jan 24, 2020, 8:44 AM IST
Highlights

ಬಿಎಸ್‌ವೈ ಕಾಂಗ್ರೆಸ್‌ ಸೇರಲು ಯತ್ನಿಸಿದ್ದರು!| ಧರ್ಮಸಿಂಗ್‌ ಅವರಿಗೆ ಅರ್ಜಿ ಹಾಕಿದ್ದರು: ಎಚ್‌ಡಿಕೆ ಬಾಂಬ್‌| ಬಿಜೆಪಿ, ಶೋಭಾಗೆ ಕಾಂಗ್ರೆಸ್ಸಿಗಿಂತ ನನ್ನ ಬಗ್ಗೆಯೇ ಹೆಚ್ಚು ಭಯ

ಬೆಂಗಳೂರು[ಜ.24]: ಆಡಳಿತಾರೂಢ ಬಿಜೆಪಿಗೆ ಮತ್ತು ಸಂಸದೆ ಶೋಭಾ ಕರಂದ್ಲಾಜೆಗೆ ಕಾಂಗ್ರೆಸ್‌ಗಿಂತ ಹೆಚ್ಚಾಗಿ ನನ್ನ ಬಗ್ಗೆ ಭಯ ಇದೆ. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು. ಅಧಿಕಾರಕ್ಕಾಗಿ ಯಾರು ಯಾರ ಬಳಿ ಹೋಗಿದ್ದರು ಎಂಬುದನ್ನು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈಗಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹಿಂದೆ ನನಗೆ ಮಾತ್ರ ಅರ್ಜಿ ಹಾಕಿರಲಿಲ್ಲ. ಕಾಂಗ್ರೆಸ್‌ಗೆ ಬರುತ್ತೇನೆ ಎಂಬುದಾಗಿ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್‌ ಅವರಿಗೂ ಅರ್ಜಿ ಹಾಕಿದ್ದರು. ಶೋಭಾ ಕರಂದ್ಲಾಜೆ ಹಾಗೂ ರಾಮಚಂದ್ರಗೌಡ ಅವರು ಸಹ ಬಂದು ಅರ್ಜಿ ಹಾಕಿದ್ದರು. ಆಗ ನಾನು ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರನ್ನು ಎಡಬಿಡಂಗಿಯಾಗಿ ಮಾಡಬಹುದಿತ್ತು. ಆದರೆ, ನಾನು ಬೇಡ ನೀವೇ ಸ್ವಂತ ಶಕ್ತಿ ಇಟ್ಟುಕೊಳ್ಳಿ ಎಂಬುದಾಗಿ ಹೇಳಿ ಕಳುಹಿಸಿದ್ದೆ ಎಂದರು.

