ಪದಾಧಿಕಾರಿಗಳ ಆಯ್ಕೆ; ಬಿವೈ ವಿಜಯೇಂದ್ರ ಆಪ್ತರಿಗೆ ಆದ್ಯತೆ, ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ!

Published : Dec 26, 2023, 01:42 AM ISTUpdated : Dec 26, 2023, 01:46 AM IST
ಪದಾಧಿಕಾರಿಗಳ ಆಯ್ಕೆ; ಬಿವೈ ವಿಜಯೇಂದ್ರ ಆಪ್ತರಿಗೆ ಆದ್ಯತೆ, ಬಿಜೆಪಿಯಲ್ಲಿ ಭುಗಿಲೆದ್ದ ಬಂಡಾಯ!

ಸಾರಾಂಶ

ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಗಳ ಆಯ್ಕೆ ವಿಚಾರ ಇದೀಗ ಆ ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಬಿವೈ ವಿಜಯೇಂದ್ರ ವಿರುದ್ದ ಅವರದ್ದೇ ಪಕ್ಷದ ಹಿರಿಯ ನಾಯಕರು ಬಂಡಾಯವೆದ್ದಿದ್ದಾರೆ.

ಬೆಂಗಳೂರು (ಡಿ.26): ರಾಜ್ಯ ಬಿಜೆಪಿ ಘಟಕದ ಪದಾಧಿಕಾರಿಗಳ ಆಯ್ಕೆ ವಿಚಾರ ಇದೀಗ ಆ ಪಕ್ಷದ ಆಂತರಿಕ ಬಿಕ್ಕಟ್ಟಿಗೆ ಕಾರಣವಾಗಿದ್ದು, ಬಿವೈ ವಿಜಯೇಂದ್ರ ವಿರುದ್ದ ಅವರದ್ದೇ ಪಕ್ಷದ ಹಿರಿಯ ನಾಯಕರು ಬಂಡಾಯವೆದ್ದಿದ್ದಾರೆ.

ಹಿರಿಯ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ವಿ ಸೋಮಣ್ಣ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದಾಗ ಭಿನ್ನಮತ ಎದುರಿಸಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರು ಪಕ್ಷದ ಹಿರಿಯರನ್ನು ಬದಿಗೊತ್ತಿ ಮತ್ತೆ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

ರಾಯಚೂರು ಪಂಚಮಸಾಲಿ ಮೀಸಲಾತಿ ಸಮಾವೇಶ: ಭಾಷಣದುದ್ದಕ್ಕೂ ಬಿಎಸ್‌ವೈ, ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಯತ್ನಾಳ್!

ಮಾಜಿ ಮುಖ್ಯಮಂತ್ರಿ, ಸಂಸದ ಸದಾನಂದ ಗೌಡ ಮತ್ತು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ನೂತನ ಪದಾಧಿಕಾರಿಗಳ ಪಟ್ಟಿ ಬಗ್ಗೆ ತಕಾರಾರು ಎತ್ತಿದ್ದು, ವರಿಷ್ಠರ ತೀರ್ಮಾನಕ್ಕೆ ಅಸಮಾಧಾನ ವ್ಯಕ್ತಪಡಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಆಪ್ತರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಆಧ್ಯತೆ ನೀಡಿರುವುದು ಇವರಿಬ್ಬರ ಸಿಟ್ಟಿಗೆ ಕಾರಣವಾಗಿ ನೂತನ ಪದಾಧಿಕಾರಿಗಳ ನೇಮಕಾತಿ ಬಗ್ಗೆ ಕೆಂಡಕಾರಿ ರಾಜ್ಯದ ಹಿರಿಯ ನಾಯಕರ ಜತೆ ಚರ್ಚಿಸದೆ ಪಟಿಯನ್ನು ಅಂತಿಮಗೊಳಿಸಿರುವುದಕ್ಕೆ ಆಕ್ರೋಶ ಹೊರ ಹಾಕಿದ್ದಾರೆ, ಹಾಗೆಯೇ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರನ್ನು ಗುರಿಯಾಗಿಸಿ ಈ ಇಬ್ಬರು ನಾಯಕರು ವಾಗ್ದಾಳಿ ನಡೆಸಿದ್ದಾರೆ.

