Ramanagara: ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುವ ಎಚ್ಡಿಕೆ: ಯೋಗೇಶ್ವರ್‌ ಆರೋಪ

By Govindaraj SFirst Published Dec 26, 2022, 7:23 PM IST
Highlights

ಕಳೆದ ನಾಲ್ಕುವರೆ ವರ್ಷಗಳಿಂದ ನಿಷ್ಕ್ರಿಯರಾಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುತ್ತಾರೆ ಹೋಗುತ್ತಾರೆ. ಇದರಿಂದ ಆಡಳಿತಾತ್ಮಕ ಕೆಲಸ ಕಾರ‍್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ (ಡಿ.26): ಕಳೆದ ನಾಲ್ಕುವರೆ ವರ್ಷಗಳಿಂದ ನಿಷ್ಕ್ರಿಯರಾಗಿರುವ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಕ್ಷೇತ್ರಕ್ಕೆ ಉತ್ಸವ ಮೂರ್ತಿಯಂತೆ ಬರುತ್ತಾರೆ ಹೋಗುತ್ತಾರೆ. ಇದರಿಂದ ಆಡಳಿತಾತ್ಮಕ ಕೆಲಸ ಕಾರ‍್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ವಾಗ್ದಾಳಿ ನಡೆಸಿದರು. ತಾಲೂಕಿನ ಕೋಡಂಬಳ್ಳಿಯಲ್ಲಿ ನಡೆದ ಬಿಜೆಪಿ ಸೇರ್ಪಡೆ ಕಾರ‍್ಯಕ್ರಮದಲ್ಲಿ ವಿವಿಧ ಪಕ್ಷಗಳ ಕಾರ‍್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಕ್ಷೇತ್ರದ ಶಾಸಕರಾದ ನಂತರ ಕುಮಾರಸ್ವಾಮಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. 

ಶಾಸಕರಾಗಿ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ ಎಂದು ಕಿಡಿಕಾರಿದರು. ತಾಲೂಕು ಆಡಳಿತ ಯಂತ್ರದ ಮೇಲೆ ಕುಮಾರಸ್ವಾಮಿಗೆ ಯಾವುದೇ ಹಿಡಿತವಿಲ್ಲ. ಇದರಿಂದಾಗಿ ಆಡಳಿತ ಯಂತ್ರ ಹಳಿತಪ್ಪಿದ್ದು, ಜನ ಪರಿತಪಿಸುವಂತಾಗಿದೆ. ಕ್ಷೇತ್ರದಿಂದ ಆಯ್ಕೆಯಾದ ನಂತರ ಅವರು ಒಂದೇ ಒಂದು ಸಭೆಯನ್ನು ನಡೆಸಿಲ್ಲ. ಇದರಿಂದ ಕ್ಷೇತ್ರದ ಜನರ ಕೆಲಸ ಕಾರ‍್ಯಗಳು ಸರಿಯಾಗಿ ಆಗುತ್ತಿಲ್ಲ ಎಂದು ದೂರಿದರು.

