ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಚಡ್ಡಿ ಸುಡುವ ಅಭಿಯಾನಕ್ಕೆ ಆಡಳಿತಾರೂಢ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಬೆಂಗಳೂರು (ಜೂ.06): ಸಂಘ ಪರಿವಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿರುವ ಚಡ್ಡಿ ಸುಡುವ ಅಭಿಯಾನಕ್ಕೆ ಆಡಳಿತಾರೂಢ ಬಿಜೆಪಿಯಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚಡ್ಡಿಯ ವಿಚಾರಕ್ಕೆ ಕೈಹಾಕಿದರೆ ಭಸ್ಮಾಸುರನಂತೆ ಅದೇ ಚಡ್ಡಿಯಿಂದ ಭಸ್ಮವಾಗಲಿದ್ದಾರೆ. ದೇಶದ ಬಹುಭಾಗ ಈಗಾಗಲೇ ಠೇವಣಿ ಕಳೆದುಕೊಂಡಿರುವ ಕಾಂಗ್ರೆಸ್ ರಾಜ್ಯದಲ್ಲೂ ಹೇಳ ಹೆಸರಿಲ್ಲದಂತಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಸಿ.ಟಿ.ರವಿ, ‘ಕಾಂಗ್ರೆಸ್ ಪಕ್ಷದವರಿಗೆ ಮಾಡಲು ಕೆಲಸವಿಲ್ಲ, ಚಡ್ಡಿ ಸುಟ್ಕೊಂಡು ಇರಲಿ. ನಮ್ಮ ಹಳೇ ಚಡ್ಡಿ ಇದ್ದಾವೆ ಕಳಿಸಿ ಕೊಡುತ್ತೇವೆ, ಸುಟ್ಕಂಡ್ ಇರಲಿ’ ಎಂದು ವ್ಯಂಗ್ಯವಾಡಿದ್ದಾರೆ. ‘ಉತ್ತರ ಪ್ರದೇಶದಲ್ಲೂ ಕಾಂಗ್ರೆಸ್ ಡಿಪಾಜಿಟ್ ಹೋಗಿದೆ. ಇಲ್ಲೂ ಹೋಗುತ್ತೆ. ದುರಹಂಕಾರ, ಓಲೈಕೆ ರಾಜಕಾರಣವನ್ನು ರಾಜ್ಯದ ಜನ ಸಹಿಸುವುದಿಲ್ಲ, ಕ್ಷಮಿಸುವುದಿಲ್ಲ. ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಬಿದ್ದಾಗ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಬಾಯಿ ಬಂದ್ ಆಗಿತ್ತು. ಬೆಂಕಿ ಹಾಕಿದವರೆಲ್ಲಾ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಸಹೋದರರು. ಅದಕ್ಕಾಗಿ ಬಾಯಿ ಬಂದ್ ಆಗಿತ್ತು’ ಎಂದು ಆರೋಪಿಸಿದ್ದಾರೆ.
