
ಬೆಂಗಳೂರು(ನ.17): ವಕ್ಫ್ ಅವಾಂತರದ ವಿರುದ್ಧ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರೂಪಿಸಲು ಯೋಜಿಸಿದ್ದ ಹೋರಾಟವನ್ನು ಪಕ್ಷದ ಭಿನ್ನಮತೀಯ ನಾಯಕರು ಹೈಜಾಕ್ ಮಾಡಿ, ವಿಜಯೇಂದ್ರಗಿಂತಲೂ ಮೊದಲೇ ಅದನ್ನು ಘೋಷಿಸಿದ್ದಾರೆಯೇ ಎಂಬ ಪ್ರಶ್ನೆ ಬಿಜೆಪಿ ಪಾಳೆಯದಲ್ಲಿ ಕೇಳಿಬಂದಿದೆ.
ಉಪ ಚುನಾವಣೆ ಮುಗಿಯುತ್ತಿದ್ದಂತೆ ವಕ್ಫ್ ವಿರುದ್ಧ ಹೋರಾಟ ರೂಪಿಸಲು ಬಿ.ವೈ.ವಿಜಯೇಂದ್ರ ತೀರ್ಮಾನಿಸಿದ್ದರು. ಇದಕ್ಕಾಗಿ ತಮ್ಮ ಆಪ್ತ ವಲಯದಲ್ಲಿ ಚರ್ಚಿಸಿ ಹೋರಾಟದ ರೂಪರೇಷೆ ನಿರ್ಧರಿಸಿದ್ದರು. ವಿಧಾನಸಭಾ ಚಳಿಗಾಲದ ಅಧಿವೇಶನದ ದಿನಾಂಕ ನೋಡಿಕೊಂಡು ಹೋರಾಟ ಘೋಷಿಸುವ ಯೋಜನೆ ಹಾಕಿಕೊಂಡಿದ್ದರು ಎನ್ನಲಾಗಿದೆ.
ಸಿದ್ದರಾಮಯ್ಯರನ್ನ ಕೆಳಗಿಳಿಸಲು ಕಾಂಗ್ರೆಸ್ನಲ್ಲೇ ಕುದುರೆ ವ್ಯಾಪಾರ ನಡೆದಿದೆ: ಬಿವೈ ವಿಜಯೇಂದ್ರ
ಆದರೆ, ಅದಕ್ಕೂ ಮೊದಲೇ ಬಿಜೆಪಿಯ ಭಿನ್ನಮತೀಯ ನಾಯಕರು ಪತ್ರಿಕಾಗೋಷ್ಠಿ ನಡೆಸಿ, ರಾಜ್ಯಾದ್ಯಂತ ಸಂಚರಿಸಿ ವಕ್ಫ್ ಅವಾಂತರದ ವಿರುದ್ಧ ಹೋರಾಟ ನಡೆಸುವ ಬಗ್ಗೆ ಘೋಷಿಸಿದ್ದಾರೆ. ಹೀಗಾಗಿ ವಿಜಯೇಂದ್ರ ಆಪ್ತ ವಲಯದಲ್ಲಿದ್ದವರೇ ಯಾರೋ ಮಾಹಿತಿ ಸೋರಿಕೆ ಮಾಡಿದ್ದಾರೆಯೇ ಎಂಬ ಅನುಮಾನ ವಿಜಯೇಂದ್ರ ಟೀಮ್ನಲ್ಲಿ ವ್ಯಕ್ತವಾಗಿದೆ.
ವಕ್ಫ್ ವಿರುದ್ಧ ಪಕ್ಷವು ಅಧಿಕೃತವಾಗಿ ಹೋರಾಟ ಘೋಷಿಸುವ ಮೊದಲೇ ಬಸನಗೌಡ ಯತ್ನಾಳ್ ತಂಡ ಹೋರಾಟ ಘೋಷಿಸಿದ್ದು ವಿಜಯೇಂದ್ರ ಅವರ ತಂಡಕ್ಕೆ ಅಚ್ಚರಿ ತಂದಿದೆ. ಈ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಬಿಜೆಪಿಯ ಅಧಿಕೃತ ತಂಡ ರಚನೆಯಾಗಿ ಪ್ರಕಟವಾಯಿತಲ್ಲದೇ, ಶನಿವಾರ ಮತ್ತೆ ತಂಡದ ಪಟ್ಟಿಯ ಪರಿಷ್ಕರಣೆಯೂ ನಡೆದಿದೆ. ವಿಧಾನಮಂಡಲ ಅಧೀವೇಶನ ದಿನಾಂಕ ನೋಡದೇ ಹೋರಾಟ ಪ್ರಕಟಿಸಿರುವುದು ಹೋರಾಟದ ನಿರಂತರತೆ ಅಡ್ಡಿಯಾಗಹುದು ಎಂಬ ಅನುಮಾನ ಪಕ್ಷದಲ್ಲಿ ವ್ಯಕ್ತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.