ಎಚ್‌.ಡಿ.ಕುಮಾರಸ್ವಾಮಿಗೆ ಸೋಲಿನ ಭಯ ಕಾಡ್ತಿದೆ: ಸಿ.ಪಿ.ಯೋಗೇಶ್ವರ್‌

ಒಂದು ನಿವೇಶನ ನೀಡಲಿಲ್ಲ: 2018ರ ಚುನಾವಣೆಯಲ್ಲಿ ಕುಮಾರಸ್ವಾಮಿ ಭರವಸೆಗಳ ಸುರಿಮಳೆಯನ್ನೇ ಸುರಿಸಿದ್ದರು. ಅವರ ಮಾತುಗಳನ್ನು ನಂಬಿದ ಕ್ಷೇತ್ರದ ಮತದಾರರು ಕುಮಾರಸ್ವಾಮಿಗೆ ಮತ ನೀಡಿ ಅವರನ್ನು ಗೆಲ್ಲಿಸಿದ್ದರು. ಆದರೆ, ಜನ ನಿರೀಕ್ಷಿಸಿದಂತೆ ತಾಲೂಕಿನಲ್ಲಿ ಕೆಲಸ ಕಾರ‍್ಯಗಳು ಆಗಲಿಲ್ಲ. ಕ್ಷೇತ್ರದಿಂದ ಆಯ್ಕೆಯಾಗಿ ಸಿಎಂ ಆದ ಅವರು ಬಡವರಿಗೆ ಒಂದೇ ಒಂದು ನಿವೇಶನ ನೀಡಲಿಲ್ಲ. ಒಂದೇ ಒಂದು ಮನೆಯನ್ನು ಮಂಜೂರು ಮಾಡಲಿಲ್ಲ ಎಂದು ಕಿಡಿಕಾರಿದರು.

ತಾಲೂಕಿನ ಸಮಗ್ರ ಅಭಿವೃದ್ಧಿಯ ಕನಸು ಕಂಡಿದ್ದ ನಾನು ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಬಸವರಾಜ ಬೊಮ್ಮೆಯವರಿಗೆ ದುಂಬಾಲು ಬಿದ್ದು ತಾಲೂಕಿಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಿದೆ. ಆದರೂ ಸಹ ಕ್ಷೇತ್ರದ ಮತದಾರರು ನನ್ನ ಬೆಂಬಲಿಸಲಿಲ್ಲ. ನಾನು ಕತ್ತೆಯಂತೆ ದುಡಿದರೂ ಕ್ಷೇತ್ರದ ಜನ ನನ್ನ ಗೆಲ್ಲಿಸಲಿಲ್ಲ. ನಾನೇನು ತಪ್ಪು ಮಾಡಿದೆ ಎಂದು ನನನ್ನು ಸೋಲಿಸಿದ್ದೀರಿ ಎಂದು ಪ್ರಶ್ನಿಸಿದ ಅವರು ಇಷ್ಟುಕೆಲಸ ಮಾಡಿದರೂ ನೀವು ಸೋಲಿಸಿದ ನೋವು ಇನ್ನು ನನ್ನ ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸೋತರು ಅನುದಾನ ತಂದೆ: ಕಳೆದ ಚುನಾವಣೆಯಲ್ಲಿ ಸೋತರು ಸಹ ವಿಧಾನಪರಿಷತ್‌ ಸದಸ್ಯನಾಗಿ ಅನುದಾನ ತರಲು ಶ್ರಮಿಸಿದ್ದೇನೆ. ಯಾವುದೇ ಅನುದಾನ ತರಲು ಹೋದರು ಅದಕ್ಕೊಂದು ಅರ್ಜಿ ಹಾಕಿಸುವ ಕುಮಾರಸ್ವಾಮಿ ಕ್ಷೇತ್ರದ ಅಭಿವೃದ್ಧಿಗೆ ತೊಡರುಗಾಲು ಹಾಕುತ್ತಿದ್ದಾರೆ. ಬೇರೆ ಕಡೆಗಳಿಂದ ಗೂಂಡಾಗಳನ್ನು ಕರೆಸಿ ಗಲಭೆ ಮಾಡಿಸುವ ಮುಖಾಂತರ ಕ್ಷೇತ್ರದಲ್ಲಿ ನಾನು ಅಭಿವೃದ್ಧಿ ಕಾರ‍್ಯಗಳನ್ನು ಮಾಡಲು ಬಿಡುತ್ತಿಲ್ಲ. ತಾವೂ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು. ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಈ ತಾಲೂಕಿನ ರಸ್ತೆಗಳನ್ನು ಬಂಗಾರ ಮಾಡಿದೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ತಾಲೂಕಿನಲ್ಲಿರುವ ಗ್ರಾಮಗಳ ಹೆಸರೇ ಅವರಿಗೆ ಗೊತ್ತಿಲ್ಲ. 