ಕನಕಪುರಕ್ಕೆ ಸದ್ಯಕ್ಕೆ ಮೆಡಿಕಲ್ ಕಾಲೇಜ್‌ ಇಲ್ಲ: ಡಿಸಿಎಂ

ಜೆಡಿಎಸ್‌ ಪಕ್ಷವನ್ನು ತಳಮಟ್ಟದಿಂದ ಬಲಗೊಳಿಸುವ ನಿಟ್ಟಿನಲ್ಲಿ ಅರಮನೆ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, 2009ರಲ್ಲಿ ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾ ಗಾಂಧಿ ಅವರು ನನ್ನನ್ನು ಮನೆಗೆ ಕರೆದಾಗ ಮುಖ ಮುಚ್ಚಿಕೊಂಡು ಹೋಗಿದ್ದೆ. ಆದರೆ, ಮಾಧ್ಯಮಗಳು ನಾನು ಹೋಗಿದ್ದನ್ನು ಸುದ್ದಿ ಮಾಡಿದ್ದವು. ಆಗ ನಮ್ಮ ಪಕ್ಷಕ್ಕೆ 9 ಸ್ಥಾನ ಕೊಡುವುದಾಗಿ ಹೇಳಿದ್ದರು. ಆದರೂ ನಾವು ಅವರ ಜತೆ ಹೋಗಲಿಲ್ಲ. ನಂತರ ಬಿಜೆಪಿ ಮುಖಂಡ ರಾಜನಾಥ್‌ ಸಿಂಗ್‌ ಅವರು 10 ಸ್ಥಾನ ಕೊಡುತ್ತೇನೆ ಎಂದರು. ಆದರೂ ನಾವು ಬಿಜೆಪಿಯ ಮನೆ ಬಾಗಿಲಿಗೆ ಹೋಗಲಿಲ್ಲ. ಅಧಿಕಾರಕ್ಕಾಗಿ ನಾವು ಯಾರ ಮನೆ ಬಾಗಿಲಿಗೂ ಹೋಗಲಿಲ್ಲ. ಅವರೇ ನಮ್ಮ ಮನೆಯ ಬಾಗಿಲಿಗೆ ಬಂದಿದ್ದರು ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಬಿಜೆಪಿಯ ಆಡಳಿತದಿಂದ ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ರಚನೆ ಮಾಡಬೇಕಾಯಿತು. ಮೈತ್ರಿ ಸರ್ಕಾರ ರಚನೆಯಾದ ಬಳಿಕ ಬಿಜೆಪಿಯ ಷಡ್ಯಂತ್ರಗಳಿಂದಾಗಿ ಪತನವಾಯಿತು. ಮುಖ್ಯಮಂತ್ರಿಯಾಗಿದ್ದ ವೇಳೆ ಮನಸ್ಸು ಮಾಡಿದ್ದರೆ ಸರ್ಕಾರದ ಖಜಾನೆಯ 100-200 ಕೋಟಿ ರು. ಲೂಟಿ ಹೊಡೆದು ಬಿಜೆಪಿ ಶಾಸಕರನ್ನು ಸೆಳೆದುಕೊಂಡು ಸರ್ಕಾರವನ್ನು ಉಳಿಸಿಕೊಳ್ಳಬಹುದಿತ್ತು. ಆದರೆ, ಅಂತಹ ನೀಚ ಕೆಲಸ ಮಾಡಲು ಹೋಗಲಿಲ್ಲ. ಸ್ವಾಭಿಮಾನದಿಂದ ರಾಜೀನಾಮೆ ನೀಡಿ ಮುಖ್ಯಮಂತ್ರಿ ಸ್ಥಾನದಿಂದ ಹೊರಬಂದೆ ಎಂದು ಕುಮಾರಸ್ವಾಮಿ ಹೇಳಿದರು.

‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ ಎಂದು ಅಂಬೇಡ್ಕರ್ ಹೇಳಿದ್ದರು’

ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್‌ ಆಡಳಿತಾವಧಿಯಲ್ಲಿ ಜೆಡಿಎಸ್‌ಗೆ ಬರಲು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸಿದ್ಧರಾಗಿದ್ದರು. ಶೋಭಾ ಕರಂದ್ಲಾಜೆ ಹಾಗೂ ರಾಮಚಂದ್ರಗೌಡ ಅವರು ಸಹ ಬಂದು ಅರ್ಜಿ ಹಾಕಿದ್ದರು. ಆಗ ನಾನು ಮನಸ್ಸು ಮಾಡಿದ್ದರೆ ಯಡಿಯೂರಪ್ಪ ಅವರನ್ನು ಎಡಬಿಡಂಗಿಯಾಗಿ ಮಾಡಬಹುದಿತ್ತು. ಆದರೆ, ನಾನು ಬೇಡ ನೀವೇ ಸ್ವಂತ ಶಕ್ತಿ ಇಟ್ಟುಕೊಳ್ಳಿ ಎಂಬುದಾಗಿ ಹೇಳಿ ಕಳುಹಿಸಿದ್ದೆ ಎಂದರು.

click me!