'ನಿಮ್ನಿಮ್ಮ ಚಡ್ಡಿ ಬಿಚ್ಚಿಕೊಳ್ಳಿ ತೊಂದರೆ ಇಲ್ಲ-ಜನರ ಚಡ್ಡಿ ಬಿಚ್ಚಬೇಡಿ' ಎಂದ ಹೆಚ್ಡಿಕೆ
ಆನೆ ಹೋಗುವಾಗ ಶ್ವಾನ ಬೊಗಳಿದಂತೆ: ಸಚಿವ ಗೋವಿಂದ ಕಾರಜೋಳ ಮಾತನಾಡಿ, ‘ಆರ್ಎಸ್ಎಸ್ನವರ ಚಡ್ಡಿ ಸುಡುತ್ತೇವೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು, ಮೊದಲು ತಮ್ಮ ಚಡ್ಡಿಗಳು ಗಟ್ಟಿಗೊಳಿಸಿಕೊಳ್ಳಬೇಕು. ಸಿದ್ದರಾಮಯ್ಯನ ಚಡ್ಡಿ ಡಿ.ಕೆ.ಶಿವಕುಮಾರ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಚಡ್ಡಿ ಸಿದ್ದರಾಮಯ್ಯನವರ ಕೈಯಲ್ಲಿ ಇದೆ’ ಎಂದು ಕುಟುಕಿದ್ದಾರೆ. ಮಾತ್ರವಲ್ಲದೆ ‘ಆರ್ಎಸ್ಎಸ್ ಹಾಗೂ ಬಿಜೆಪಿ, ಬಿಜೆಪಿ ಪಕ್ಷದ ಸರ್ಕಾರದ ಮೇಲೆ ಸಿದ್ದರಾಮಯ್ಯನವರು ಮಾಡುತ್ತಿರುವ ಆರೋಪ ಆನೆ ಹೋಗುವಾಗ ಶ್ವಾನ ಬೊಗಳಿದಂತೆ’ ಎಂದು ವ್ಯಂಗ್ಯ ಮಾಡಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ‘ನೆಹರು ಪ್ರಧಾನಿಯಾಗಿದ್ದಾಗ ಆರ್ಎಸ್ಎಸ್ ಪಥಸಂಚಲನಕ್ಕೆ ಅವಕಾಶ ನೀಡಿದ್ದರೆ ಪ್ರಣಬ್ ಮುಖರ್ಜಿಯವರು ಸಂಘದ ನಾಗಪುರ ಕಚೇರಿಯ ಉದ್ಘಾಟನೆಗೆ ಬಂದಿದ್ದರು. ಇವರಿಬ್ಬರಿಗಿಂತ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೊಡ್ಡವರಲ್ಲ. ಇವರಿಬ್ಬರಿಗೆ ಈ ವಿಷಯ ಗೊತ್ತಿಲ್ಲದಿದ್ದರೆ ಇತಿಹಾಸವನ್ನು ತಿಳಿದುಕೊಳ್ಳಲಿ’ ಎಂದು ಸಲಹೆ ನೀಡಿದ್ದಾರೆ.
ಸಿದ್ದುಗೆ ಬುದ್ಧಿ ಇಲ್ಲ: ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ‘ಆರೆಸ್ಸೆಸ್ ಚಡ್ಡಿ ವಿಚಾರಕ್ಕೆ ಬಂದರೆ ಕಾಂಗ್ರೆಸ್ಸಿನವರು ಸರ್ವನಾಶವಾಗುತ್ತಾರಷ್ಟೇ. ದೇಶದಲ್ಲಿ ಈಗಾಗಲೇ ಕಾಂಗ್ರೆಸ್ ಪಕ್ಷ ಹೇಗೆ ಹೇಳ ಹೆಸರಿಲ್ಲದಂತೆ ಸರ್ವನಾಶ ಆಗಿದೆಯೋ ಅದೇ ಪರಿಸ್ಥಿತಿ ರಾಜ್ಯದಲ್ಲೂ ಬರಲಿದೆ’ ಎಂದರು. ‘ನೀವು ಚಡ್ಡಿ ಸುಟ್ಟರೆ ನಾವೇನು ಸುಮ್ಮನೇ ಕೂಡುತ್ತೇವೆಂದುಕೊಂಡಿದ್ದೀರಾ? ಚಡ್ಡಿ ಅಭಿಯಾನದ ಬಗ್ಗೆ ಮಾತನಾಡುವ ಸಿದ್ದರಾಮಯ್ಯಗೆ ತಲೆಯಲ್ಲಿ ಬುದ್ಧಿ ಇಲ್ಲ’ ಎಂದು ಮೂದಲಿಸಿದ್ದಾರೆ.