ನೂತನ ಪದಾಧಿಕಾರಿಗಳ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರವರ ಆಪ್ತ ವಲಯದಲ್ಲಿರುವವರಿಗೆ ಮಣೆ ಹಾಕಲಾಗಿದೆ. ಪಟ್ಟಿ ಬಿಡುಗಡೆಗೂ ಮುನ್ನ ಕೇಂದ್ರ ನಾಯಕರು ರಾಜ್ಯಕ್ಕೆ ಬಂದು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ ನಡೆಸಿ ಹಿರಿಯ ನಾಯಕರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಂಡು ನೂತನ ಪದಾಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು ಎಂಬ ಮಾತುಗಳನ್ನು ಹೇಳಿದ್ದಾರೆ.

ಹಾಲಿ ನೇಮಕಗೊಂಡಿರುವ ಬಿಜೆಪಿಯ ಬಹುಪಾಲು ಪದಾಧಿಕಾರಿಗಳು ಅವರ ಅನುಯಾಯಿಗಳು ಮತ್ತು ಆಪ್ತರ ಎನ್ನಲಾಗಿದೆ. ಈ ಬೆಳವಣಿಗೆಯಿಂದ ರಾಜ್ಯ ಬಿಜೆಪಿಯ ಹಿರಿಯ ನಾಯಕರು ಬಿವೈ ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೇ ಪದಾಧಿಕಾರಿಗಳ ಆಯ್ಕೆಯನ್ನು ಕೆಜಿಪಿ2 ಎಂದು ಜರಿದಿರುವ ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀವ್ ಅವರು, ಬಿಜೆಪಿಯಲ್ಲಿ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡು ಸಮಯ ಸಿಕ್ಕಾಗಲೆಲ್ಲ ಯಡಿಯೂರಪ್ಪ ಮತ್ತು ಅವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೂತನ ಪದಾಧಿಕಾರಿಗಳ ಪಟ್ಟಿ ನೋಡಿದರೆ ಕೆಜೆಪಿ 2 ಪಟ್ಟಿ ಇದ್ದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಅಂತೆಯೇ ಯಡಿಯೂರಪ್ಪರವರದ್ದು ಕೆಜೆಪಿ 1 ಆದರೆ, ಮಗನದು ಕೆಜೆಪಿ 2, ಮುಂದೆ ಮೊಮ್ಮಗ ಬಂದರೆ ಕೆಜೆಪಿ 3 ಎಂದು ಬಸನಗೌಡ ಪಾಟೀಲ್ ಯತ್ನಾಳ್ ನೂತನ ಪದಾಧಿಕಾರಿಗಳ ಪಟ್ಟಿಗೆ ಆಕ್ರೋಶ ಹೊರ ಹಾಕಿ ಈ ಪಟ್ಟಿಯ ಆಯುಷ್ಯ 2024ರ ಲೋಕಸಭಾ ಚುನಾವಣೆಗೆ ಮಾತ್ರ. ಬಿವೈ ವಿಜಯೇಂದ್ರ ಎಲ್ಲ 28 ಸ್ಥಾನಗಳಲ್ಲೂ ಪಕ್ಷ ಗೆಲ್ಲುವ ಭರವಸೆ ನೀಡಿದ್ದಾರೆ. ಒಂದು ಸ್ಥಾನ ಕಡಿಮೆಯಾದರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗುವುದು’ ಎಂದು ಯತ್ನಾಳ್ ಅಸಮಾಧಾನ ಹೊರಹಾಕಿದ್ದಾರೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ಮಗನನ್ನು ಉದ್ಧಾರ ಮಾಡದಿದ್ದರೆ ನಾವು ಲೋಕಸಭೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅದಕ್ಕೆ ವರಿಷ್ಠರು ಹಾಳಾಗಿ ಹೋಗಲಿ ಅಂತ ಕಳ್ಳರ ಕೈಯಲ್ಲಿ ಬೀಗ ಕೊಟ್ಟಿದ್ದಾರೆ. ಈ ಬೀಗ 2024ರವರೆಗೆ ಮಾತ್ರ ಲೋಕಸಭೆಯಲ್ಲಿ 28 ಸೀಟು ಬರಲಿಲ್ಲ ಎಂದರೆ ಬೀಗ ಕಸಿದುಕೊಳ್ಳುತ್ತಾರೆ. ಈಗ ರಾಜಕೀಯದಲ್ಲಿ ಲಂಪಟರು ಬಹಳ ಇದ್ದಾರೆ. ಅವರೆಲ್ಲ ಹಲ್ಕಾ ಕೆಲಸ ಮಾಡುತ್ತಾರೆ. ಇವತ್ತು ಮೌಲ್ಯಾಧಾರಿತ ರಾಜಕಾರಣ ಇಲ್ಲ. ಎಲ್ಲ ಕಳ್ಳರು ಲಫಂಗರು ಹೆಚ್ಚು ಸೇರುತ್ತಿದ್ದಾರೆ. ಒಳ್ಳೆಯವರಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. 2024ರ ಚುನಾವಣೆಯ ನಂತರ ಮೇಜರ್ ಆಪರೇಷನ್ ಮಾಡದೇ ಇದ್ದರೆ ಮುಂದಿನ ನಿರ್ಣಯ ನಾನು ಮಾಡುತ್ತೇನೆ ಎಂದರು.

