ಚಾಮರಾಜನಗರ/ಮೈಸೂರು (ಜೂ.16): ಒಂದು ವಾರದಿಂದ ಹೇಳುತ್ತಿದ್ದೇನೆ, ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಇನ್ನೂ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ, ಮುಂದಿನ ಚುನಾವಣೆಯನ್ನೂ ಅವರ ನೇತೃತ್ವದಲ್ಲೇ ನಡೆಸುತ್ತೇವೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರು ನಾಯಕತ್ವ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳಿಗು ಬುಧವಾರ ತೆರೆ ಬೀಳಲಿದೆ.
2ನೇ ಹಂತದ ಅನ್ಲಾಕ್, ನಾಯಕತ್ವ ಬದಲಾವಣೆ ಬಗ್ಗೆ ಸಿಎಂ ಮಹತ್ವದ ಹೇಳಿಕೆ
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಬರುತ್ತಿದ್ದು, ಎಲ್ಲರಿಗೂ ತಿಳಿ ಹೇಳಲಿದ್ದಾರೆ ಎಂದರು.
ರಾಜಕೀಯ ವಿಚಾರಗಳಲ್ಲಿ ಮಠಾಧೀಶರು ಹೇಳಿಕೆಗಳನ್ನು ನೀಡುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮ ಬಿಟ್ಟು ರಾಜಕಾರಣ ಇಲ್ಲ, ರಾಜಕಾರಣ ಬಿಟ್ಟು ಧರ್ಮ ಇಲ್ಲ. ಹಿಂದೆ ರಾಜಗುರುಗಳಿದ್ದರು, ಈಗ ಸಮುದಾಯಗಳ ಸ್ವಾಮೀಜಿಗಳಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ವ್ಯಾಖ್ಯಾನಿಸಿದರು.