ಇನ್ನು ಕಾಂಗ್ರೆಸ್ ಅಭಿಯಾನಕ್ಕೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಸಂಸದ ಸಂಗಣ್ಣ ಕರಡಿ ಅವರು, ‘ಕಾಂಗ್ರೆಸಿಗರು ಚಡ್ಡಿ ಸುಡಲು ಹೋಗಿ ತಮ್ಮನ್ನು ತಾವೇ ಸುಟ್ಟುಕೊಳ್ಳಬಹುದು ಎಂದಿದ್ದಾರೆ. ಇದು ಅತ್ಯಂತ ಕೆಳಮಟ್ಟದ ರಾಜಕೀಯ. ಅಧೋಗತಿಗೆ ಹೋಗಿದ್ದರಿಂದಲೇ ಸಿದ್ದರಾಮಯ್ಯನವರು ಹೀಗೆ ಮಾತನಾಡುತ್ತಿದ್ದಾರೆ. ಆರುವ ಮುನ್ನ ದೀಪ ಉರಿಯುವಂತೆ ಉರಿಯುತ್ತಾರೆ’ ಎಂದು ಟೀಕಿಸಿದ್ದಾರೆ.
ಸಂಘಕ್ಕೆ ಬನ್ನಿ, ಚಡ್ಡಿ ಹಾಕಿ ನೋಡಿ: ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ‘ಎಲ್ಲರ ತಲೆ ಮೇಲೆ ಕೈ ಇಟ್ಟು ಕೊನೆಗೆ ತನ್ನ ತಲೆ ಮೇಲೆ ತಾನೇ ಕೈ ಇಟ್ಟುಕೊಂಡು ಸುಟ್ಟು ಭಸ್ಮವಾಗುವ ಭಸ್ಮಾಸುರನಂತೆ ಸಿದ್ದರಾಮಯ್ಯ ಸಹ ಚಡ್ಡಿ ವಿಚಾರಕ್ಕೆ ಕೈ ಹಾಕಿ ಅದೇ ಚಡ್ಡಿಯಿಂದಲೇ ಭಸ್ಮವಾಗಲಿದ್ದಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ. ‘ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸಿನವರಿಗೆ ನಾನು ಸವಾಲು ಹಾಕುತ್ತೇನೆ. ನೀವು ಒಮ್ಮೆ ಆರೆಸ್ಸೆಸ್ ಕಚೇರಿಗೆ ಬನ್ನಿ. ಸಂಘದ ಚಡ್ಡಿ ಹಾಕಿಕೊಳ್ಳಿ. ಆಗ ನಿಮಗೆ ಆರೆಸ್ಸೆಸ್ ಸಂಸ್ಕೃತಿ, ಸಂಸ್ಕಾರ ಏನೆಂಬುದು ಗೊತ್ತಾಗುತ್ತದೆ’ ಎಂದು ಹೇಳಿದ್ದಾರೆ.
ನಮ್ಮ ಹಳೆಯ ಚಡ್ಡಿಗಳನ್ನು ಕಳಿಸಿಕೊಡುತ್ತೇವೆ: ಕಾಂಗ್ರೆಸ್ ನಾಯಕರ ವಿರುದ್ದ ಸಿ.ಟಿ.ರವಿ ವಾಗ್ದಾಳಿ
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ಚಡ್ಡಿ ಸುಡುವ ಅಭಿಯಾನ ನಡೆಸುವುದಕ್ಕೂ ಮೊದಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ತಮ್ಮ ಚಡ್ಡಿಗಳನ್ನು ಭದ್ರ ಪಡಿಸಿಕೊಳ್ಳಬೇಕು’ ಎಂದು ತಿರುಗೇಟು ನೀಡಿದ್ದಾರೆ. ‘ಕಾಂಗ್ರೆಸ್ ನಾಯಕರ ಬಳಿ ಇರುವುದೇ ಒಂದು ಚಡ್ಡಿ. ಅದನ್ನು ಸುಟ್ಟು ಏನು ಮಾಡುತ್ತೀರಿ?’ ಎಂದು ವ್ಯಂಗ್ಯವಾಡಿದ್ದಾರೆ.