ಸಚಿವರು, ಶಾಸಕರಿಂದಲೇ ಸಿದ್ದರಾಮಯ್ಯ ಬೆನ್ನಿಗೆ ಚೂರಿ: ಬಿ.ವೈ.ವಿಜಯೇಂದ್ರ

By Kannadaprabha NewsFirst Published Aug 5, 2024, 10:59 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಲು ಅವರ ಶಾಸಕರು, ಸಚಿವರುಗಳೇ ಕಾದು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. 

ರಾಮನಗರ (ಆ.05): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಲು ಅವರ ಶಾಸಕರು, ಸಚಿವರುಗಳೇ ಕಾದು ಕುಳಿತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿ, ಕಾಂಗ್ರೆಸ್‌ನವರು ಪಶ್ಚಾತ್ತಾಪದ ಯಾತ್ರೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು. ಸದನದಲ್ಲಿ ಮೊದಲು ಮುಡಾ ಹಗರಣದ ಬಗ್ಗೆಯೇ ಮಾತನಾಡಬೇಕಿತ್ತು ಎಂದು ಕಾಂಗ್ರೆಸ್ ಶಾಸಕರೇ ನನಗೆ ಹೇಳಿದ್ದಾರೆ. ನಮ್ಮ ಪಾದಯಾತ್ರೆ ಯಾವಾಗ ಶುರುವಾಗಲಿದೆ ಎಂದು ಕಾಂಗ್ರೆಸ್‌ ಶಾಸಕರೇ ಕಾಯುತ್ತಿದ್ದರು. 

ನಮ್ಮ ಪಾದಯಾತ್ರೆ ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬುದಕ್ಕೆ ಅಲ್ಲ. ಅಹಿಂದಾ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದು ಹಗರಣಗಳಲ್ಲಿಯೇ ಮುಳುಗಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧವಾಗಿದೆ ಎಂದರು. ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದ ಕೋಟಿ, ಕೋಟಿ ಹಣ ವಾಪಸ್ಸು ಬರಬೇಕು. ಮುಡಾ ಹಗರಣದಲ್ಲಿ ನಿವೇಶನ ಕೈ ತಪ್ಪಿರುವ ಫಲಾನುಭವಿಗಳಿಗೆ ನಿವೇಶನ ಕೈ ಸೇರಬೇಕು. ಇಡೀ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ಹಗರಣದಲ್ಲಿ ನೇರವಾಗಿ ಭಾಗಿಯಾಗಿರುವ ಸಿದ್ದರಾಮಯ್ಯನವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.

Latest Videos

45 ದಿನದಿಂದ ಕರೆಂಟ್ ಇಲ್ಲದೆ ಕತ್ತಲಲ್ಲಿ ಕಾಫಿನಾಡ ಅತ್ತಿಗುಂಡಿ ಗ್ರಾಮ: ಬಸ್ ಸಂಚಾರವೂ ಬಂದ್!

ಬಿಜೆಪಿ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿರುವ ಕೀರ್ತಿ ಕಾಂಗ್ರೆಸ್ ಗೇ ಸಲ್ಲಬೇಕು. ಈ ಹಿಂದೆ ಇಂತಹ ಹಲವು ಘಟನೆಗಳು ನಡೆದಿವೆ. ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರೇ ಕಾಂಗ್ರೆಸ್. ಬಂಡತನಕ್ಕೆ ಮತ್ತೊಂದು ಹೆಸರೇ ಡಿ.ಕೆ.ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದರು.

ಪ್ರಾಮಾಣಿಕರಿಗೆ ಕೈ ‘ಆತ್ಮಹತ್ಯೆ ಭಾಗ್ಯ’: ರಾಜ್ಯದಲ್ಲಿನ ಆಡಳಿತ ಪಕ್ಷದ ಪರಿಸ್ಥಿತಿ ‘ಹಿರಿಯಕ್ಕನ ಚಾಳಿ ಮನೆಮಂದಿಗೆ’ ಎಂಬ ರೀತಿಯಲ್ಲಿ ಆಗಿದೆ. ಮುಖ್ಯಮಂತ್ರಿ ಸೇರಿದಂತೆ ಮಂತ್ರಿಮಂಡಲ, ಶಾಸಕರು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಈ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರ, ಪ್ರಾಮಾಣಿಕ ಅಧಿಕಾರಿಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಭಾಗ್ಯ ಕಲ್ಪಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು. ‘ಮೈಸೂರು ಚಲೋ’ ಪಾದಯಾತ್ರೆ ವೇಳೆ ಮಾತನಾಡಿದ ವಿಜಯೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು. ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿರುವಾಗ ನಾಡಿನ ಸಾಮಾನ್ಯ ಜನರು ಸರ್ಕಾರದಿಂದ ಏನನ್ನು ನಿರೀಕ್ಷಿಸಲು ಸಾಧ್ಯ?. ಸರ್ಕಾರದ ಭ್ರಷ್ಟಾಚಾರದಿಂದ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. 

ಧರ್ಮಸ್ಥಳಕ್ಕೆ ತೆರಳುತ್ತಿದ್ದಾಗ ಅಪಘಾತ: ಬಾಲ್ಯದಿಂದಲೂ ಜೊತೆಯಾಗಿದ್ದ ಸ್ನೇಹಿತರು ಸಾವಿನಲ್ಲೂ ಒಂದಾದರು!

ಸರ್ಕಾರದ ದುರಾಡಳಿತದಿಂದ ದೊಡ್ಡ, ದೊಡ್ಡ ಕಂಪನಿಗಳು ರಾಜ್ಯ ಬಿಟ್ಟು ಹೋಗುತ್ತಿವೆ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಟೀಕಿಸಿದರು. ರಾಜ್ಯದ ಜನರ ಪರವಾಗಿ ವಿರೋಧ ಪಕ್ಷಗಳು ಪ್ರಶ್ನೆಗಳನ್ನು ಕೇಳುತ್ತಿವೆ. ಆದರೆ, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಸೇರಿ ಆಡಳಿತ ಪಕ್ಷವೇ ವಿರೋಧ ಪಕ್ಷಕ್ಕೆ ಪ್ರಶ್ನೆ ಹಾಕುತ್ತಿರುವುದು, ಸವಾಲು ಹಾಕುತ್ತಿರುವುದು ಮೂರ್ಖತನದ ಪರಮಾವಧಿ. ಈ ಪ್ರಶ್ನೆಗಳ ಹಿಂದಿನ ಅರ್ಥವೇನು?. ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಒಪ್ಪಿಸುತ್ತಿರುವ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಗರಣಗಳಲ್ಲಿಯೇ ಮುಳುಗಿದ್ದಾರೆ ಎಂದು ಟೀಕಿಸಿದರು.

click me!