ಮೂಲಗಳ ಪ್ರಕಾರ, ತಲಾ ಹತ್ತು ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಮತ್ತು ನಾಲ್ಕು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 32 ಪದಾಧಿಕಾರಿಗಳಲ್ಲಿ ಕನಿಷ್ಠ 25 ಮಂದಿ ಯಡಿಯೂರಪ್ಪ ಬೆಂಬಲಿಗರು ಅಥವಾ ವಿಜಯೇಂದ್ರ ಅವರ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಹೇಳಲಾಗಿದೆ. ಮೈಸೂರಿನಲ್ಲಿ ಉಪಾಧ್ಯಕ್ಷ ಎಂ.ರಾಜೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ, ಕಾರ್ಯದರ್ಶಿ ಲಲಿತಾ ಅನಪುರ, ಮಹಿಳಾ ಘಟಕದ ಅಧ್ಯಕ್ಷೆ ಸಿ.ಮಂಜುಳಾ, ಯುವಮೋರ್ಚಾ ಅಧ್ಯಕ್ಷ ಹಾಗೂ ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು, ಎಸ್‌ಸಿ ಮೋರ್ಚಾ ಅಧ್ಯಕ್ಷ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಇದ್ದರು. ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ ವಿಜಯೇಂದ್ರ ಅವರೇ ಮುಂದಿನ ಸಿಎಂ ಆಗಬೇಕೆಂದು ಬಯಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಯಚೂರು: ಪಂಚಮಸಾಲಿ ಮೀಸಲಾತಿ ಸಮಾವೇಶದಲ್ಲಿ ಬಿಎಸ್‌ವೈ ವಿರುದ್ಧ ಯತ್ನಾಳ್ ಕಿಡಿ

ಕಾರ್ಯದರ್ಶಿಯಾಗಿ ವಿನಯ್ ಬಿದರೆ ಮತ್ತು ಉಪಾಧ್ಯಕ್ಷರಾಗಿ ಎಂ ರಾಜೇಂದ್ರ ಅವರು ಹಿಂದೆ ಹೊಂದಿದ್ದ ಹುದ್ದೆಗಳನ್ನು ಉಳಿಸಿಕೊಂಡಿದ್ದು ಬಿಟ್ಟರೆ ಉಳಿದೆಲ್ಲ ಪದಾಧಿಕಾರಿಗಳು ಹೊಸ ಮುಖಗಳೇ ಆಗಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೆಚ್ಚು ಸ್ಥಾನಗಳನ್ನು ಗೆಲ್ಲುವುದನ್ನು ಖಚಿತಪಡಿಸಿಕೊಳ್ಳುವ ಕಾರ್ಯದೊಂದಿಗೆ ವಿಜಯೇಂದ್ರ ಅವರ ಪದಾಧಿಕಾರಿಗಳ ತಂಡಕ್ಕೆ ವರಿಷ್ಠರು ಚಾಲನೆ ನೀಡಿದ್ದಾರೆ. ಅವರ ತಂದೆಯಂತೆ, ವಿಜಯೇಂದ್ರ ಅವರು ಜಾತಿ ಸಮೀಕರಣವನ್ನು ಅರ್ಥಮಾಡಿಕೊಂಡಿದ್ದಾರೆ ಮತ್ತು ಭವಿಷ್ಯಕ್ಕಾಗಿ ತಮ್ಮ ತಂಡವನ್ನು ರಚಿಸಿದ್ದಾರೆ, ”ಎಂದು ಪದಾಧಿಕಾರಿಯೊಬ್ಬರು TNIE ಗೆ ತಿಳಿಸಿದರು

ಸದಾನಂದಗೌಡ ಅಸಮಾಧಾನ“ಈ ತಂಡವು ಅಸಮರ್ಥ ತಂಡವಲ್ಲ. ಆದರೆ ಅಲ್ಲಿ ಮತ್ತು ಇಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಅವರನ್ನು ನೇಮಿಸುವ ಮುನ್ನ ರಾಷ್ಟ್ರೀಯ ನಾಯಕರು ರಾಜ್ಯದ ಹಿರಿಯ ನಾಯಕರ ಜತೆ ಮಾತನಾಡಬೇಕಿತ್ತು' ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬೆಂಗಳೂರು ಉತ್ತರ ಸಂಸದ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.