ನಿಮ್ಮ ಮನೆ ಮಗನಾದ ನಾನು ಕ್ಷೇತ್ರದ ಅಭಿವೃದ್ಧಿಗಾಗಿ ಕೂಲಿ ಮಾಡುತ್ತಿದ್ದೇನೆ. ಆದರೆ ಮಾಡಿದ್ದೆಲ್ಲ ನಾನೇ ಎಂದು ಕ್ರೆಡಿಟ್‌ ತೆಗೆದುಕೊಳ್ಳಲು ಕುಮಾರಸ್ವಾಮಿ ಮುಂದಾಗುತ್ತಾರೆ ಎಂದು ಅಳಲು ತೋಡಿಕೊಂಡರು. ರಾಜ್ಯದಲ್ಲಿ ಬಿಜೆಪಿ ಪಕ್ಷದ ಪರವಾದ ಅಲೆ ಎದ್ದಿದೆ. ಹಳೇ ಮೈಸೂರು ಭಾಗದಲ್ಲಿ ಸಹ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಚನ್ನಪಟ್ಟಣ ಸೇರಿದಂತೆ ಹಳೇ ಮೈಸೂರು ಭಾಗದ ಹಲವಾರು ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಲಿದೆ. ಇದೇ ವೇಲೆ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರನ್ನು ಯೋಗೇಶ್ವರ್‌ ಪಕ್ಷದ ಶಾಲು ಹಾಕಿ ಸ್ವಾಗತಿಸಿದರು. ಕಾರ‍್ಯಕ್ರಮಕ್ಕೂ ಮುನ್ನಾ ತಾಲೂಕಿನ ಹೊಂಗನೂರು ಗ್ರಾಮದಲ್ಲಿ ಬೃಹತ್‌ ಬೈಕ್‌ರಾರ‍ಯಲಿ ನಡೆಸಲಾಯಿತು. ಕಾರ‍್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌ ಇತರರಿದ್ದರು.

ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಪಿ.ಯೋಗೇಶ್ವರ್‌

ಬಿಜೆಪಿ ಪರವಾಗಿಯೇ ಜನಾರ್ಧನರೆಡ್ಡಿ: ಮಾಜಿ ಸಚಿವ ಗಾಲಿ ಜನಾರ್ಧನ್‌ ರೆಡ್ಡಿ ಹೊಸ ಪಕ್ಷ ಘೋಷಿಸಿದ್ದರೂ, ವರಿಷ್ಠರೊಂದಿಗೆ ಮಾತನಾಡಿದ ಬಳಿಕ ಅರ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸುತ್ತಾರೆ ಎಂಬ ಆಶಾಭಾವನೆ ಇದೆ. ಜನಾರ್ಧನರೆಡ್ಡಿ ಬಿಜೆಪಿಯಲ್ಲೇ ಇರಬೇಕು ಎಂದು ಬಯಸಿದ್ದರು. ಈ ಕುರಿತು ಹಲವಾರು ಬಾರಿ ನನ್ನ ಬಳಿ ಚರ್ಚೆ ನಡೆಸಿದ್ದರು. ಆದರೀಗ ಅವರು ಹೊಸ ಪಕ್ಷ ಕಟ್ಟುವ ಘೋಷಣೆ ಮಾಡಿದ್ದಾರೆ. ಆದರೂ ಅವರು ಬಿಜೆಪಿ ಪರವಾಗಿಯೇ ಇದ್ದಾರೆ. ಮುಖ್ಯಮಂತ್ರಿಗಳು ದೆಹಲಿಗೆ ಹೋದಾಗ ಈ ವಿಚಾರ ಪ್ರಸ್ತಾಪಿಸುತ್ತಾರೆ ಅನಿಸುತ್ತೆ. ಜನಾರ್ಧನರೆಡ್ಡಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆ ಆಗುತ್ತಾರೆ. ಅವರು ಬಹಳ ವರ್ಷಗಳಿಂದ ಪಕ್ಷದಿಂದ ದೂರ ಇದ್ದರು ಎಂದು ವಿಧಾನ ಪರಿಷತ್‌ ಸದಸ್ಯ ಯೋಗೇಶ್ವರ್‌ ತಿಳಿಸಿದರು.

click me!