ಬಿಜೆಪಿಯೇ 2 ಸೀಟು ಗೆಲ್ಲಲಿದೆ : ಗುಪ್ತಚರ ಇಲಾಖೆಯಿಂದ ಮಾಹಿತಿ

By Kannadaprabha NewsFirst Published Nov 5, 2020, 9:43 AM IST
Highlights

ಮುನಿರತ್ನ ಹಾಗೂ ರಾಜೇಶ್ ಗೌಡ ಗೆಲುವು ಖಚಿತ ಎಂದು ಗುಪ್ತಚರ ಇಲಾಖೆಯಿಮದ ಮಾಹಿತಿ ಹೊರಬಿದ್ದಿದೆ. 

ಬೆಂಗಳೂರು (ನ.05):  ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಶಿರಾ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಯೇ ಗೆಲ್ಲುವ ವಿಶ್ವಾಸವನ್ನು ಆ ಪಕ್ಷದ ಮುಖಂಡರು ಹೊಂದಿದ್ದಾರೆ.

ಜೊತೆಗೆ ಗುಪ್ತಚರ ಇಲಾಖೆಯೂ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆಲ್ಲಲಿದೆ ಎಂಬ ವರದಿ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದರೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಾಯಕತ್ವ ಬದಲಾವಣೆ ಕುರಿತು ಕೇಳಿಬರುತ್ತಿರುವ ಊಹಾಪೋಹಗಳಿಗೆ ತೆರೆ ಬೀಳಲಿದೆ ಎಂಬ ಮಾತು ಇದೀಗ ಬಿಜೆಪಿ ಪಾಳೆಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.

'ಬಿಜೆಪಿ ಗೆಲುವು ನಿಶ್ಚಿತ : ಫಲಿತಾಂಶಕ್ಕೆ ಮುನ್ನ ಸೋಲೊಪ್ಪಿಕೊಂಡ ಜಯಚಂದ್ರ '

ಚುನಾವಣೆ ಘೋಷಣೆಯಾಗುವ ಮುನ್ನವೇ ಯಡಿಯೂರಪ್ಪ ಅವರ ಬದಲಾವಣೆ ಬಗ್ಗೆ ವದಂತಿ ಹಬ್ಬಿತ್ತು. ನಂತರ ಚುನಾವಣೆ ಪ್ರಚಾರದ ಭರಾಟೆ ಆರಂಭವಾದ ಹೊತ್ತಿನಲ್ಲಿ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಹಿರಂಗವಾಗಿಯೇ ಯಡಿಯೂರಪ್ಪ ಅವರ ನಾಯಕತ್ವದ ಬಗ್ಗೆ ಮಾತನಾಡಿ, ಶೀಘ್ರದಲ್ಲೇ ಬದಲಾವಣೆಯಾಗಲಿದೆ ಎಂದು ಹೇಳಿದ್ದು ಸಾಕಷ್ಟುಚರ್ಚೆಗೆ ಗ್ರಾಸವಾಗಿತ್ತು. ಯತ್ನಾಳ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಸಚಿವರು, ಶಾಸಕರು ಒತ್ತಾಯ ಮಾಡಿದರೂ ಪಕ್ಷದ ನಾಯಕರು ಮಾತ್ರ ಚಕಾರ ಎತ್ತಿರಲಿಲ್ಲ.

ಈ ಕಾರಣಕ್ಕಾಗಿಯೇ ಯಡಿಯೂರಪ್ಪ ಮತ್ತವರ ಆಪ್ತರು ಪ್ರಸಕ್ತ ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆ ಹಾಗೂ ವಿಧಾನಸಭೆಯ ಎರಡು ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಸ್ವೀಕರಿಸಿ ಕೆಲಸ ಆರಂಭಿಸಿದರು. ಪರಿಷತ್ತಿನ ಚುನಾವಣೆಯಲ್ಲಿ ಪದವೀಧರರು ಹಾಗೂ ಶಿಕ್ಷಕರು ಮಾತ್ರ ಮತದಾರರಾಗಿದ್ದರಿಂದ ಜನಸಾಮಾನ್ಯರು ಮತ ಚಲಾಯಿಸುವ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದರು.

ಇದೀಗ ಚುನಾವಣೆಯ ಮತದಾನ ಮುಗಿದಿದೆ. ಅದರ ಬೆನ್ನಲ್ಲೇ ಮತ ಹಂಚಿಕೆಯ ವಿವರಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ತಲುಪಿವೆ. ಗುಪ್ತಚರ ಇಲಾಖೆಯ ವರದಿಯೂ ಕೈಸೇರಿದೆ. ಹೀಗಾಗಿ, ಈ ಎರಡೂ ಕ್ಷೇತ್ರಗಳಲ್ಲಿ ಪಕ್ಷ ಗೆಲುವು ಸಾಧಿಸಿದಲ್ಲಿ ಆಗಲಾದರೂ ನಾಯಕತ್ವ ಬದಲಾವಣೆಯ ಊಹಾಪೋಹಗಳಿಗೆ ತೆರೆ ಬೀಳಬಹುದು. ವರಿಷ್ಠರು ಕೂಡ ಈ ವಿಷಯದಲ್ಲಿ ಯಡಿಯೂರಪ್ಪ ಪರ ನಿಲ್ಲಬಹುದು ಎಂಬ ವಿಶ್ವಾಸ ಅವರ ಆಪ್ತ ಬಳಗದಲ್ಲಿ ವ್ಯಕ್ತವಾಗಿದೆ.

click me!