ರಾಜ್ಯದಲ್ಲಿ ಕೈ ಸರ್ಕಾರ ಇದೇಯೋ, ಸತ್ತಿದೆಯೋ?: ಕಾಂಗ್ರೆಸ್ ವಿರುದ್ಧ ಹರಿಹಾಯ್ದ ನಿರಾಣಿ

By Kannadaprabha NewsFirst Published Dec 26, 2023, 8:01 AM IST
Highlights

ನಾನು ಲೋಕಸಭೆ ಟಿಕೆಟ್ ಕೇಳಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ಜವಾಬ್ದಾರಿಗಳನ್ನು ಕೇಳಿಲ್ಲ. ನನಗೆ ಬಂದಿರುವ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ: ಮುರುಗೇಶ ನಿರಾಣಿ 

ಬಾಗಲಕೋಟೆ(ಡಿ.26):  ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಜೀವಂತ ಇದೆಯೋ, ಸತ್ತಿದೆಯೋ ಗೊತ್ತಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರುವ ಜೊತೆಗೆ ರಾಜ್ಯಕ್ಕೆ ಭೀಕರ ಬರ ತಂದಿದೆ ಎಂದು ನೂತನವಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಕವಾಗಿರುವ ಮುರುಗೇಶ ನಿರಾಣಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ನಮ್ಮ ಸರಕಾರ ಪ್ರಾರಂಭಿಸಿದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರಕಾರ ಅರ್ಧಕ್ಕೆ ನಿಲ್ಲಿಸಿದೆ. ಜೊತೆಗೆ ನೂತನ ಯೋಜನೆಗಳನ್ನು ಜಾರಿಗೆ ತರುತಿಲ್ಲ ಎಂದು ಆರೋಪಿಸಿದರು.

ಹಿಜಾಬ್ ಬಗ್ಗೆ ಸಿಎಂ ವಿವಿಧ ಹೇಳಿಕೆ:

ಹಿಜಾಬ್ ವಿಷಯ ಸುಪ್ರೀಂ ಕೋರ್ಟ್‌ನಲ್ಲಿರುವ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಹಿಜಾಬ್ ಬಗ್ಗೆ ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆಯೊಂದು ಹೇಳಿಕೆ ನೀಡಿದ್ದಾರೆ. ಮುಸ್ಲಿಮರಿಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ ಎಂದು ಹೇಳುತ್ತಾರೆ. ಆದರೆ, ಹಿಂದೂಗಳಿಗೆ ಏನು ಇಲ್ಲ. ಇಂತಹ ಸರಕಾರವನ್ನು ಕಿತ್ತೊಗೆಯಲು ಜನ ಕಾಯುತ್ತಿದ್ದಾರೆ ಎಂದರು.

ಈಗಿನ ಪರಿಸ್ಥಿತಿಯಲ್ಲಿ ಅವಧಿಗೆ ಮುನ್ನವೇ ಕಾಂಗ್ರೆಸ್​ ಸರ್ಕಾರ ಢಮಾರ್: ಮುರುಗೇಶ್ ನಿರಾಣಿ ಭವಿಷ್ಯ

ಬೆಂಗಳೂರಿನಲ್ಲಿ ಸಭೆ:

ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯಮಟ್ಟದ ನೂತನ ಪದಾಧಿಕಾರಗಳೊಂದಿಗೆ ಬೆಂಗಳೂರಿನಲ್ಲಿ ಡಿ.26ರಂದು ಸಭೆ ಹಮ್ಮಿಕೊಳ್ಳಲಾಗಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಾರದಲ್ಲಿ ಜಿಲ್ಲೆಗೆ ಕರೆಸಲಾಗುತ್ತದೆ ಎಂದು ತಿಳಿಸಿದರು.

ನಾನು ಲೋಕಸಭೆ ಟಿಕೆಟ್ ಕೇಳಿಲ್ಲ. ಇಲ್ಲಿಯವರೆಗೆ ನಾನು ಯಾವುದೇ ಜವಾಬ್ದಾರಿಗಳನ್ನು ಕೇಳಿಲ್ಲ. ನನಗೆ ಬಂದಿರುವ ಎಲ್ಲ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದರು.
ಕೋಮಾದಲ್ಲಿ ಪೈಪ್ ಹಚ್ಚಿಕೊಂಡವರನ್ನು ನಾವಾಗಿ ಪೈಪ್ ಕಿತ್ತಿ ಸಾಯಿಸಲ್ಲ. ಮುಂದಿನ ಐದಾರು ತಿಂಗಳಲ್ಲಿ ಕಾಂಗ್ರೆಸ್ ಡಮಾರ್ ಆಗುತ್ತದೆ ಎಂದರು.

ದೀಪ ಆರುವಾಗ ಹೆಚ್ಚಿಗೆ ಉರಿಯುತ್ತದೆ

ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಗ್ಗೆ ಕೆಜೆಪಿ-1, 2 ಎಂದು ಆರೋಪ ಮಾಡುವವರು ಯಡಿಯೂರಪ್ಪನವರ ಶಕ್ತಿಯಿಂದ ಬಿಜೆಪಿ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿತ್ತು. ಅವರು 4 ಬಾರಿ ಸಿಎಂ ಆದವರು, ಅವರ ಮಗ ಬಿ.ವೈ.ವಿಜಯೇಂದ್ರ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದ ರಾಷ್ಟ್ರೀಯ ನಾಯಕರು ಅವರಿಗೆ ರಾಜ್ಯಾಧ್ಯಕ್ಷ ಮಾಡಿದ್ದಾರೆ. ಹಾದಿ ಬೀದಿಯಲ್ಲಿ ಮಾತನಾಡುವವರ ಬಗ್ಗೆ ಉತ್ತರ ನೀಡುವುದಿಲ್ಲ.ದೀಪ ಆರುವಾಗ ಹೆಚ್ಚಿಗೆ ಉರಿಯುತ್ತದೆ. ವಿಜಯಪುರದವರ ಮಾತಿಗೆ ನಾವ್ಯಾರು ಪ್ರತಿಕ್ರಿಯಿಸಲ್ಲ ಎಂದು ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳಗೆ ಟಾಂಗ್‌ ನೀಡಿದರು.

click me!