
ಬೆಂಗಳೂರು, (ಜುಲೈ, 06): ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಆತ್ಮ ನಿರ್ಭರ ಭಾರತ ಯಶಸ್ವಿಗೆ ಎಲ್ಲರೂ ಸ್ವದೇಶಿ, ಸ್ವಭಾಷಾ ಮತ್ತು ಸ್ವಭೂಷ (ನಮ್ಮ ಸಂಸ್ಕೃತಿ) ಎಂಬ ಮೂರು ಸೂತ್ರಗಳನ್ನು ಪಾಲನೆ ಮಾಡಬೇಕು ಎಂದು ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿಳಿಸಿದರು.
ಮೋದಿ ಸರ್ಕಾರದ ಒಂದು ವರ್ಷದ ಸಾಧನೆ ಹಾಗೂ ಕೋವಿಡ್-19 ಕುರಿತು ಬಿಜೆಪಿ ಕೈಗೊಂಡಿದ್ದ ಹಮ್ಮಿಕೊಂಡಿದ್ದ ಜನ ಸಂಪರ್ಕ ಅಭಿಯಾನದ ಸಮಾರೋಪ ಸಮಾರಂಭ ಇಂದು (ಸೋಮವಾರ) ನಡೆಯಿತು. ವರ್ಚುಯಲ್ ಮಾಧ್ಯಮದ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ಕೊರೋನಾ ಸೋಂಕು ಪ್ರಕರಣಗಳಲ್ಲಿ ಭಾರತ ಮೂರನೇ ಸ್ಥಾನಕ್ಕೇರಿದ್ದು, ಅಮೆರಿಕ ದೇಶದ ಮೂರು ಪಟ್ಟು ಜನ ನಮ್ಮಲ್ಲಿದ್ದಾರೆ. ಹೀಗಾಗಿಯೇ ಸೋಂಕು ಹೆಚ್ಚಾಗಿದೆ ಎಂದು ಸ್ಪಷ್ಟಪಡಿಸಿದರು.
ಬಿಗ್ಬಾಸ್ ನಿರೂಪಣೆಗೆ ರೂ. 16 ಕೋಟಿ, ಚೀನಾಗೆ ಮೋದಿ ಭೀತಿ; ಜು.6ರ ಟಾಪ್ 10 ಸುದ್ದಿ!
ದೇಶದಲ್ಲಿ ನರೇಂದ್ರ ಮೋದಿ ಇಲ್ಲದಿದ್ದರೆ ಈ ದೇಶ ಕೊರೋನಾದಿಂದ ಈ ಮಟ್ಟದಲ್ಲಿ ಬಚಾವಾಗುತ್ತಿರಲಿಲ್ಲ. ಈ ಮಾತನ್ನು ದೇಶದ ಹಲವು ಗಣ್ಯರು, ವಿವಿಧ ವಲಯಗಳ ತಜ್ಞರು ಹೇಳಿದ್ದಾರೆ. ಮೋದಿ ಅವರು ಕೊರೋನಾ ಸಂದರ್ಭದಲ್ಲಿ ದೇಶದಲ್ಲಿನ ಸಮಸ್ಯೆಗಳನ್ನು ಅಷ್ಟರ ಮಟ್ಟಿಗೆ ನಿಯಂತ್ರಣ ಮಾಡಿದ್ದಾರೆ ಎಂದು ಹಾಡಿ ಹೊಗಳಿದರು.
ಕೊರೋನಾ ಸಮಸ್ಯೆಯನ್ನು ಇನ್ನೂ ನಾಲ್ಕಾರು ತಿಂಗಳು ದೇಶ ಎದುರಿಸಬೇಕಾಗಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ ನಾವಿದ್ದು, ಒಂದು ಪಕ್ಷದ ಕಾರ್ಯಕರ್ತರಾಗಿ ನಾವು ಕೇವಲ ಪಕ್ಷದ ಕೆಲಸ, ರಾಜಕೀಯ ಕೆಲಸಕ್ಕೆ ಸೀಮಿತವಾಗಬಾರದು. ಸಾಮಾನ್ಯ ಜನರ ತಲ್ಲಣ, ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ
ವೀರ್ ಸಾವರ್ಕರ್ ಯಾರು ಎಂದು ಪ್ರಶ್ನೆ ಮಾಡಿದವರಿಗೆ ಭವಿಷ್ಯದಲ್ಲಿ ಕಸದ ಬುಟ್ಟಿಗೆ ಸೇರುತ್ತಾರೆ ಎಂದು ಕರ್ನಾಟಕ ಕಾಂಗ್ರೆಸ್ ನಾಯಕರ ವಿರುದ್ಧ ಸಂತೋಷ್ ಕಿಡಿಕಾರಿದರು. ಪ್ರಧಾನಿ ಮೋದಿ ಅವರು ಸೈನಿಕರನ್ನು ಭೇಟಿ ಮಾಡಿದಕ್ಕೂ ಟೀಕೆ ಮಾಡಿದ್ದಾರೆ. ಸೇನೆಯಯಲ್ಲಿ ಚೇತರಿಕೆ (ರಿಕವರಿ) ವಾರ್ಡ್ ಎಂದು ಸೈನಿಕರಿಗೆ ನೀಡಲಾಗಿರುತ್ತದೆ. ಸೈನಿಕರ ಗಾಯ ವಾಸಿಯಾದ ಮೇಲೆ ಈ ವಾರ್ಡಿನಲ್ಲಿರುತ್ತಾರೆ. ಸೈನಿಕರನ್ನು ಅಂತಹ ವಾರ್ಡಿನಲಿಟ್ಟ ವೇಳೆ ಪ್ರಧಾನಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಆದರೆ ಇದುವರೆಗೂ ಒಂದೇ ಒಂದು ರಕ್ಷಣಾ ಸಭೆಗೆ ಬಾರದಿರುವವರು ಇಂತಹ ಆರೋಪ ಮಾಡಿರುವುದು ಸರಿಯಲ್ಲ ಎಂದು ರಾಹುಲ್ ಗಾಂಧಿಗೆ ಟಾಂಗ್ ಕೊಟ್ಟರು.
ಸುರೇಶ್ ಕುಮಾರ್ ಕಾರ್ಯಕ್ಕೆ ಶ್ಲಾಘನೆ
ಇದೇ ವೇಳೆ ಕೊರೋನಾ ಭೀತಿ ನಡುವೆ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ರಾಜ್ಯ ಸರ್ಕಾರವನ್ನು ಬಿಎಲ್ ಸಂತೋಷ್ ಅವರು ಶ್ಲಾಘಿಸಿದರು. ಸುರೇಶ್ ಕುಮಾರ್ ಅವರಿಗೆ ಸಾಥ್ ನೀಡಿದ ಎಲ್ಲಾ ಸಚಿವರುಗಳಿಗೂ ಅಭಿನಂದನೆ ತಿಳಿಸಿದರು. ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದು ಇತರೇ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ರಾಜ್ಯ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಡಿಸಿಎಂ ಗೋವಿಂದ ಕಾರಜೋಳ, ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ.ಸೋಮಣ್ಣ ಮತ್ತು ಸುರೇಶ್ ಕುಮಾರ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ, ಭೈರತಿ ಬಸವರಾಜು ಭಾಗಿಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.