'ಇದು ಅಸಮರ್ಥ ತಂಡ ಅಂತ ಹೇಳಲ್ಲ. ಎಲ್ಲೋ ಒಂದು ಕಡೆ ವ್ಯತ್ಯಾಸವಾಗಿದೆ. ಹೈಕಮಾಂಡ್ ಇಲ್ಲಿ ಬಂದು ತೀರ್ಮಾನ ಮಾಡಬೇಕಿತ್ತು. ದಕ್ಷಿಣ ಕರ್ನಾಟಕಕ್ಕೆ ಹೆಚ್ಚು ಆಧ್ಯತೆ ಸಿಕ್ಕಿದೆ. ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾಗಿ ಸಿಕ್ಕಿಲ್ಲ ಎಂಬ ಮಾತುಗಳು ಇವೆ. ಇದನ್ನೆಲ್ಲ ಮಾಡೋಕು ಮುನ್ನ ಕೇಂದ್ರದ ನಾಯಕರು ಬಂದು ರಾಜ್ಯದ ಹಿರಿಯರ ಜತೆ ಕುಳಿತು ಮಾತನಾಡಬೇಕಿತ್ತು. ಮುಂದೆ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳ ನೇಮಕವಾಗುವಾಗ ಸಮಾನವಾಗಿ ನೇಮಕವಾಗಬೇಕು,. ಒಂದು ತಂಡ ಎಂದರೆ ಅದು ಒಂದು ಗುಂಪಿಗೆ ಸೀಮಿತ ಆಗಬಾರದು. ಈಗಲಾದರೂ ವರಿಷ್ಠರು ರಾಜ್ಯಕ್ಕೆ ಬರಬೇಕು. ದೆಹಲಿಯಲ್ಲಿ ಕುಳಿತು ತೀರ್ಮಾನ ಮಾಡೋದು ಸರಿಯಲ್ಲ. ಕೋರ್‌ಕಮಿಟಿ ಜತೆ ಚರ್ಚಿಸಿ ತೀರ್ಮಾನವಾಗಿದ್ದರೆ ಇನ್ನೂ ಸದೃಢವಾದ ತಂಡ ಕಟ್ಟಲು ಸಾಧ್ಯವಾಗಬಹುದಿತ್ತು ಎಂದು ಹೇಳುವ ಮೂಲಕ ಸದಾನಂದ ಗೌಡ ಅವರು ವರಿಷ್ಠರ ತೀರ್ಮಾನದ ಬಗ್ಗೆ ಅಸಮಾಧಾನ ಹೊರಹಾಕಿದರು.

ಹೈಕಮಾಂಡ್ ವಿಧಾನಸಭಾ ಚುನಾವಣೆಯ ನಂತರ ಕರ್ನಾಟಕದ ಕಡೆ ಗಮನ ಕೊಡುತ್ತಿಲ್ಲ. ಮೊದಲು ಪಕ್ಷದ ಒಳಗಿನ ಆಂತರಿಕ ಕಲಹ ಸರಿ ಮಾಡಬೇಕಿತ್ತು. ಅಸಮಾಧಾನಿತರನ್ನು ಕರೆದು ಮಾತನಾಡಬೇಕಿತ್ತು. ಅದ್ಯಾವುದನ್ನು ಮಾಡದೆ ಪದಾಧಿಕಾರಿಗಳ ಪುನಾರಚನೆ ಮಾಡಿರುವುದಕ್ಕೆ ಸದಾನಂದಗೌಡ ಆಕ್ಷೇಪ ವ್ಯಕ್ತಪಡಿಸಿ ಏನೆ ಇರಲಿ ಬಿಜೆಪಿ ಹೊಸ ತಂಡಕ್ಕೆ ತಮ್ಮ ಸಹಕಾರ ಇರುತ್ತದೆ. ಈ ತಂಡ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋದರೆ ಖಂಡಿತ ಯಶಸ್ವಿಯಾಗುತ್ತದೆ. ಮತ್ತೆ ಹಳೇ ಚಾಳಿ ಮುಂದುವರೆಸಿದರೆ ಅದು ಪಕ್ಷದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